ಕಾರಟಗಿ: ತುಂಗಭದ್ರಾ ಎಡದಂಡೆ ಕಾಲುವೆಗೆ ಏ. 20ರವರೆಗೆ 3,800 ಕ್ಯೂಸೆಕ್ ನೀರು ಹರಿಸುವಂತೆ ಒತ್ತಾಯಿಸಿ ನೀರು ಬಳಕೆದಾರರ ಸಂಘ ಹಾಗೂ ವಿವಿಧ ರೈತ ಸಂಘಗಳ ನೇತೃತ್ವದಲ್ಲಿ ಪಟ್ಟಣದ ಕನಕದಾಸ ವೃತ್ತದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.


ಎರಡನೇ ಬೆಳೆಯ ಭತ್ತದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಟೇಲೆಂಡ್ ಭಾಗದ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಬಿಸಿಲಿನ ತಾಪಕ್ಕೆ ಬೆಳೆಗಳು ಒಣಗುತ್ತಿವೆ. ಹೀಗಾಗಿ ರೈತರ ಕಷ್ಟಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸೂಕ್ತ ರೀತಿಯಲ್ಲಿ ಫಸಲು ರೈತರ ಕೈಸೇರಬೇಕಾದರೆ ಏ. 20 ವರೆಗೆ ಎಡದಂಡೆ ಕಾಲುವೆಗೆ ನೀರು ಹರಿಸಬೇಕು.
ಈ ಬಗ್ಗೆ ಈಗಾಗಲೇ ಜಿಲ್ಲೆಯ ಶಾಸಕರು ಹಾಗೂ ಸಂಸದರು ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೇ, ಭದ್ರಾ ಜಲಾಶಯದಲ್ಲಿ ಸಾಕಷ್ಟು ನೀರಿದ್ದು, 6 ಟಿಎಂಸಿ ತುಂಗಭದ್ರಾ ಜಲಾಶಯಕ್ಕೆ ಹರಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ರೈತರ ಬೆಳೆಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಗಂಗಾವತಿ, ಕಾರಟಗಿ, ಸಿಂಧನೂರು, ಮಾನ್ವಿ, ಸಿರವಾರ, ಮಸ್ಕಿ ತಾಲೂಕುಗಳ ರೈತರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಬಳಿಕ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮೂಲಕ ಜಲ ಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್ಗೆ ಮನವಿ ಸಲ್ಲಿಸಲಾಯಿತು.
ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಸಂಗಮೇಶ್ ಗೌಡ, ತಿಮ್ಮಾಪುರ ಬಸವರಾಜ ಕುಲಕರ್ಣಿ, ಮಲ್ಲೇಶಪ್ಪ ಸಾಹುಕಾರ ಮುಕ್ಕುಂದ, ದಶರಥ ಚೆನ್ನಳ್ಳಿ, ಬೋಳಾ ಶ್ರೀನಿವಾಸ್, ನಾಗನಗೌಡ, ಮಾಜಿ ಶಾಸಕ ಬಸವರಾಜ ದಢೇಸುಗೂರು, ರೈತ ಮುಖಂಡರಾದ ಶರಣಪ್ಪ ದೊಡ್ಡಮನಿ, ಶರಣಪ್ಪ ಕೊತ್ವಾಲ್, ನಾಗನಗೌಡ ಸಿದ್ರಾಂಪುರ, ಪ್ರಸಾದ್ ದೇವಿಕ್ಯಾಂಪ್, ಕುರಿ ಮೌನೇಶ್, ಶರಣೇಗೌಡ ಮಾಲಿ ಪಾಟೀಲ್, ಪರಮೇಶಗೌಡ, ಮನೋಹರ ಗೌಡ ಸೇರಿ ಹತ್ತಾರು ಗ್ರಾಮಗಳ ರೈತರು ಇದ್ದರು.
ನೀರಾವರಿ ಇಲಾಖೆ ಅಧಿಕಾರಿಗಳಿಗೆ ಘೇರಾವ್: ಪ್ರತಿಭಟನಾ ಸ್ಥಳಕ್ಕಾಗಮಿಸಿದ ನೀರಾವರಿ ಇಲಾಖೆ ಅಧಿಕಾರಿ ಕಿರಣ್ ಕುಮಾರ್ ಸೇರಿ ಇತರ ಅಧಿಕಾರಿಗಳನ್ನು ರೈತರು ಘೇರಾವ್ ಹಾಕಿದರು. ಟೇಲೆಂಡ್ ಭಾಗಕ್ಕೆ ಸಮರ್ಪಕ ನೀರು ದೊರೆಯುತ್ತಿಲ್ಲ. ಪರಿಸ್ಥಿತಿ ಹೀಗಾದರೆ ಹೇಗೆ? ಸಾವಿರಾರು ರೂ. ವ್ಯಯಿಸಿ ಬೆಳೆ ಬೆಳೆಯಲಾಗಿದೆ.
ಇದು ಹೀಗೆ ಮುಂದುವರಿದರೆ ನಮ್ಮ ಪರಿಸ್ಥಿತಿ ಏನು? ಮುಂದಿನ ದಿನಗಳಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ರೈತರಿಗೆ ಸಮಸ್ಯೆ ಆಗದ ರೀತಿ ಸೂಕ್ತ ಕ್ರಮವಹಿಸಿ ಟೇಲೆಂಡ್ ಭಾಗಕ್ಕೂ ನೀರು ತಲುಪಿಸುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಘೇರಾವ್ ಹಾಕಿದರು.