ರಾಮನಗರ: ಕನಕಪುರ ತಾಲ್ಲೂಕಿನ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ವಿವಿಧ ಸಂಘಟನೆಗಳು ಇಂದು ಕನಕಪುರ ಚಲೋ ಕಾರ್ಯಕ್ರಮ ಹಮ್ಮಿಕೊಂಡಿವೆ.
ಕನಕಪುರದ ಅಯ್ಯಪ್ಪಸ್ವಾಮಿ ದೇಗುಲದಿಂದ ಬೆಳಿಗ್ಗೆ 12ಕ್ಕೆ ಮೆರವಣಿಗೆ ಆರಂಭಗೊಳ್ಳಲಿದೆ. ಅಲ್ಲಿಂದ ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಭಟನೆ ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಮೆರವಣಿಗೆಯ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಭದ್ರತೆ ಕಲ್ಪಿಸಿದ್ದಾರೆ. ರಾಮನಗರ ಎಸ್ಪಿ ಅನೂಪ್ ಶೆಟ್ಟಿ, ಒಬ್ಬರು ಎಎಸ್ ಪಿ, ಮೂವರು ಡಿವೈಎಸ್ಪಿ, 14 ಸಿಪಿಐ ಜೊತೆಗೆ 700 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದಲ್ಲದೆ 4 ಕೆಎಸ್ ಆರ್ ಪಿ, 7 ಡಿಎಆರ್ ತುಕಡಿಗಳು ಈಗಾಗಲೇ ಕನಕಪುರದಲ್ಲಿ ಬೀಡು ಬಿಟ್ಟಿವೆ. 340 ಗೃಹ ರಕ್ಷಕರೂ ಕಾವಲು ಕಾಯಲಿದ್ದಾರೆ. ಸದ್ಯ ಕನಕಪುರದ ರಸ್ತೆಗಳಲ್ಲಿ ಪೊಲೀಸರೇ ಹೆಚ್ಚು ಕಾಣತೊಡಗಿದ್ದಾರೆ.