| ಹರ್ಷವರ್ಧನ್ ಬ್ಯಾಡನೂರು
ರಜಿನಿಕಾಂತ್ ನಟಿಸಿರುವ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಹಿಟ್ ಸಿನಿಮಾ “ಜೈಲರ್’. ಇತ್ತೀಚೆಗಷ್ಟೆ ಟೀಸರ್ ಮೂಲಕ “ಜೈಲರ್ 2′ ಘೋಷಿಸಲಾಗಿದ್ದು, ಅದ್ಭುತ ಆ್ಯಕ್ಷನ್ ಸನ್ನಿವೇಶಗಳಿರುವ ಟೀಸರ್ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ಅಂದರೆ ಈ ಟೀಸರ್ನ ಸಾಹಸ ದೃಶ್ಯಗಳನ್ನು ಕನ್ನಡದ “ಜೇಮ್ಸ್’, ಬಘೀರ, ಭೈರತಿ ರಣಗಲ್, “ಯುಐ’, “ಮ್ಯಾಕ್ಸ್’ ಜತೆಗೆ ಮಲಯಾಳಂನ “ಧೂಮಂ’, “ಆವೇಷಂ’ ಸಿನಿಮಾಗಳಿಗೆ ಸಾಹಸ ಸಂಯೋಜಿಸಿರುವ ಕನ್ನಡದ ಆ್ಯಕ್ಷನ್ ಡೈರೆಕ್ಟರ್ ಚೇತನ್ ಡಿಸೋಜಾ ಸಂಯೋಜಿಸಿದ್ದಾರೆ. “ಜೈಲರ್ 2′ ಬಗ್ಗೆ ಅವರು, “”ಆವೇಷಂ’ ಆ್ಯಕ್ಷನ್ ನೋಡಿ, ನಿರ್ದೇಶಕ ನೆಲ್ಸನ್ ತಂಡದವರು ಸಂಪರ್ಕಿಸಿದ್ದರು. ಹೈದರಾಬಾದ್ನಲ್ಲಿ ನೆಲ್ಸನ್ರನ್ನು ಭೇಟಿಯಾದೆ. ಅವರು ಟೀಸರ್ ಬಗ್ಗೆ ತಿಳಿಸಿದರು. ನಮ್ಮ ಹುಡುಗರು ನರ್ವಸ್ ಆಗಬಹುದು ಅಂತ ರಜಿನಿ ಸರ್ ಸಿನಿಮಾ ಟೀಸರ್ ಅಂತ ಹೇಳಿರಲಿಲ್ಲ. ಲೊಕೇಷನ್ನಲ್ಲಿ ರಿಹರ್ಸಲ್ಗೆ ಹೋದಾಗ ಅವರ ಸಿನಿಮಾ ಅಂತ ಗೊತ್ತಾಗಿ ಎಲ್ಲರೂ ತುಂಬ ಎಕ್ಸೈಟ್ ಆದರು. ಮುಂಬೈ, ಬೆಂಗಳೂರು, ಚೆನ್ನೈನ 50 ಜನರ ತಂಡ ಅಲ್ಲಿಗೆ ತೆರಳಿದ್ದೆವು. ಒಂದು ದಿನ ರಿಹರ್ಸಲ್ಸ್ ನಡೆಸಿ, ಮೂರು ದಿನಗಳ ಕಾಲ ಟೀಸರ್ ಶೂಟಿಂಗ್ ಮಾಡಿದೆವು’ ಎಂದು ಮಾಹಿತಿ ನೀಡುತ್ತಾರೆ.
ಟೀಸರ್ಗೆ ಸಿನಿಮಾ ಖರ್ಚು!
“ಕೇವಲ ಮೂರು ದಿನ ಚಿತ್ರೀಕರಣ ನಡೆಸಿದರೂ, ಅತ್ಯಾಧುನಿಕ ಕ್ಯಾಮರಾ ಮತ್ತು ತಂತ್ರಜ್ಞಾನ, ಸೆಟ್, ಅನುಭವಿ ತಂಡ ಸೇರಿದ್ದ ಕಾರಣ, ಟೀಸರ್ ಬಜೆಟ್ ಕೂಡ ಅದ್ದೂರಿಯಾಗಿತ್ತು’ ಎನ್ನುವ ಚೇತನ್, “ಬಹುಶಃ ಒಂದು ಸಿನಿಮಾ ಬಜೆಟ್ನಲ್ಲಿ ಟೀಸರ್ ಚಿತ್ರೀಕರಿಸಿದ್ದೇವೆ. ಕೊನೆಯ ಶಾಟ್ಅನ್ನು ಮೂರು ಫ್ಯಾಂಟಮ್ ಕ್ಯಾಮರಾ ಮತ್ತು ಒಂದು ರೋಬೋಟಿಕ್ ಕ್ಯಾಮರಾ ಬಳಸಿ ಶೂಟಿಂಗ್ ನಡೆಸಿದೆವು’ ಎಂದು ಹೇಳಿಕೊಳ್ಳುತ್ತಾರೆ.
ಕನ್ನಡಿಗರ ಮೇಲೆ ರಜಿನಿ ಒಲವು:
ರಜಿನಿಕಾಂತ್ ಜತೆ ಕೆಲಸ ಮಾಡಿದ ಅನುಭವ ಹಂಚಿಕೊಳ್ಳುವ ಚೇತನ್, “ಅವರು ಹೊರಗೆ ಮಾತ್ರ ಸೂಪರ್ಸ್ಟಾರ್. ಹತ್ತಿರದಿಂದ ನೋಡಿದರೆ ಅವರೊಬ್ಬ ಸರಳ ವ್ಯಕ್ತಿ ಅಂತ ಗೊತ್ತಾಗುತ್ತದೆ. ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ನಾನು ಕನ್ನಡಿಗ, ಮಂಗಳೂರಿನವನು ಅಂತ ಗೊತ್ತಾಗಿ ಖುಷಿಯಿಂದ ಓಹ್ ಐಶ್ವರ್ಯಾ ರೈ ಊರಿನವರಾ ಅಂತ ಕನ್ನಡದಲ್ಲೇ ಮಾತನಾಡಿಸಿದರು’ ಎನ್ನುತ್ತಾರೆ. ಹಾಗೇ ಟೀಸರ್ನಲ್ಲಿ ರಜಿನಿ ಬದಲಿಗೆ ಡ್ಯೂಪ್ ಬಳಸಿದ್ದಾರೆ ಎಂಬ ಗಾಳಿಸುದ್ದಿಗೆ ಬ್ರೇಕ್ ಹಾಕುವ ಅವರು, “ನಾವೆಲ್ಲೂ ಡ್ಯೂಪ್ ಬಳಸಿಲ್ಲ. ಪ್ರತಿಯೊಂದು ಶಾಟ್ನಲ್ಲೂ ರಜಿನಿ ಸರ್ ಇದ್ದಾರೆ. ಹಾಗೇ ವಿಎಫ್ಎಕ್ಸ್ ಬಳಸದೇ ಎಲ್ಲವನ್ನೂ ನೈಜವಾಗಿ ಚಿತ್ರೀಕರಿಸಿದ್ದೇವೆ’ ಎಂದು ಸ್ಪಷ್ಟನೆ ನೀಡುತ್ತಾರೆ.
ಮುನ್ನೆಚ್ಚರಿಕೆ ಮುಖ್ಯ:
ಸಾಹಸ ಸನ್ನಿವೇಶಗಳ ಚಿತ್ರೀಕರಣದ ವೇಳೆ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಸಾಹಸ ಕಲಾವಿದರ ಜೀವಕ್ಕೆ ಕುತ್ತು ಬರುವ ಸಾಧ್ಯತೆಗಳಿರುತ್ತವೆ. ಹೀಗಾಗಿ “ಸಾಹಸ ನಿರ್ದೇಶಕರು ತುಂಬ ಎಚ್ಚರಿಕೆಯಿಂದ ಫೈಟ್ಸ್ ಪ್ಲ್ಯಾನ್ ಮಾಡಬೇಕಾಗುತ್ತದೆ’ ಎನ್ನುವ ಚೇತನ್, “ಅದೇ ಕಿಕ್, ಫೈಟ್, ಸ್ಟಂಟ್ಗಳಿರುತ್ತವೆ. ಆದರೆ, ಅದನ್ನು ನಾವು ತೋರಿಸುವ ರೀತಿ ವಿಭಿನ್ನವಾಗಿರುತ್ತದೆ. ಸಾಹಸ ನಿರ್ದೇಶನ ದೊಡ್ಡ ಜವಾಬ್ದಾರಿ. ರೋಪ್ ಸ್ಟಂಟ್, ಫೈರ್, ವಾಹನಗಳಲ್ಲಿ ಚೇಸ್, ಬ್ಲಾಸ್ಟ್ ಅಂತ ಸಾಕಷ್ಟು ಡೇಂಜರಸ್ ಸ್ಟಂಟ್ಸ್ ಇರುತ್ತವೆ. ಹೀಗಾಗಿ ತುಂಬ ಮುನ್ನೆಚ್ಚರಿಕೆ ವಹಿಸಬೇಕು. ಅತ್ಯುತ್ತಮ ಗುಣಮಟ್ಟದ ಹಾರ್ನೆಸ್, ರೋಪ್ ಬಳಸಬೇಕು. ಒಂದು ಸನ್ನಿವೇಶದಲ್ಲಿ ಒಬ್ಬರ ಜೀವ ಪಣಕ್ಕಿದೆ ಎಂದ ಮೇಲೆ, ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಾನು ಸಾಫ್ಟ್ವೇರ್ ಡೆವೆಲಪರ್ ಆಗಿದ್ದ ಕಾರಣ ನೂತನ ತಂತ್ರಜ್ಞಾನಗಳನ್ನು ಗಮನಿಸುತ್ತಿರುತ್ತೇನೆ. ಅದಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತೇನೆ’ ಎಂದು ಮಾಹಿತಿ ನೀಡುತ್ತಾರೆ.
ಮುಂದಿನ ಸಿನಿಮಾಗಳು:
ಚೇತನ್ ಡಿಸೋಜಾ ಸದ್ಯ ಕನ್ನಡದಲ್ಲಿ ಶಿವಣ್ಣ ನಟಿಸುತ್ತಿರುವ 131ನೇ ಚಿತ್ರ, ಶ್ರೀಮುರಳಿ ನಾಯಕನಾಗಿರುವ “ಪರಾಕ್’, ತೆಲುಗಿನ ವಿಜಯ್ ದೇವರಕೊಂಡ ನಾಯಕನಾಗಿರುವ 12ನೇ ಸಿನಿಮಾ, ಸಾಯಿ ದುರ್ಗಾ ತೇಜ್ ನಟಿಸುತ್ತಿರುವ “ಸಂಬರಾಲ ಯೇತಿ ಗಟ್ಟು’ ಸೇರಿ ಹಲವು ಸಿನಿಮಾಗಳ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.