ಕನಕಗಿರಿ: ಜಿಲ್ಲೆಯಲ್ಲಿ ಹಲವು ಪ್ರವಾಸಿ ಹಾಗೂ ಧಾರ್ಮಿಕ ಪ್ರಸಿದ್ಧ ಸ್ಥಳಗಳಿದ್ದು, ಇವುಗಳ ವೀಕ್ಷಣೆಗೆ ಬರುವವರಿಗೆ ಆ ಸ್ಥಳಗಳ ಇತಿಹಾಸ ಪರಿಚಯಿಸುವ ನಿಟ್ಟಿನಲ್ಲಿ ಆಯ್ದ 32 ತಾಣಗಳಲ್ಲಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಮಾಹಿತಿ ಫಲಕ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ಜಿಲ್ಲೆಯಲ್ಲಿ ಶಿಲಾಯುಗ, ರಾಮಾಯಣ ಕಾಲದ ಸ್ಮಾರಕಗಳಿಂದ ಆರಂಭವಾಗಿ ಚಾಲುಕ್ಯರು, ವಿಜಯನಗರ ಅರಸರು, ಹುಲಿಹೈದರ ಗುಜ್ಜಲ ವಂಶಸ್ಥರವರೆಗಿನ ಹಲವು ಐತಿಹಾಸಿಕ ಸ್ಮಾರಕಗಳು, ದೇವಸ್ಥಾನಗಳು, ಕೋಟೆ-ಕೊತ್ತಲಗಳು, ಜಲಪಾತದಂಥ ಪ್ರವಾಸಿ ತಾಣಗಳು ಇವೆ. ಆದರೆ, ಆನೆಗೊಂದಿ ಭಾಗದಲ್ಲಿನ ಸ್ಮಾರಕಗಳನ್ನು ಹೊರೆತುಪಡಿಸಿ ಉಳಿದ ಕಡೆಗಳಲ್ಲಿ ಸ್ಥಳದ ಮಾಹಿತಿ ತಿಳಿಸುವ ಯಾವುದೇ ಫಲಕಗಳು ಇದ್ದಿರಲಿಲ್ಲ. ಹೀಗಾಗಿ ಈ ಸ್ಮಾರಕಗಳಿಗೆ, ದೇವಾಲಯಗಳಿಗೆ ಭೇಟಿ ನೀಡುವ ಸ್ಥಳೀಯ ಹಾಗೂ ವಿದೇಶ ಪ್ರವಾಸಿಗರಿಗೆ ಸ್ಥಳದ ಇತಿಹಾಸ ತಿಳಿಯುತ್ತಿರಲಿಲ್ಲ.
ಜಿಲ್ಲೆಯು ಬ್ರ್ಯಾಂಡ್ ಕೊಪ್ಪಳ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ನಲಿನ್ ಅತುಲ್, 36 ಸ್ಥಳಗಳನ್ನು ಗುರುತಿಸಿ ಬೆಂಗಳೂರಿನ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ನಿರ್ದೇಶಕರಿಗೆ ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಜ.16ರಂದು ಪತ್ರ ಬರೆದಿದ್ದರು. ಸದ್ಯ 32 ಸ್ಥಳಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ಮೇಲ್ ಬಂದಿದ್ದು, ಅದರಂತೆ 32 ಸ್ಥಳಗಳಲ್ಲಿ ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದಿಂದ ನಾಮಫಲಕಗಳನ್ನು ಅಳವಡಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ.
ಎಲ್ಲೆಲ್ಲಿ ಜೋಡಣೆ: ಜಿಲ್ಲೆಯ ಪ್ರಸಿದ್ಧ ಅಂಜನಾದ್ರಿ ಬೆಟ್ಟ, ಹಿರೇಬೆಣಕಲ್ ಬೃಹತ್ ಶಿಲಾಯುಗದ ಸಮಾಧಿ ನೆಲೆ, ಶಕ್ತಿ ದೇವತೆ ಹುಲಿಗೆಮ್ಮ ದೇವಸ್ಥಾನ, ವೆಂಕಟಗಿರಿಯ ವೆಂಕಟೇಶ್ವರ ದೇವಸ್ಥಾನ, ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನ, ಅಚ್ಚಮ್ಮ ಬಾವಿ, ವೆಂಕಟಪತಿ ಬಾವಿ, ನವಲಿಯ ಭೋಗಾಪುರೇಶ್ವರ ದೇವಸ್ಥಾನ, ಕಲ್ಲೂರು ಕಲ್ಲಿನಾಥ ದೇವಾಲಯ, ಕುಕನೂರು ಮಹಮಾಯ ದೇವಾಲಯ, ಕಬ್ಬರಗಿ ಜಲಪಾತ, ಹೇಮಗುಡ್ಡ ಕೋಟೆ, ಗಂಡುಗಲಿ ಕುಮಾರರಾಮ ಬೆಟ್ಟ, ವಾಲಿಕಿಲ್ಲಾ ದುರ್ಗಾ, ಕರಮುಡಿಯ ದೇವಸ್ಥಾನಗಳು, ಇರಕಲ್ಗಡ ಕೋಟೆ, ಶಿವಪುರ ಕೋಟೆ, ಪುರದ ಕೋಟಿ ಲಿಂಗ ದೇವಸ್ಥಾನ, ಕುಷ್ಟಗಿ ತಾಲೂಕಿನ ಚಂದಾಲಿಂಗೇಶ್ವರ ದೇವಸ್ಥಾನ, ವಾಣಿಭದ್ರೇಶ್ವರ ಬೆಟ್ಟ, ಗಂಗಾವತಿಯ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನ, ದೇವಘಾಟ್, ಆನೆಗೊಂದಿ ಗ್ರಾಮ, ಯಲಬುರ್ಗಾ ತಾಲೂಕಿನ ತೋಪಿನ ತಿಮ್ಮಪ್ಪನ ಬಾವಿ, ಬಹದ್ದೂರ್ ಬಂಡೆ ಕೋಟೆ, ಕೊಪ್ಪಳ ಕೋಟೆ, ಕಿನ್ನಾಳ ಕಲೆ, ಪಂಪಾಸರೋವರ, ಕೊಪ್ಪಳದ ಅಶೋಕ ಶಾಸನ, ಮಳೆಮಲ್ಲೇಶ್ವರ ಬೆಟ್ಟ, ಋಷ್ಯಮುಖ ಪರ್ವತ, ಸಣಾಪುರ ಅಣೆಕಟ್ಟೆಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಕೆ ಮಾಡಲಾಗಿದೆ.