
ಕಂಪ್ಲಿ: ಕನ್ನಡಿಗರು ಪರಭಾಷಾ ಸಹಿಷ್ಣುಗಳಾಗಿದ್ದರಿಂದ ಕನ್ನಡ ಭಾಷೆಯ ಮೇಲೆ ನೆರೆಹೊರೆ ಭಾಷೆಗಳು ನಿರಂತರ ಪ್ರಭಾವ ಬೀರುತ್ತಿವೆ ಎಂದು ತಾಪಂ ಇಒ ಮಲ್ಲನಗೌಡ್ರು ಕೆ.ಎಸ್. ಹೇಳಿದರು.
ಇಲ್ಲಿನ ಗುರುಮಠದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲೇಖಕ ಬಂಗಿ ದೊಡ್ಡ ಮಂಜುನಾಥ ರಚಿಸಿದ ಅರಳು ಮಲ್ಲಿಗೆ ಕಾದಂಬರಿ ಲೋಕಾರ್ಪಣಾ ಸಮಾರಂಭದಲ್ಲಿ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡಿಗರು ಕಟ್ಟಾ ಕನ್ನಡ ಭಾಷಾಭಿಮಾನಿಗಳಾಗಬೇಕಿದೆ. ಕರ್ತೃ ಅಳಿದರೂ ಕೃತಿ ಉಳಿಯುವುದರಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕಾದಂಬರಿ ಓದುವಿಕೆಯಿಂದ ಬದುಕಿನ ದೃಷ್ಟಿಕೋನ ಬದಲಾಯಿಸಿಕೊಳ್ಳಲು ಸಾಧ್ಯ ಎಂದರು.
ಬಳ್ಳಾರಿಯ ಸತ್ಯಮ್ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಬಾಷಾ ಕಾದಂಬರಿ ಕುರಿತು ಮಾತನಾಡಿ, ಅರಳು ಮಲ್ಲಿಗೆ ಕಾದಂಬರಿಯು ಪ್ರೀತಿ ಪ್ರೇಮದ ಜೊತೆ ಬದುಕನ್ನು ಕಟ್ಟಿಕೊಳ್ಳುವ ಜವಾಬ್ದಾರಿಯನ್ನು ಎಚ್ಚರಿಸುತ್ತದೆ. ಯುವಜನತೆ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಪ್ರೀತಿ ಪ್ರೇಮ ಕುರಿತು ಎಚ್ಚರಿಕೆವಹಿಸಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಕನ್ನಡ ಸಾಹಿತ್ಯಕ್ಕೆ ಜೀವನವನ್ನು ಪ್ರೀತಿಸುವ, ಬದುಕಿಸುವ ಶಕ್ತಿ ಇದೆ ಎಂದರು.
ಶ್ರೀರಾಮ ಪಿರಾಮಿಡ್ ಆಧ್ಯಾತ್ಮಿಕ ಧ್ಯಾನಕೇಂದ್ರದ ಅಧ್ಯಕ್ಷ ಕೋನೇರು ಶ್ರೀರಾಮಕೃಷ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ರಕ್ಷಣೆಗಾಗಿ ಸದಾ ಹೋರಾಟ ಮನೋಭಾವನೆ ಹೊಂದಬೇಕು. ಎಲೆಕ್ಟ್ರಾನಿಕ್ ಮಾಧ್ಯಮವು ಮುದ್ರಣ ಮಾಧ್ಯಮದ ಮೇಲೆ ಪ್ರಭಾವ ಬೀರುತ್ತಿದ್ದು, ಮುದ್ರಣ ಮಾಧ್ಯಮವನ್ನು ಪ್ರೋತ್ಸಾಹಿಸಬೇಕು ಎಂದರು.
ರಾಮಸಾಗರ ಸರ್ಕಾರಿ ಪ್ರೌಢಶಾಲೆ ಅಧ್ಯಾಪಕ ಸುಗ್ಗೇನಹಳ್ಳಿ ರಮೇಶ್, ಪುರಸಭೆ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಪ್ರಕಾಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ದೊಡ್ಡಬಸಪ್ಪ, ಪ್ರಮುಖರಾದ ಸಣ್ಣ ಗವಿಸಿದ್ದಪ್ಪ, ಹೊನ್ನಳ್ಳಿ ಗಂಗಾಧರ, ಡಾ.ಎಂ.ಆರ್.ವಾಗೀಶ್, ಸಸಿಪ್ರಾ ಪದಾಧಿಕಾರಿಗಳಾದ ಈರಪ್ಪ ಸೊರಟೂರ, ಅಂಬಿಗರ ಮಂಜುನಾಥ, ಎಸ್.ಡಿ.ಬಸವರಾಜ್, ಎಸ್.ಶ್ಯಾಮಸುಂದರರಾವ್, ರಾಜು ಬಿಲಂಕರ್, ಬಡಿಗೇರ ಜಿಲಾನ್ಸಾಬ್, ವೀರಮ್ಮ ನಾಗರಾಜ, ಎಸ್.ವಿಜಯಲಕ್ಷ್ಮೀ, ಅಕ್ಕಿ ಶ್ವೇತಾ, ಎ.ಶಂಕರ್, ಎಂ.ಎಸ್.ಮುನ್ನಾ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ್, ಅಶೋಕ ಕುಕನೂರು ಇತರರಿದ್ದರು.