ಬೆಂಗಳೂರು: ನಟ ಸುದೀಪ್ ಮನೆಯ ಕುಡಿ ಸಂಚಿತ್ ಸಂಜೀವ್ ಈಗಾಗಲೇ ಚಂದನವನಕ್ಕೆ ಪದಾರ್ಪಣೆ ಮಾಡಿರುವ ವಿಚಾರ ಗೊತ್ತೇ ಇದೆ. ಹೊಸ ವರ್ಷದ ಸಂಭ್ರಮದಲ್ಲಿ ಅವರ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ಮೈಸೂರು ಮೂಲದ ವಿವೇಕ ನಿರ್ದೇಶಿಸುತ್ತಿದ್ದು, ಇದೇ ಶುಕ್ರವಾರ ಸಿನಿಮಾ ಮುಹೂರ್ತ ಕಾಣುತ್ತಿದೆ. ಇದೀಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದು, ‘ಕೆಟಿಎಂ’, ‘ಪೆಪೆ’ ಖ್ಯಾತಿಯ ಕರಾವಳಿ ಪ್ರತಿಭೆ ಕಾಜಲ್ ಕುಂದರ್ ಸಂಚಿತ್ಗೆ ಜೋಡಿಯಾಗಲಿದ್ದಾರೆ. ತಮ್ಮ ಪಾತ್ರ ಹಾಗೂ ಸಿನಿಮಾದ ಬಗ್ಗೆ ‘ವಿಜಯವಾಣಿ’ ಜತೆ ಕಾಜಲ್ ಖುಷಿ ಹಂಚಿಕೊಂಡಿದ್ದಾರೆ. ‘ಒಳ್ಳೆಯ ಕೆಲಸಗಳೇ ನಮಗೆ ದಾರಿದೀಪ ಎಂಬುದನ್ನು ನಂಬಿರುವವಳು ನಾನು. ಅಂತೆಯೇ, ನನ್ನ ಹಿಂದಿನ ಸಿನಿಮಾಗಳಲ್ಲಿ ಆ್ಯಕ್ಟಿಂಗ್ ನೋಡಿಯೇ ನಿರ್ದೇಶಕರು ಈ ಚಿತ್ರಕ್ಕೆ ಅವಕಾಶ ನೀಡಿದರು. ಎರಡು ಸೀನ್ ಸ್ಕ್ರಿಪ್ಟ್ಗೆ ಆಡಿಷನ್ ಕೊಟ್ಟು, ಆ್ಯಕ್ಟಿಂಗ್ ಇಷ್ಟವಾಗಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದರು. ಸಿನಿಮಾ ಆರಂಭಕ್ಕಿಂತಲೂ ಮುಂಚೆಯೇ ಪಾತ್ರದ ಬಗ್ಗೆ ಹೇಳುವುದು ಕಷ್ಟ. ಆದರೆ, ರ್ಪಾಮೆನ್ಸ್ಗೆ ಆದ್ಯತೆಯಿರುವ ಪಾತ್ರವಿದು. ತುಂಬಾ ಸ್ಕೋಪ್ ಹಾಗೂ ವಿಭಿನ್ನವಾಗಿದೆ’ ಎಂದು ಮಾಹಿತಿ ನೀಡುತ್ತಾರೆ.
ವರ್ಕ್ಶಾಪ್ ಆರಂಭ: ಹೊಸ ಚಿತ್ರಕ್ಕಾಗಿ ಕಾಜಲ್ ಹಾಗೂ ಸಂಚಿತ್ ಇಬ್ಬರು ಸಿದ್ದತೆ ನಡೆಸುತ್ತಿದ್ದು, ಈಗಾಗಲೇ ವರ್ಕ್ಶಾಪ್ ಆರಂಭಿಸಿದ್ದಾರೆ. ಈ ಬಗ್ಗೆ, ‘ಪಾತ್ರದ ಸಿದ್ಧತೆಗಾಗಿ ವರ್ಕ್ಶಾಪ್ ಮಾಡುತ್ತಿದ್ದೇವೆ. ಸಂಚಿತ್ ಕೂಡ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ನಿರ್ದೇಶಕ ವಿವೇಕ, ಇಡೀ ಟೀಂ ಪ್ರೋತ್ಸಾಹಿಸುತ್ತಿದೆ. ಒಂದು ಒಳ್ಳೆಯ ತಂಡದ ಜತೆ ಕೆಲಸ ಮಾಡಿದ ಅನುಭವ ಸಿಗಲಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಕಾಜಲ್. ಸದ್ಯ ‘ಬೆಳ್ಳಿ ಚುಕ್ಕಿ ಹಳ್ಳಿ ಹಕ್ಕಿ’ ಶೂಟಿಂಗ್ ಪೂರ್ಣಗೊಳಿಸಿರುವ ಕಾಜಲ್ ಇನ್ನೊಂದು ಹೊಸಬರ ಚಿತ್ರದಲ್ಲಿ ನಟಿಸುತ್ತಿದ್ದಾರೆ.