ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಸನ್ನಿಧಿಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಬೃಹತ್ ಜಾತ್ರಾ ಮಹೋತ್ಸವವು ಧರ್ಮಧ್ವಜ ಅವರೋಹಣದೊಂದಿಗೆ ಬುಧವಾರ ಸಂಜೆ ಸಂಪನ್ನಗೊಂಡಿತು.
ಶ್ರೀಕ್ಷೇತ್ರದಲ್ಲಿ ನ. 9ರಿಂದ ನ.13ರವರೆಗೆ ಸಂಪ್ರದಾಯದಂತೆ 5 ದಿನಗಳ ಕಾಲ ಜಾತ್ರಾ ಮಹೋತ್ಸವವು ವೈಭವದಿಂದ ಜರುಗಿದ್ದು, ಶ್ರೀ ಬಸವೇಶ್ವರಸ್ವಾಮಿಗೆ ದಿನನಿತ್ಯ ಪಂಚಾಮೃತಾಭಿಷೇಕ, ಅಲಂಕಾರ, ಉತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದ್ದವು. ಜಾತ್ರಾ ಮಹೋತ್ಸವವನ್ನು ಸಂಪನ್ನಗೊಳಿಸುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರು ಸನ್ನಿಧಿಯಲ್ಲಿ ಅಂತಿಮ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಮೊದಲಿಗೆ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಪೂಜೆ, ಬಿಲ್ವಪತ್ರೆ ವೃಕ್ಷ ಹಾಗೂ ನಾಗ ದೇವತೆಗಳಿಗೆ ಕುಂಕುಮ ಮತ್ತು ಪುಷ್ಪಾರ್ಚನೆ ನೆರವೇರಿಸಿದ್ದು ದೇಗುಲದ ಹಿಂಭಾಗದಲ್ಲಿರುವ ಬಸವ ಮೂರ್ತಿಗೆ ಕ್ಷೀರಾಭಿಷೇಕ ಮಾಡಿದರು.
ನಂತರ ಶ್ರೀ ಬಸವೇಶ್ವರಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಕಲ್ಯಾಣಿಯ ದೇವರ ಮೂಲೆಯಲ್ಲಿ ಗಂಗಾಪೂಜೆ ಸಲ್ಲಿಸಿದರು. ಬಳಿಕ ದೇಗುಲದ ಎದುರಿನ ಗರುಡ ಕಂಬದ ಮೇಲಿರುವ ದೀಪವನ್ನು ಬೆಳಗಿಸಿದ್ದು, ಧರ್ಮಧ್ವಜ ಅವರೋಹಣಗೊಳಿಸಿದರು.
ಶ್ರೀಕ್ಷೇತ್ರದಿಂದ ಕಬ್ಬಳಿ ಗ್ರಾಮಕ್ಕೆ ಆಗಮಿಸಿದ ಶ್ರೀ ಬಸವೇಶ್ವರಸ್ವಾಮಿ ಅಡ್ಡಪಲ್ಲಕ್ಕಿ ಉತ್ಸವವು ಗ್ರಾಮದ ರಾಜ ಬೀದಿಯಲ್ಲಿ ಸಾಗಿತು. ಭಕ್ತರು ಈಡುಗಾಯಿ ಹೊಡೆದು ಗಂಧ-ಕರ್ಪೂರ ಬೆಳಗಿಸಿದರು. ಶ್ರೀ ಬಸವೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಗುಡಿ ತುಂಬಿಸುವ ಮೂಲಕ ಬೃಹತ್ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ಶ್ರೀಕ್ಷೇತ್ರ ಕಬ್ಬಳಿಯ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಶ್ರೀ ಗುಣನಾಥಸ್ವಾಮೀಜಿ, ಗುಡಿಗೌಡ ಪ್ರಕಾಶ್, ಕಬ್ಬಳಿ ಗ್ರಾಪಂ ಮಾಜಿ ಅಧ್ಯಕ್ಷ ಶಿವನಂಜೇಗೌಡ, ಮಾಜಿ ಸದಸ್ಯ ಶ್ರೀಕಂಠು, ಪ್ರಮುಖರಾದ ಗಣೇಶ್ಗೌಡ, ಹೊನ್ನೇಗೌಡ, ನಂದೀಶ್, ಸಿದ್ಧಗಂಗಾಧರಗೌಡ ಕಬ್ಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.