ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಎ ಗ್ರೇಡ್ ಹೊನಲುಬೆಳಕಿನ ಒಕ್ಕಲಿಗರ ಕಪ್ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು ಶನಿವಾರ ರಾತ್ರಿ ಜನಸಾಗರವೇ ಹರಿದು ಬಂದಿತ್ತು.
ಗ್ರಾಮೀಣ ಕ್ರೀಡೆಯೆಂದೇ ಕರೆಸಿಕೊಳ್ಳುವ ಕಬಡ್ಡಿ ಆಟವನ್ನು ನೋಡಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಬರುತ್ತಿದ್ದಾರೆ. ಶನಿವಾರ ರಾತ್ರಿ ನಡೆದ ಪಂದ್ಯಗಳು ರೋಚಕವಾಗಿದ್ದವು. 8 ಗಂಟೆಗೆ ಗ್ಯಾಲರಿ ಜನರಿಂದ ತುಂಬಿತ್ತು. ಕ್ರೀಡಾಪ್ರೇಮಿಗಳ ತಮ್ಮ ನೆಚ್ಚಿನ ತಂಡಗಳಿಗೆ ಅಂಕ ಸಿಕ್ಕಾಗ ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡುತ್ತಿದ್ದರು.
ಬ್ಯಾಂಕ್ ಆಫ್ ಬರೋಡ ತಂಡದಲ್ಲಿ ಸ್ಥಳೀಯ ಪ್ರತಿಭೆ ಕೂತಿ ಗ್ರಾಮದ ರತನ್ ಅಪ್ಪಚ್ಚು ಆಟವಾಡುತ್ತಿರುವುದರಿಂದ ತಂಡವನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಿತ್ತು. ರತನ್ ರೈಡಿಂಗ್ನಿಂದ ಅಂಕಗಳು ಬಂದಾದ ಪ್ರಶಂಶೆಯ ಕರತಾಡನ ಮುಗಿಲು ಮುಟ್ಟುತ್ತಿತ್ತು.
ಪ್ರೊ ಕಬಡ್ಡಿಯಲ್ಲಿ ಆಟವಾಡಿರುವ 40 ಮಂದಿ ವಿವಿಧ ತಂಡಗಳಲ್ಲಿ ಕಾಣಿಸಿಕೊಂಡು, ಕರಾರುವಕ್ಕಾದ ದಾಳಿಯಿಂದ ಕಬಡ್ಡಿ ಪ್ರೇಮಿಗಳನ್ನು ರಂಜಿಸಿದರು.
ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಸಲು ಸಹಕರಿಸಿದ ದಾನಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಾಂಭವಿ ಹಣಕೋಡು, ತಜ್ಞವಿ ಹಾನಗಲ್ ಶೆಟ್ಟಳ್ಳಿ, ಲೋಚನಾ ಕಲ್ಕಂದೂರು, ಅನುಷ್ಯ ತಾಕೇರಿ ಅವರನ್ನು ಸನ್ಮಾನಿಸಲಾಯಿತು. ಗುರುರಾಜ್ ಶಿರಸಿ, ಶೇಖರ್ಮೂರ್ತಿ ಬೆಂಗಳೂರು ಅವರು ಕಬಡ್ಡಿ ನಿರೂಪಣೆ ಮೂಲಕ ದೇಶವ ವಿವಿಧ ರಾಜ್ಯಗಳಿಂದ ಆಗಮಿಸಿದ ಕಬಡ್ಡಿ ಪ್ರತಿಭೆಗಳನ್ನು ಪರಿಚಯ ಮಾಡಿಕೊಟ್ಟು ಪಂದ್ಯಾವಳಿಯ ಘನತೆಯನ್ನು ಹೆಚ್ಚಿಸಿದರು.
ಎರಡು ಅಂಕಣದಲ್ಲಿ ನಡೆದ ಬಲಿಷ್ಠ ತಂಡಗಳ ಪ್ರತಿ ಪಂದ್ಯಗಳು ರೋಚಕತೆಯಿಂದ ಕೂಡಿದ್ದವು. ಬಲಿಷ್ಠ ಬಿಪಿಸಿಎಲ್ ತಂಡ ಬೆಂಗಳೂರು ಸಿಟಿ ಪೊಲೀಸ್ ತಂಡದ ವಿರುದ್ಧ 32-4 ಅಂಕಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು. ದೆಹಲಿ ಆರ್ಡಿನೆನ್ಸ್ ಫ್ಯಾಕ್ಟರಿ ತಂಡ ಬಲಿಷ್ಠ ಬ್ಯಾಂಕ್ ಆಫ್ ಬರೋಡ ತಂಡವನ್ನು 28-26 ಅಂಕಗಳ ಅಂತರದಲ್ಲಿ ಮಣಿಸಿ ಗೆಲುವಿನ ನಗೆ ಬೀರಿತು. ಸೌತ್ ಸೆಂಟ್ರಲ್ ರೈಲ್ವೆಸ್ ತಂಡ ಸ್ಪಾರ್ಟನ್ ಕ್ಲಬ್ ಹರ್ಯಾಣ ತಂಡದ ವಿರುದ್ದ 32-23 ಅಂಕಗಳ ಅಂತರದಲ್ಲಿ ಸೋಲಿಸಿತು. ಇಎಸ್ಐ ದೆಹಲಿ ತಂಡ ಕೋಲ್ಕತ್ತ ಪೊಲೀಸ್ ತಂಡದ ವಿರುದ್ದ 43-29 ಅಂಕಗಳ ಅಂತರದಲ್ಲಿ ಮಣಿಸಿತು. ರೈಲ್ವೆ ವೀಲ್ಸ್ ಫ್ಯಾಕ್ಟರಿ ತಂಡ ಯಂಗ್ ಬುಲ್ಸ್ ತಂಡದ ವಿರುದ್ದ 42-33 ಅಂಕಗಳ ಅಂತರದಲ್ಲಿ ಗೆಲುವು ಕಂಡಿತು. ಆರ್ಡಿನೆಸ್ ಫ್ಯಾಕ್ಟರಿ ದೆಹಲಿ ತಂಡ ಸಂಜಯ್ ಗಡಾವತ್ ಕೊಲ್ಲಾಪುರ ತಂಡದ ವಿರುದ್ಧ 46-27 ಅಂಕಗಳಿಂದ ಗೆಲುವು ಸಾಧಿಸಿತು.
ಟಿಎಂಸಿ ತಾನೆ ತಂಡ, ಯಂಗ್ ಬುಲ್ಸ್ ತಂಡವನ್ನು 34-30 ಅಂಕಗಳಿಂದ ಮಣಿಸಿತು. ಜೆ.ಕೆ.ಅಕಾಡೆಮಿ ತಂಡ ದೆಹಲಿ ಚಂದವಲಾ ತಂಡವನ್ನು 44-22 ಅಂಕಗಳ ಅಂತರದಲ್ಲಿ ಸೋಲಿಸಿತು.
