ಬ್ಯಾಡಗಿ: ರಾಜ್ಯಸರ್ಕಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲಿದ್ದು, ಮಾದಿಗ ಸಮಾಜದವರಿಗೆ ನ್ಯಾಯ ಸಿಗಲಿದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಚೌಡೇಶ್ವರಿ ದೇವಿ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ತೀರ ಹಿಂದುಳಿದ ಮಾದಿಗ ಸಮುದಾಯಕ್ಕೆ ಮೀಸಲಾತಿಯ ಸಮರ್ಪಕ ಲಾಭ ಸಿಕ್ಕಿರಲಿಲ್ಲ. ಒಳ ಮೀಸಲಾತಿ ನೀಡುವ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ಕೆಲಸ ಮಾಡುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ಸಮಾಜ ಸೇರಿ ಹಿಂದುಳಿದ ಎಲ್ಲ ಸಮಾಜಗಳಿಗೆ ನ್ಯಾಯ ಒದಗಿಸಲು ಬದ್ಧರಾಗಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಸಮುದಾಯಗಳಿಗೆ ಜಾತಿ ನಿಂದನೆ ಪ್ರಕರಣ ದೂರು ನೀಡಲು ಅವಕಾಶವಿದೆ. ಆದರೆ, ಈ ಕಾಯ್ದೆಯನ್ನು ಕೆಲವರು ದುರ್ಬಳಕೆ ಮಾಡಿಕೊಂಡು ತಮ್ಮ ಹೆಸರು ಕೆಡಿಸಿಕೊಂಡಿದ್ದು ಉಂಟು. ಮೊದಲು ಶಿಕ್ಷಣವಂತರಾಗಿ ನಾವು ಬದುಕು ಕಟ್ಟಿಕೊಳ್ಳೋಣ. ಪರಿಶಿಷ್ಟ ಜಾತಿಯ ಮನೆ ಮನೆ ಸಮೀಕ್ಷೆ ನಡೆದಿದೆ. ನಿಗದಿಪಡಿಸಿದಂತೆ ಮಾದಿಗ ಸಮಾಜ ಎಂದು ಬರೆಸಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮಾಜದವರು ಸ್ವಾಭಿಮಾನದಿಂದ ಜೀವನ ನಡೆಸಬೇಕು. ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. ಹಾವೇರಿ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ, ದೇವಸ್ಥಾನ ಕಮಿಟಿ ಅಧ್ಯಕ್ಷ ಮಹದೇವಪ್ಪ ಬೆನ್ನೂರು, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ದುರ್ಗೆಶ ಗೋಣೆಮ್ಮನವರ, ಗವಿಸಿದ್ದಪ್ಪ ದ್ಯಾಮಣ್ಣನವರ, ಗ್ರಾಪಂ ಅಧ್ಯಕ್ಷ ಶಿವಗಂಗಮ್ಮ ಕಾಯಕದ, ಆರ್.ನಾಗರಾಜ, ಪ್ರಕಾಶ ಬನ್ನಿಹಟ್ಟಿ, ಡಿ.ಎಸ್. ಮಾಳಗಿ ಇತರರಿದ್ದರು.