ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’ ಎಂಬ ಧ್ಯೇಯವಾಕ್ಯದಡಿ ಜ.3ರಿಂದ 7ರವರೆಗೆ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರಪಸಾದ್ ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಆಯೋಜಿಸಲಾಗುತ್ತಿದೆ. ಜ.3ರ ಬೆಳಗ್ಗೆ 10ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್, ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಿ.ಆರ್. ವಾಲಾ ಮತ್ತಿತರರು ಆಗಮಿಸುವರು ಎಂದರು.
ರೈತರ ವಿಜ್ಞಾನ ಕಾಂಗ್ರೆಸ್: 5 ದಿನಗಳ ಸಮಾವೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿ ದ್ದಾರೆ. ಜ.4ರಿಂದ 6ರವರೆಗೆ ಮಕ್ಕಳ ವಿಜ್ಞಾನ ಕಾಂಗ್ರೆಸ್, ಜ.5 ಮತ್ತು 6ರಂದು ಮಹಿಳಾ ವಿಜ್ಞಾನ ಕಾಂಗ್ರೆಸ್ ಮತ್ತು ವಿಜ್ಞಾನ ಸಂವಹನ ಕಾರರ ಕೂಟ ನಡೆಯಲಿದೆ. ಜತೆಗೆ ಇದೇ ಮೊದಲ ಬಾರಿ ಜ.6ರಂದು ರೈತರ ವಿಜ್ಞಾನ ಕಾಂಗ್ರೆಸ್ ನಡೆಸಲಾಗುತ್ತಿದೆ ಎಂದರು.
ನೊಬೆಲ್ ಪುರಸ್ಕೃತರು ಭಾಗಿ: ಸಮಾವೇಶದಲ್ಲಿ 150ಕ್ಕೂ ಹೆಚ್ಚು ರಾಷ್ಟ್ರಗಳ ಸಂಘ-ಸಂಸ್ಥೆಗಳು ಭಾಗಿಯಾಗಲಿವೆ. ಜತೆಗೆ 24 ದೇಶಗಳ 74 ಜನ ಸಂಪನ್ಮೂಲವ್ಯಕ್ತಿಗಳು, 19 ಪ್ರಖ್ಯಾತ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಜರ್ಮನಿಯ ಪ್ರೊ. ಸ್ಟೀಫನ್ ಹೆಲ್, ಇಸ್ರೇಲ್ನ ಅದಾ ಇಯೊನಥ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ‘ಭಾರತರತ್ನ’ ವಿಜ್ಞಾನಿ ಸಿ.ಎನ್.ಆರ್. ರಾವ್ ಮಕ್ಕಳ ವಿಜ್ಞಾನ ಕಾಂಗ್ರೆಸ್ ಉದ್ಘಾಟಿಸುವರು ಎಂದರು.
8 ಸಾವಿರ ನೋಂದಣಿ: ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಈವರೆಗೆ 8 ಸಾವಿರ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 5 ಸಾವಿರ ವಿದ್ಯಾರ್ಥಿಗಳಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್ ಸೇರಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರಿಗೂ ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು ಎಂದರು.
ವಿಮಾನ, ಬಸ್ ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರ
ಸಮ್ಮೇಳನಕ್ಕೆ ಆಗಮಿಸುವವರಿಗಾಗಿ ಮಾಹಿತಿ ನೀಡಲು ವಿಮಾನ ನಿಲ್ದಾಣ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಅಲ್ಲಿ ಅಗತ್ಯ ಮಾಹಿತಿಗಳನ್ನೂ ನೀಡಲಾಗುತ್ತದೆ. ಸಮಾವೇಶ ನಡೆಯುವ ಜಾಗದ ಕುರಿತು ಡಿಡಿಡಿ.ಜಿಠ್ಚ2020ಚಠಚಿ.ಟಞ ವೆಬ್ಸೈಟ್ನಲ್ಲಿ ಹಾಗೂ ಐಖಇ2020ಖಿಖಆ ಆಪ್ನಿಂದಲೂ ಪಡೆದುಕೊಳ್ಳಬಹುದು.
ಯೋಗ ಕುರಿತ ಮಾಹಿತಿ
ವಿಜ್ಞಾನ ಕಾಂಗ್ರೆಸ್ನಲ್ಲಿ ಇದೇ ಮೊದಲ ಬಾರಿಗೆ ಯೋಗ ವಿಜ್ಞಾನದ ಕುರಿತು ಮಾಹಿತಿ ನೀಡಲಾಗುತ್ತಿದೆ. ಯೋಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಚಾರಸಂಕಿರಣ ಏರ್ಪಡಿಸಲಾಗಿದೆ. ಅದರಲ್ಲಿ ಎಸ್-ವ್ಯಾಸ ವಿಶ್ವವಿದ್ಯಾಲಯದ ಡಾ. ನಾಗೇಂದ್ರ ಅವರು ಯೋಗದ ಕುರಿತು ಮಾಹಿತಿ ನೀಡಲಿದ್ದಾರೆ.
ಕೃಷಿಗೆ ಒತ್ತು
ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಚರ್ಚೆಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ 3 ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಮಗ್ರ ಕೃಷಿ, ರೈತರ ಆದಾಯವೃದ್ಧಿ, ಹವಾಮಾನ ಬದಲಾವಣೆ, ಗ್ರಾಮೀಣ ಜೈವಿಕ ಉದ್ಯಮಶೀಲತೆ ಮತ್ತು ನೀತಿ ನಿಯಮಗಳು ಹೀಗೆ ವಿವಿಧ ವಿಷಯಗಳ ಬಗ್ಗೆ ವಿಸõತ ಚರ್ಚೆಗಳು ನಡೆಯಲಿವೆ.
ವಿಶೇಷ ಭದ್ರತೆ
ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಇನ್ನುಳಿದ ದಿನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಸಮಾವೇಶದಲ್ಲಿ ಪಾಲ್ಗೊಳ್ಳುವವರ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಪಾಸ್ಗಳನ್ನು ನೀಡಲು ನಿರ್ಧರಿಸಲಾಗಿದೆ.
ಸಮಾರೋಪದಲ್ಲಿ ಉಪರಾಷ್ಟ್ರಪತಿ
ಸಮ್ಮೇಳನದಲ್ಲಿ ವಿಜ್ಞಾನದ 14 ವಿಭಾಗಗಳ ಸಂಶೋಧನಾ ಆವಿಷ್ಕಾರಗಳ ಕುರಿತ ಚರ್ಚಾಗೋಷ್ಠಿ, ಮಕ್ಕಳ ವಿಜ್ಞಾನ ಸಮ್ಮೇಳನ, ವಿಜ್ಞಾನ ಸಂವಹನಕಾರರ ಸಮ್ಮೇಳನ, ರೈತರ ವಿಜ್ಞಾನ ಸಮ್ಮೇಳನ ಸೇರಿ ವಿವಿಧ ಕ್ಷೇತ್ರ ಹಾಗೂ ವಯೋಮಾನದವರಿಗೆ ಪ್ರತ್ಯೇಕ ಸಮ್ಮೇಳನ ಆಯೋಜಿಸಲಾಗಿದೆ. ಜ.3ರಿಂದ 7ರವರೆಗೆ ಅತ್ಯಾಧುನಿಕ ತಂತ್ರಜ್ಞಾನ, ವೈಜ್ಞಾನಿಕ ಉತ್ಪನ್ನಗಳು, ಸಂಶೋಧನೆಗೆ ಸಂಬಂಧಿಸಿದಂತೆ ಸರ್ಕಾರಿ ಇಲಾಖೆ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ವಸ್ತುಪ್ರದರ್ಶನ ಆಯೋಜನೆಗೊಳ್ಳಲಿದೆ. ಕೊನೆಯ ದಿನ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಸಮಾರೋಪ ಭಾಷಣ ಮಾಡಲಿದ್ದಾರೆ.
26 ತಾಂತ್ರಿಕ ಗೋಷ್ಠಿಗಳು
ಸಮ್ಮೇಳನದ ಅಂಗವಾಗಿ 26 ತಾಂತ್ರಿಕ ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಜ.4, 5, ಮತ್ತು 6ರಂದು ರಾಜ್ಯ ಹಾಗೂ ದೇಶದ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ವಿವಿಧ ರಾಜ್ಯಗಳ 15 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ಕುಲಪತಿ ಡಾ. ಎಸ್. ರಾಜೇಂದ್ರಪಸಾದ್ ಹೇಳಿದರು.