ಪಟನಾ: ಪುಲ್ವಾಮಾದಲ್ಲಿ ಉಗ್ರದಾಳಿ ನಡೆಸಿದ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕಿತ ವ್ಯಕ್ತಿಯೋರ್ವನನ್ನು ಬಿಹಾರದ ಬಂಕಾ ಜಿಲ್ಲೆಯಲ್ಲಿ ಇಂದು ಪೊಲೀಸರು ಬಂಧಿಸಿದ್ದಾರೆ.
ರೆಹಾನ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಫೆ.14ರಂದು ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಗುಪ್ತೇಶ್ವರ್ ಪಾಂಡೆ ತಿಳಿಸಿದ್ದಾರೆ.
ಬಂಕಾ ಜಿಲ್ಲೆಯ ಬೇಲಾರಿ ಗ್ರಾಮದಲ್ಲಿ ಈತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಶಂಕಿತ ಪರಾರಿಯಾಗಿದ್ದಾನೆಂದು ಬಂಕಾ ಹಿರಿಯ ಪೊಲೀಸ್ ಅಧಿಕಾರಿ ಸ್ವಪ್ನಾ ಮಾಹಿತಿ ನೀಡಿದ್ದಾರೆ.
ನಾಳೆ ಪ್ರಧಾನಿ ಮೋದಿಯವರು ಪಟನಾದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.