ತೀರ್ಥಹಳ್ಳಿ: ಕುಪ್ಪಳಿಯ ಕವಿಮನೆಯಲ್ಲಿ (ರಾಷ್ಟ್ರಕವಿ ಕುವೆಂಪು ಮನೆ) ಪದ್ಮವಿಭೂಷಣ ಪದಕ ಸೇರಿ ಇತರೆ ಅಮೂಲ್ಯ ವಸ್ತು ಕಳ್ಳತನ ಮಾಡಿದ್ದ ಅಪರಾಧಿಗಳಿಗೆ ತೀರ್ಥಹಳ್ಳಿ ನ್ಯಾಯಾಲಯ ಎರಡು ವರ್ಷ ಜೈಲು ವಾಸ ಮತ್ತು 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ಮೊದಲ ಅಪರಾಧಿ ದಾವಣಗೆರೆಯ ರೇವಣಸಿದ್ದಪ್ಪ ವಿಚಾರಣಾ ಹಂತದಲ್ಲಿಯೇ ಮೃತನಾಗಿದ್ದಾನೆ. ರೇವಣಸಿದ್ದಪ್ಪಗೆ ಪದಕ ಅಪಹರಿಸಲು ಪ್ರೇರೇಪಿಸಿದ ಕವಿಮನೆಯ ಮಾರ್ಗದರ್ಶಕ ತೀರ್ಥಹಳ್ಳಿ ತಾಲೂಕು ಗಡಿಕಲ್ಲು ಅಂಜನಪ್ಪ ಹಾಗೂ ಕಳ್ಳತನದ ಮಾಲೆಂದು ತಿಳಿದಿದ್ದರೂ ಅದನ್ನು ಖರೀದಿಸಿದ್ದ ಸವಳಂಗದ ಪ್ರಕಾಶ್ ಅವರಿಗೆ ಕೋರ್ಟ್ 2 ವರ್ಷ ಕಾರಾಗೃಹ ವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿದೆ.
2015ರ ನವೆಂಬರ್ 23ರಂದು ಸಂಜೆ 6.30ರ ಕವಿಮನೆಗೆ ನುಗ್ಗಿದ್ದ ರೇವಣಸಿದ್ದಪ್ಪ 1 ಸಾವಿರ ರೂ. ನಗದು ಹಾಗೂ ಕುವೆಂಪು ಅವರಿಗೆ ಮೈಸೂರು ವಿವಿ ನೀಡಿದ್ದ 2 ಪದಕ ಮತ್ತು ಕೇಂದ್ರ ಸರ್ಕಾರ ಪ್ರದಾನ ಮಾಡಿದ್ದ ಪದ್ಮವಿಭೂಷಣ ಪದಕ ಅಪಹರಿಸಿ, ಈ ದೃಶ್ಯಾವಳಿ ದಾಖಲಾಗಿದ್ದ ಸಿಸಿ ಕ್ಯಾಮರಾ ಮತ್ತು ಒಂದು ಮಾನಿಟರ್ ಕೂಡ ನಾಶಪಡಿಸಿದ್ದ. ತೀರ್ಥಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಆದರೆ ಪದ್ಮವಿಭೂಷಣ ಪದಕ ಮಾತ್ರ ಈವರೆಗೂ ಪತ್ತೆಯಾಗಿಲ್ಲ.