ದಾವಣಗೆರೆ/ ಜಗಳೂರು: ಎಗ್ರೈಸ್ ವ್ಯಾಪಾರಿ ಬಸವರಾಜ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪತ್ನಿಯೇ ಸುಪಾರಿ ಕೊಟ್ಟು ಪತಿಯ ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಾದ ಭಾಗ್ಯಮ್ಮ (ಬಸವರಾಜ್ ಪತ್ನಿ), ಜಗಳೂರು ತಾಲೂಕು ಗುಡ್ಡದನಿಂಗನಹಳ್ಳಿಯ ಅಂಜಿನಪ್ಪ (ಹೋಟೆಲ್ ಕೆಲಸಗಾರ), ಚೌಡಪ್ಪ ಮತ್ತು ಮಾರುತಿ (ಆಟೋ ಚಾಲಕ) ಅವರನ್ನು ಬಂಧಿಸಲಾಗಿದೆ.
ಎಗ್ರೈಸ್ ಅಂಗಡಿ ನಡೆಸುತ್ತಿದ್ದ ಬಸವರಾಜ್, ಪತ್ನಿ ಭಾಗ್ಯಮ್ಮ ಹಾಗೂ ಇಬ್ಬರು ಮಕ್ಕಳೊಂದಿಗೆ ಜಗಳೂರಿನಲ್ಲಿ ವಾಸವಾಗಿದ್ದ.
ಬಸವರಾಜ್ ಇನ್ನೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಮನೆಯಲ್ಲಿ ಪದೇ ಪದೇ ಗಲಾಟೆಯಾಗಿ ಸಂಸಾರದಲ್ಲಿ ನೆಮ್ಮದಿ ಇಲ್ಲದಂತಾಗಿತ್ತು.
ಈ ಹಿನ್ನೆಲೆಯಲ್ಲಿ ಗಂಡನನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿದ ಭಾಗ್ಯಮ್ಮ, ತಮ್ಮದೇ ಎಗ್ರೈಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಜಿನಪ್ಪನ ಜತೆಗೆ ಕೊಲೆಯ ಸಂಚು ರೂಪಿಸಿದಳು. ತನ್ನ ಪತಿಯನ್ನು ಕೊಲೆ ಮಾಡಿದರೆ ಒಂದು ಲಕ್ಷ ರೂ. ಕೊಡುವುದಾಗಿ ಅಂಜಿನಪ್ಪ, ಚೌಡಪ್ಪ ಮತ್ತು ಮಾರುತಿ ಅವರಿಗೆ ಸುಪಾರಿ ನೀಡಿದಳು.
ಮುದ್ದೆಯಲ್ಲಿ ನಿದ್ದೆ ಮಾತ್ರೆ !: ಮಂಗಳವಾರ ರಾತ್ರಿ ಬಸವರಾಜ್ ಮನೆಗೆ ಬಂದಾಗ ಪತ್ನಿ ಭಾಗ್ಯಮ್ಮ ಮುದ್ದೆ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ಕೊಟ್ಟಿರುತ್ತಾಳೆ.
ಊಟ ಮಾಡಿದ ಬಸವರಾಜಪ್ಪನು ಮಲಗಿದ ನಂತರ ಆರೋಪಿಗಳಾದ ಅಂಜಿನಪ್ಪ, ಚೌಡಪ್ಪ, ಮಾರುತಿ ಸೇರಿ, ನಿದ್ದೆ ಮಂಪರಿನಲ್ಲಿದ್ದ ಬಸವರಾಜನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮಚ್ಚಿನಿಂದ ಕತ್ತನ್ನು ಕೊಯ್ದು ಕೊಲೆ ಮಾಡಿ, ಶವವನ್ನು ಜಗಳೂರು ಪಟ್ಟಣದ ಬಿದರಕೆರೆ ರಸ್ತೆಯ ಬದಿಯಲ್ಲಿ ಹಾಕಿದ್ದರು ಎಂದು ಎಸ್ಪಿ ಹನುಮಂತರಾಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಘಟನೆಯನ್ನು ವಿವರಿಸಿದರು.
ಬಸವರಾಜ್ನ ತಮ್ಮ ಧನರಾಜ್ ನೀಡಿದ ದೂರಿನಂತೆ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ನರಸಿಂಹ ವಿ.ತಾಮ್ರಧ್ವಜ ನೇತೃತ್ವದಲ್ಲಿ, ತನಿಖಾಧಿಕಾರಿಯಾದ ಜಗಳೂರು ಸಿಪಿಐ ದುರುಗಪ್ಪ, ಜಗಳೂರು ಪಿ.ಎಸ್.ಐ ಉಮೇಶ್ ಬಾಬು, ಬಿಳಿಚೋಡು ಪಿ.ಎಸ್.ಐ ಶ್ರೀಧರ್ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ, ಉಮೇಶ ಬಿಸ್ನಾಳ್ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.