ಮಸ್ಕಿ: ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಶುಕ್ರವಾರ ಜಗದ್ಗುರು ರೇಣುಕಾಚಾರ್ಯ ಹಾಗೂ ವಿಶ್ವಗುರು ಬಸವೇಶ್ವರ ಜಯಂತಿ ಆಚರಿಸಲಾಯಿತು.

ಬೆಳಗ್ಗೆ 5:30ಕ್ಕೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, 6 ಗಂಟೆಗೆ 26 ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ ನೀಡಿದ ಶ್ರೀಮಠದ ವರರುದ್ರಮುನಿ ಶಿವಾಚಾರ್ಯರು ಧರ್ಮ ಧ್ವಜಾರೋಹಣ ನೆರವೇರಿಸಿದರು. ಬಳಿಕ 9 ಗಂಟೆಗೆ ಬಸವೇಶ್ವರ, ರೇಣುಕಾಚಾರ್ಯರ ಭಾವಚಿತ್ರ ಮೆರವಣಿಗೆಗೆ ಜಯಂತಿ ರಜತ ಮಹೋತ್ಸವ ಹಾಗೂ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ವರರುದ್ರಮುನಿ ಶಿವಾಚಾರ್ಯರು ಮತ್ತು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು.
ಸಕಲ ವಾದ್ಯಮೇಳ, ಸುಮಂಗಲೆಯರ ಕಳಸದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ದೈವದ ಕಟ್ಟೆ, ಕನಕವೃತ್ತದಿಂದ ಪುನಃ ಗಚ್ಚಿನ ಹಿರೇಮಠ ತಲುಪಿತು. ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಕರಬಸಯ್ಯ ಸಿಂಧನೂರುಮಠ, ಪ್ರಮುಖರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ, ಪಂಚಾಕ್ಷರಯ್ಯ ಕಂಬಾಳಿಮಠ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಅಂದಾನಪ್ಪ ಗುಂಡಳ್ಳಿ, ಅಪ್ಪಾಜಿಗೌಡ ಪಾಟೀಲ್, ಬಸನಗೌಡ ಪೊಲೀಸ್ ಪಾಟೀಲ್, ಮಲ್ಲಪ್ಪ ಕುಡತನಿ, ಸಿದ್ದಲಿಂಗಯ್ಯ ಗಚ್ಚಿನಮಠ ಇತರರಿದ್ದರು.