ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಇಂದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು.
ನಮ್ಮ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಯಾರಾದರೂ ಪ್ರತಿಭಟನೆ, ಹೋರಾಟದ ನೆಪದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶ ಮಾಡಿದರೆ ಅಂತಹವರನ್ನು ನಾಯಿಗಳಿಗೆ ಶೂಟ್ ಮಾಡಿದಂತೆ ಮಾಡಿ ಕೊಲ್ಲಲಾಗುವುದು ಎಂದು ಹೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದರು.
ನಾದಿಯಾ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಪಾಸ್ತಿಯೇನು ಅವರ ಅಪ್ಪನಮನೆದಾ? ಹೇಗೆ ನಾಶ ಮಾಡುತ್ತಾರೆ ಅವುಗಳನ್ನು? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಪ್ರತಿಭಟನೆ ನೆಪದಲ್ಲಿ ಗಲಭೆ ಸೃಷ್ಟಿಸುತ್ತಿರುವವರ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ರಮ ತೆಗೆದುಕೊಳ್ಳದೆ ಇರುವುದನ್ನು ಖಂಡಿಸಿದ್ದರು.
ಆದರೆ ದಿಲೀಪ್ ಘೋಷ್ ಹೇಳಿಕೆಯಿಂದ ಬಿಜೆಪಿ ವರಿಷ್ಠರು ಅಂತರ ಕಾಯ್ದುಕೊಂಡಿದ್ದರು. ಯಾರೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿರಲಿಲ್ಲ.
ಈಗ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಲೀಪ್ ಘೋಷ್ ಹೇಳಿಕೆಗೆ ಕಿಡಿಕಾರಿದ್ದಾರೆ.
ಹಾಗೆಲ್ಲ ಶೂಟ್ ಮಾಡಲು ಪಶ್ಚಿಮಬಂಗಾಳ ಉತ್ತರಪ್ರದೇಶದಂತೆ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂತಹ ಹೇಳಿಕೆಗಳನ್ನು ಹೇಗೆ ನೀಡುತ್ತೀರಿ? ನಾಚಿಕೆಯಾಗಬೇಕು ನಿಮಗೆ. ಗುಂಡು ಹಾರಿಸಲು ಪ್ರಚೋದಿಸುತ್ತಿರುವ ಆ ಮುಖಂಡನ ಹೆಸರು ಹೇಳಲೂ ನಾಚಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಉತ್ತರ ಪ್ರದೇಶವಲ್ಲ. ನಾಳೆ ಏನಾದರೂ ಇಲ್ಲಿ ಫೈರಿಂಗ್ನಂತಹ ಘಟನೆ ನಡೆದರೆ ನೀವೇ ಕಾರಣ ಆಗಿರುತ್ತೀರಿ. ನೀವೆಲ್ಲ ಪ್ರತಿಭಟನಾಕಾರರನ್ನು ಕೊಲ್ಲಲು ಇಚ್ಛೆ ಪಡುತ್ತಿದ್ದೀರಿ ಅಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)