ಬೆಂಗಳೂರು: ಪ್ರತಿಪಕ್ಷಗಳ ಧರಣಿ ನಡೆಸುವ ಸಂದರ್ಭದಲ್ಲಿ ಕಲಾಪ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾದದ್ದು ದುರದೃಷ್ಟಕರ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಧರಣಿ ನಡುವೆ ಸರ್ಕಾರಿ ಕಲಾಪಗಳನ್ನು ನಡೆಸುವುದು ಅನಿವಾರ್ಯವಾಗಿತ್ತು. ಒಂದು ದಿನ ಮುಂಚಿತವಾಗಿ ಅಧಿವೇಶನ ಮೊಟುಕುಗೊಳಿಸುವ ಸ್ಥಿತಿ ಬಂದದ್ದು ಬೇಸರ ತರಿಸಿದೆ ಎಂದರು.
ಮುಡಾ ಚರ್ಚೆಗೆ ಅವಕಾಶ ಕೊಡದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್, ನಿಲುವಳಿ ಸೂಚನೆಯಡಿ ಚರ್ಚಿತವಾಗುವ ವಿಚಾರವು ಇತ್ತಿಚಿನ ಘಟನೆಯಾಗಿರಬೇಕು. ಸಾರ್ವಜನಿಕ ಮಹತ್ವ ಹೊಂದಿರಬೇಕು. ನ್ಯಾಯಾಂಗ ಅಥವಾ ಅರೆ ನ್ಯಾಯಾಂಗದಿಂದ ತನಿಖೆ ನಡೆಯುತ್ತಿರಬಾರದು. ಆದರೆ ಮುಡಾ ಹಗರಣ ವಿಚಾರ ಈಗಾಗಲೇ ನ್ಯಾಯಾಂಗ ವಿಚಾರಣೆಗೆ ವಹಿಸಿರುವುದರಿಂದ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡಲಿಲ್ಲ. ಸಭಾಧ್ಯಕ್ಷರು ನೀಡಿದ ರೂಲಿಂಗ್ ಸರಿಯಾಗಿದೆ ಎಂಬುದು ಮುಂದೆ ವಿರೋಧ ಪಕ್ಷಗಳಿಗೂ ಮನವರಿಕೆಯಾಗಲಿದೆ ಎಂದು ತಿಳಿಸಿದರು.
ಕಠಿಣ ಕ್ರಮ ಕಷ್ಟವಲ್ಲ:
ಅಶಿಸ್ತಿನ ವರ್ತನೆ ಕಂಡಾಗ ಕಠಿಣ ಕ್ರಮ ಕೈಗೊಳ್ಳುವುದು ಕಷ್ಟವಲ್ಲ. ಕಲಾಪ ಸುಗಮವಾಗಿ ನಡೆಯಬೇಕು ಎಂಬ ಕಾರಣಕ್ಕೆ ಸಹಿಸಿಕೊಂಡು ಅಧಿವೇಶನ ನಡೆಸಲಾಯಿತು ಎಂದರು.
ನೀಟ್ ಮತ್ತು ಅತಿವೃಷ್ಟಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಬೇಕಿತ್ತು. ಅದಾಗಲಿಲ್ಲ ಎಂಬ ಬೇಸರವಿದೆ ಎಂದು ಖಾದರ್ ಹೇಳಿದರು.
ಎಂಟು ದಿನಗಳ ಕಾಲ 36.51 ಗಂಟೆ ಕಾರ್ಯ ಕಲಾಪ ನಡೆಸಲಾಗಿದೆ. ದೇಶದ ಯಾವುದೇ ವಿಧಾನಸಭೆಯಲ್ಲಿ ಅಳವಡಿಸದ ಎಐ ಕ್ಯಾಮರಾ ಅಳವಡಿಸಲಾಗಿದ್ದು, ಶಾಸಕರು ಎಷ್ಟು ಬಾರಿ ಬರುತ್ತಾರೆ, ಎಷ್ಟು ಬಾರಿ ಹೊರಗೆ ಹೋಗುತ್ತಾರೆ, ಎಷ್ಟು ಅವಧಿ ಇದ್ದರು ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.