ಎಚ್.ಡಿ.ಕೋಟೆ: ಸುದೀರ್ಘ ಇತಿಹಾಸ ಮತ್ತು ಪ್ರಾಚೀನತೆ ಇರುವ ಕನ್ನಡ ಭಾಷೆಯನ್ನು ಆಧುನಿಕ ಯುಗದಲ್ಲಿ ಪೋಷಿಸಿ ಬೆಳೆಸಿ ಎಂದು ಹೇಳುವ ಸ್ಥಿತಿ ಬಂದೊದಗಿರುವುದು ವಿಪರ್ಯಾಸ ಎಂದು ಮೈಸೂರಿನ ನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥ ಡಾ.ಜಿ. ಪ್ರಸಾದಮೂರ್ತಿ ಬೇಸರಿಸಿದರು.
ಪಟ್ಟಣದ ಶ್ರೀಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಮಾಧ್ಯಮ ವಿಭಾಗ ವತಿಯಿಂದ ಬುಧವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ಭಾಷೆ ಬಳಸುತ್ತೀವೋ ಆಯಾ ಭಾಷೆಗೆ ಗೌರವ ಕೊಡಬೇಕು. ಆದರೆ ಬೇರೆ ಭಾಷೆಯ ಗುಂಗಿನಲ್ಲಿ ಕನ್ನಡಕ್ಕೆ ದೊರೆಯುವ ಗೌರವ ದೊರೆಯುತ್ತಿಲ್ಲ ಎಂದರು.
ನವ ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿಯೂ ಸಹ ಭಾಷೆಗೆ ಕುತ್ತು ಬಂದೊದಗಿದೆ. ಖಾಸಗೀಕರಣದ ನೆಪದಲ್ಲಿ ಐಟಿ-ಬಿಟಿ ಕಂಪನಿಗಳು ಸ್ಥಳೀಯ ಭಾಷೆಯನ್ನು ತಾತ್ಸಾರ ಮಾಡಿ ಬೇರೆ ಭಾಷೆಯನ್ನು ಬಳಸುತ್ತಿದ್ದಾರೆ. ಇದನ್ನು ಪ್ರಶ್ನಿಸುವ ಗೋಜಿಗೆ ಯಾರೂ ಹೋಗುವುದಿಲ್ಲ ಎಂದರು.
ಕನ್ನಡವನ್ನು ಮರುಕಟ್ಟುವ ಯೋಜನೆಯಿಂದಾಗಿ ಹಂಪಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದರೂ ಪ್ರಯೋಜನವಿಲ್ಲದಂತಾಗಿದೆ. ಹಣದ ತೊಂದರೆ, ಇಚ್ಛಾಶಕ್ತಿ, ಅಧ್ಯಯನದ ಕೊರತೆಯಿಂದಾಗಿ ಅದು ಕೇವಲ ಸ್ಥಾವರವಾಗಿ ಉಳಿದಿದೆ ಎಂದ ಅವರು, ಪ್ರಕೃತಿ ಬೆಳವಣಿಗೆ ಜತೆಗೆ ಭಾಷೆಯೂ ಬೆಳೆಯಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಳಿ ಸದಸ್ಯ ಜಿ.ವೆಂಕಟಾಚಲ ಮಾತನಾಡಿ ಕನ್ನಡ ಏಕೀಕರಣ ಎಂದಾಕ್ಷಣ ಹೊಯ್ಸಳರ ಕಾಲದಲ್ಲೇ ಹೋರಾಟದಿಂದಾಗಿಯೇ ಹುಟ್ಟಿಕೊಂಡಿತು. ನಂತರದ 1500 ವರ್ಷಗಳ ಬಳಿಕ ಕರ್ನಾಟಕ ಏಕೀಕರಣಗೊಂಡಿತು ಎಂದರು.
ಜ್ಞಾನಪೀಠ ಪ್ರಶಸ್ತಿ ವಿಚಾರದಲ್ಲಿ ಬೇರೆ ಭಾಷೆಗಳ ಕವಿಗಳಿಗೆ ಹೋಲಿಸಿದರೆ ಕನ್ನಡದ 20ಕ್ಕೂ ಹೆಚ್ಚು ಕವಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಿತ್ತು ಎಂದರು.
ಪ್ರಾಂಶುಪಾಲ ಡಾ.ಜೆ.ಎನ್.ವೆಂಕಟೇಶ್ ಮಾತನಾಡಿದರು. ಕನ್ನಡ ಐಚ್ಛಿಕ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ಮಹಾರಾಜ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಚಂದ್ರೇಗೌಡ, ಎ.ಸಿ.ಭೈರಪ್ಪ, ರವಿಕುಮಾರ್, ರಾಜೇಶ್, ಮಹೇಂದ್ರ, ಬಾಲಚಂದ್ರ, ಸಿದ್ದೇಗೌಡ, ಕಲ್ಲೇಶ್ಗೌಡ, ಸಿದ್ದರಾಜು, ಚನ್ನಕೇಶವ, ಮಂಜು, ಮಹೇಶ್, ಚಿತ್ರಾ, ಪ್ರೀತಿ, ಚಂದನಾ ಇದ್ದರು.