ಹುಬ್ಬಳ್ಳಿ: ಮಹಿಳೆಯರು, ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮತ್ತು ವೃತ್ತಿ ಕೌಶಲತೆ ಬೆಳೆಸುವ ಸಲುವಾಗಿ ನಗರದ ಕಾರವಾರ ರಸ್ತೆ ಈದ್ಗಾ ಮೈದಾನದಲ್ಲಿ ಫೆ. 8ರಿಂದ ಎರಡು ದಿನಗಳವರೆಗೆ ಸುನ್ನಿ ದಾವತೆ ಇಸ್ಲಾಮಿಯಾ 27ನೇ ರಾಜ್ಯ ಮಟ್ಟದ ವಾರ್ಷಿಕ ಸಮ್ಮೇಳನವನ್ನು ಏರ್ಪಡಿಸಲಾಗಿದೆ ಎಂದು ಹುಬ್ಬಳ್ಳಿಯ ಸುನ್ನಿ ದಾವತೆ ಇಸ್ಲಾಮಿಯಾ ಕಾರ್ಯದರ್ಶಿ ಮಹಮ್ಮದ್ ಅಸ್ಲಂ ಮುಜಾಹಿದ್ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಅಂತಾರಾಷ್ಟ್ರೀಯ ಮಟ್ಟದ ಪಾತೀತ ಸಂಸ್ಥೆಯಾಗಿದೆ. ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳಲ್ಲಿ ನಿರತವಾಗಿದೆ. ಸಮಾಜದ ಏಳ್ಗೆಗಾಗಿ ತೊಡಗಿಸಿಕೊಂಡಿದೆ. ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದರು.
ಫೆ. 8ರಂದು ಬೆಳಗ್ಗೆ 10ಕ್ಕೆ ಮಹಿಳೆಯರ ಸಮ್ಮೇಳನ ನಡೆಯಲಿದೆ. ಮುಂಬೈನ ನಾಥ್ ಖಾನ್ ಖಾರಿ ಮಹ್ಮದ್ ರಿಜ್ವಾನ್ಖಾನ್ ಅವರು ಉದ್ಘಾಟಿಸುವರು. ಹಲವು ಗಣ್ಯರು, ಪರಿಣಿತರು ಉಪನ್ಯಾಸ ನೀಡುವರು.
ಫೆ. 9ರಂದು ಪುರುಷರ ಸಮ್ಮೇಳನ ನಡೆಯಲಿದೆ. ವಿದ್ಯಾರ್ಥಿಗಳಿಗೆ ಕರಿಯರ್ ಗೈಡನ್ಸ್ ಶಿಬಿರ ನಡೆಯಲಿದೆ. ಸಮ್ಮೇಳನಕ್ಕಾಗಿ ಸಿದ್ಧತೆ ಮಾಡಲಾಗಿದೆ. ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ ಎಂದರು.
ಗೋಷ್ಠಿಯಲ್ಲಿ ಸುನ್ನಿ ದಾವತೆ ಇಸ್ಲಾಮಿ ಅಧ್ಯಕ್ಷ ಸೈಯದ್ ಮೆಹಬೂಬ್ ಕಲೈಗಾರ, ಸದಸ್ಯರಾದ ರಹಿಂ ಲಷ್ಕರ್, ರಬ್ಬಾನಿ ಮಾಜಿದಂಡಿ, ಡಾ. ಝಿಲತ್ ಹುಸೇನ್ ಇತರರು ಇದ್ದರು.