ಡಾ.ಪಾದೇಕಲ್ಲು ವಿಷ್ಣು ಭಟ್ಟ ಸಂದರ್ಶನ
ಉಡುಪಿಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ
ಪ್ರಶಾಂತ ಭಾಗ್ವತ, ಉಡುಪಿ
ಶ್ರೇಷ್ಠ ವಿದ್ವಾಂಸರೂ, ಕರ್ನಾಟಕದ ವಿದ್ವತ್ ಪರಂಪರಾ ವಲಯದಲ್ಲಿ ಕರಾವಳಿ ಭಾಗವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಪಾಂಡಿತ್ಯಪೂರ್ಣ ವ್ಯಕ್ತಿತ್ವದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರಿಗೆ ಸಲ್ಲುತ್ತದೆ.

ಏ.30 ಹಾಗೂ ಮೇ 1ರಂದು ರಾಜಾಂಗಣದಲ್ಲಿ ನಡೆಯಲಿರುವ ಉಡುಪಿ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸುಕೃತಿಯ ಸರ್ವಾಧ್ಯಕ್ಷತೆ ವಹಿಸಿದ್ದು, ವಿಜಯವಾಣಿಯೊಂದಿಗೆ ಕನ್ನಡದ ಮನ ತೆರೆದಿಟ್ಟಿದ್ದಾರೆ.
ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದರ ಬಗ್ಗೆ ನಿಮ್ಮ ಅನಿಸಿಕೆಯೇನು?
ಮೂವತ್ತು ವರ್ಷದ ಹಿಂದೆ (1995ರಲ್ಲಿ) ಸಾಹಿತಿ ಪ್ರೇಮಾ ಭಟ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ರಾಜಾಂಗಣದಲ್ಲಿಯೇ ನಡೆದಿತ್ತು. ಉಡುಪಿಯ ಸ.ಪ್ರ.ದ. ಕಾಲೇಜಿನ ಪ್ರಾಂಶುಪಾಲನಾಗಿದ್ದ ನಾನು ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿದ್ದೆ. ಈ ಬಾರಿ ಅದೇ ರಾಜಾಂಗಣದಲ್ಲಿ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವುದು ನಿಜಕ್ಕೂ ಸಂತಸ. ನನ್ನನ್ನು ಸಮಾಜ ಗುರುತಿಸಿದೆ, ಮಾನ್ಯತೆ ನೀಡಿದೆ ಎಂದು ಭಾವಿಸಿದ್ದೇನೆ. ಇದು ಇನ್ನಷ್ಟು ಕೆಲಸ ಮಾಡಬೇಕೆಂಬ ಸೂಚನೆಯೂ ಹೌದು.
ಎರಡು ಸಾವಿರ ವರ್ಷದಷ್ಟು ಐತಿಹ್ಯದ ಕನ್ನಡವಿಂದು ಬದಲಾಗಿದೆಯೇ?
ಅತಿದೊಡ್ಡ ಪರಂಪರೆ ಇರುವ ಕನ್ನಡ ಸಾಹಿತ್ಯ ನಮ್ಮದು. ಕಾಲಕಾಲಕ್ಕೆ ಅನೇಕ ಬದಲಾವಣೆ ಕಂಡಿದೆ. ಹಿಂದಿನದಕ್ಕಿಂತ ಅತಿ ಶೀಘ್ರವಾಗಿ ಈಗ ಬದಲಾವಣೆ ಆಗುತ್ತಿದೆ. ಹಳೆಯ ಕಾವ್ಯದ ಬದಲು ನವೋದಯ ಬಂತು. ಬಳಿಕ ಬಂಡಾಯ. ನಂತರ ಸ್ತ್ರೀ ಸಂವೇದನೆ ಹೀಗೆ ಹೊಸ ವಿಚಾರಧಾರೆ ಬಂತು. ದಶಕದಿಂದ ಈಚೆಗೆ ದೊಡ್ಡ ಚಳವಳಿ ಕಂಡು ಬಂದಿಲ್ಲ. ಪುನಹ ಗೇಯ (ಕಾವ್ಯ) ರೂಪಕ್ಕೆ ಹಿಂದಿರುವ ಲಕ್ಷಣ ಕಾಣಿಸುತ್ತಿದೆ.
ತವರಿನಲ್ಲೇ ಕನ್ನಡಕ ಹಾಕಿ ಕನ್ನಡ ಹುಡುಕುವ ಸ್ಥಿತಿ ಬಂತೇ?
ಇದಕ್ಕೆ ಇಡೀ ಸಮಾಜವೇ ಕಾರಣ. ಇಂಗ್ಲಿಷ್ ಮೋಹದ ಧೋರಣೆಯಿಂದ ಮಾತೃಭಾಷೆಯ ಪ್ರಜ್ಞೆ ಕಡಿಮೆಯಾಗುತ್ತಿದೆ. ಅದನ್ನು ಒಬ್ಬರಿಂದ ಸರಿಪಡಿಸಲು ಸಾಧ್ಯವಿಲ್ಲ. ಅದೊಂದು ಪ್ರವಾಹವಾಗಿದ್ದು, ಈಜಲೇಬೇಕು. ಹಾಗೆಂದು ಪ್ರಯತ್ನ ಬಿಡಬಾರದು. ಹೊಸ ಕಾಲದ ತಂತ್ರಜ್ಞಾನ ಬಳಸಿಕೊಂಡು ಕನ್ನಡ ಸಾಹಿತ್ಯದ ರಚನೆ, ಪ್ರಸಾರ ಎರಡೂ ಬೆಳೆಯಬೇಕು.
ಕನ್ನಡ ಕಲಿತರೆ ಉನ್ನತ ಉದ್ಯೋಗ ಸಿಗದೆಂಬುದು ನಿಜವೇ?
ಇದು ಪೂರ್ತಿ ನಿಜವಲ್ಲ. ಇದಕ್ಕೆ ಬೇರೆ ಬೇರೆ ಸಾಮಾಜಿಕ ಕಾರಣವಿದೆ.
ಸರ್ಕಾರದಿಂದ ಕನ್ನಡ ಭಾಷೆಯ ರಕ್ಷಣೆ ಆಗುತ್ತಿದೆಯೇ?
ಸರ್ಕಾರದ ದೃಢ ನಿಶ್ಚಯ, ಸರಿಯಾದ ಧೋರಣೆಯಿದ್ದರೆ ಕನ್ನಡಕ್ಕೆ ಸಮಸ್ಯೆ ಆಗದು. ಭಾಷಾ ತಜ್ಞರು, ಚಿಂತಕರು, ವಿದ್ವಾಂಸರನ್ನೆಲ್ಲ ಸೇರಿಸಿಕೊಂಡು ಸರಿಯಾದ ಭಾಷಾ ಧೋರಣೆ ರೂಪಿಸಿ, ಆಡಳಿತಾತ್ಮಕವಾಗಿ ಜಾರಿಗೊಳಿಸಬೇಕು. ಪಾಲಕರು ತಮ್ಮ ಮಕ್ಕಳಿಕಗೆ ಕನ್ನಡ ಕಲಿಸಲು ಕಳುಹಿಸಿದರೆ ಸರ್ಕಾರಿ ಶಾಲೆ ಉಳಿಯುತ್ತದೆ. ಅದಕ್ಕೆ ಸೂಕ್ತ ಜ್ಞಾನ ಹೊಂದಿದ ಅರ್ಹ ಶಿಕ್ಷಕರನ್ನು ಸರ್ಕಾರ ನೇಮಿಸಬೇಕು.
ಕನ್ನಡ ನಾಡು-ನುಡಿ, ಸಂಸ್ಕೃತಿ ಬಗ್ಗೆ ಅನಿಸಿಕೆಯೇನು?
ಕನ್ನಡವೆಂಬುದು ಪರಂಪರೆಯ ದೊಡ್ಡ ಭಾಗ. ಅದನ್ನು ಕ್ರಿಯಾತ್ಮಕವಾಗಿ ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ. ಕನ್ನಡವೆಂಬ ಕೇವಲ ಅಭಿಮಾನವಿದ್ದರೆ ಪ್ರಯೋಜನಕ್ಕೆ ಬರದು. ಕನ್ನಡದ ಮೇಲೆ ಪ್ರೀತಿ ಇರಲಿ. ಪಾಲಕರು-ಶಿಕ್ಷಕರು ಮಕ್ಕಳಲ್ಲಿ ಕನ್ನಡದ ಪ್ರೀತಿ ಬೆಳೆಸಿ. ಇಂಗ್ಲಿಷ್ ಶಾಲೆಗೆ ಹೋದೆವೆಂದು ಕನ್ನಡ ತ್ಯಜಿಸಬೇಕೆಂದೇನಿಲ್ಲ. ಯಾವುದೇ ಭಾಷೆ ವಿರೊಧಿಸಿವುದೂ ಸಹ ಕನ್ನಡ ಭಾಷಾಭಿವೃದ್ಧಿಯ ಮಾರ್ಗವೂ ಅಲ್ಲ.
ಕರಾವಳಿ ಭಾಗದ ಶ್ರೇಷ್ಠ ವಿದ್ವಾಂಸ
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪಾದೇಕಲ್ಲು ಎಂಬಲ್ಲಿ 1956ರಲ್ಲಿ ನಾರಾಯಣ ಭಟ್ಟ ಮತ್ತು ಶಾರದಾ ದಂಪತಿ ಸುಪುತ್ರರಾಗಿ ಜನಿಸಿದ ವಿಷ್ಣು, ಕನ್ನಡ ಎಂಎಯಲ್ಲಿ ಆಗಿನ ಮೈಸೂರು ವಿವಿ ಸಂಯೋಜಿತ ಮಂಗಳೂರು ಕನ್ನಡ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು. ಭಾಗವತದ ಯಕ್ಷಗಾನ ಪ್ರಸಂಗಗಳು ವಿಷಯದ ಮೇಲೆ ಪಿಎಚ್.ಡಿ ಗಳಿಸಿದರು. ಸರ್ಕಾರಿ ಕಾಲೇಜುಗಳಲ್ಲಿ ಕನ್ನಡ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಬಿಗಿ ಹಿಡಿತವಿದೆ. ಕನ್ನಡ ಶಾಸ್ತ್ರ, ವ್ಯಾಕರಣ, ಭಾಷೆ, ಹಳೆಗನ್ನಡ ಕಾವ್ಯ, ತುಳುಭಾಷೆ, ಪಳಂತುಳು ಕಾವ್ಯ, ಯಕ್ಷಗಾನ ಸಾಹಿತ್ಯ, ಗ್ರಂಥ ಸಂಪಾದನೆ, ಪ್ರವಾಸ ಸಾಹಿತ್ಯ ಹೀಗೆ ಹಲವು ಜ್ಞಾನಗಳಲ್ಲಿ ಪಾಂಡಿತ್ಯವಿದ್ದು ಕರಾವಳಿ ಭಾಗದ ಸರ್ವಶ್ರೇಷ್ಠ ವಿದ್ವಾಂಸರಾಗಿದ್ದಾರೆ ಎನ್ನುತ್ತಾರೆ ಉಡುಪಿ ಆರ್ಆರ್ಸಿಯ ಸಹ ಸಂಶೋಧಕ ಡಾ. ಅರುಣ ಎಸ್.ಆರ್.