ಗುಳೇದಗುಡ್ಡ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೂರು ತಿಂಗಳಲ್ಲಿ ಒಳಮೀಸಲಾತಿ ಜಾರಿಗೆ ತರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣದಲ್ಲಿ ಮಾದಿಗ ಸಮಾಜ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿಯಿಂದಲೇ ಒಳಮೀಸಲಾತಿ ಹೋರಾಟ ಆರಂಭವಾಗಿದ್ದು, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ, ನಾನು ಜಿಲ್ಲಾ ಮಂತ್ರಿ ಇದ್ದ ಸಂದರ್ಭದಲ್ಲಿ ಒಳಮೀಸಲಾತಿಗೆ ಚಾಲನೆ ನೀಡಲಾಗಿದೆ. ಈಗ ಅದು ಸಾಕಾರವಾಗಿದ್ದು 2-3 ತಿಂಗಳಲ್ಲಿ ನೂರಕ್ಕೆ ನೂರು ಜಾರಿಗೆ ಬರಲಿದೆ ಎಂದು ಭರವಸೆ ನೀಡಿದರು.
ಜಾತಿ ಗಣತಿ ವಿಷಯವಾಗಿ ಸಾಕಷ್ಟು ಊಹಾಪೋಹಗಳು ಬಂದಿವೆ. ಯಾರೊಬ್ಬರೂ ಖಡಕಂಡಿತವಾಗಿ ಜಾತಿಗಣತಿ ವಿಷಯ ಪ್ರಸ್ತಾಪಿಸುತ್ತಿಲ್ಲ. ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಜನರಿಗೆ ಸರ್ಕಾರ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಜಾತಿಗಣತಿ ಮಾಡಿಸಿದೆ. ಆದರೆ, ಕೆಲವರು ಅದನ್ನು ಇಲ್ಲಸಲ್ಲದ ಹೇಳಿಕೆ ನೀಡಿ ವಿರೋಧಿಸುತ್ತಿದ್ದಾರೆ ಎಂದರು.
ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆದಿದ್ದು ತಪ್ಪು. ಇದು ಆಗಬಾರದು, ಯಾವುದೇ ಧರ್ಮದ ವ್ಯಕ್ತಿಗಳಿಗೆ ಇಂತಹ ಕೃತ್ಯ ಮಾಡಬಾರದು. ಇಂತಹ ಘಟನೆಗಳಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪತ್ರಕರ್ತ ಮಲ್ಲಿಕಾರ್ಜುನ ಸಿದ್ದನ್ನವರ ಮಾತನಾಡಿ, 30 ವರ್ಷದ ಹಿಂದೆ ಬಾಗಲಕೋಟೆಯಲ್ಲಿ ಚಾಲನೆ ನೀಡಿದ್ದ ಒಳಮೀಸಲಾತಿ ರಥ ಹುಬ್ಬಳ್ಳಿಯಲ್ಲಿ ತನ್ನ ವಿರಾಟ ಸ್ವರೂಪ ಪ್ರದರ್ಶಿಸಿ ಸರ್ಕಾರದ ಮುಂದೆ ನಿಂತಿದೆ. ಒಳಮೀಸಲಾತಿ ಬಂದ ಬಳಿಕ ಸಮಾಜದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಂಬೇಡ್ಕರ್ವಾದಿ ಎಂ.ಬಿ. ಸಿದಗೋಣಿ ಉಪನ್ಯಾಸ ನೀಡಿದರು. ಪತ್ರಕರ್ತ ಸಿ.ಎಂ. ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಕಾಂಗ್ರೆಸ್ ಮುಖಂಡ ಪೀರಪ್ಪ ಮ್ಯಾಗೇರಿ, ರಮೇಶ ಪೂಜಾರಿ, ತಹಸೀಲ್ದಾರ್ ಮಂಗಳಾ ಎಂ., ರೆಡ್ಡಿ ನಡುವಿನಮನಿ, ಸಿದ್ದಪ್ಪ ಮಾದರ, ಯಮನಪ್ಪ ನಡುವಿನಮನಿ, ವಿಶ್ವನಾಥ ಕೆಳಗಿನಒಣಿ, ಪ್ರಕಾಶ ಗಚ್ಚಿನಮನಿ, ಭೀಮಪ್ಪ ನಡುವಿನಮನಿ, ಪರಸಪ್ಪ ಮಾದರ, ನಾಗಪ್ಪ ಮಾದರ, ರಮೇಶ ದಡ್ಡಿ, ಹನಮಂತ ಮಾದರ, ಶಿವಮೂರ್ತೆಪ್ಪ ಜಮ್ಮನಕಟ್ಟಿ, ಮಳಿಯಪ್ಪ ಮಾದರ, ತಮ್ಮಣ್ಣ ಮಾದರ, ಮಂಜುನಾಥ ಮಾದರ ಮತ್ತಿತರರಿದ್ದರು.