ಉಡುಪಿ: ನಗರದ ಸಿಟಿ ಬಸ್ನಲ್ಲಿ ಮಂಗಳವಾರ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅಂತರ್ಜಿಲ್ಲಾ ಕಳ್ಳಿಯರನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆ ಗುಂಡೂರು ನಿವಾಸಿಗಳಾದ ಕವಿತಾ(33), ಸಬಿತಾ(35) ಹಾಗೂ ಲತಾ(25) ಬಂಧಿತ ಆರೋಪಿಗಳು.
ನಗರದ ಸಿಟಿಬಸ್ನಿಲ್ದಾಣದಿಂದ ಕಡಿಯಾಳಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅರ್ಚನಾರಾವ್ ಎಂಬುವರ ಬ್ಯಾಗ್ನಿಂದ ಪರ್ಸ್ನ್ನು ಈ ಮೂವರು ಆರೋಪಿಗಳು ಕಳ್ಳತನ ಮಾಡಿದ್ದರು. ಪರ್ಸ್ನಲ್ಲಿದ್ದ 5 ಸಾವಿರ ನಗದು ಜತೆಗೆ ಎಟಿಎಂನಿಂದ 25 ಸಾವಿರ ರೂ. ಹಣವನ್ನು ಡ್ರಾ ಮಾಡಿದ್ದರು.
ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ಉಪ ನಿರೀಕ್ಷ ಶಕ್ತಿವೇಲು ನೇತೃತ್ವದ ವಿಶೇಷ ತಂಡ ತಕ್ಷಣ ಕಾರ್ಯಪ್ರವೃತ್ತರಾಗಿ ಘಟನೆ ನಡೆದ 12 ಗಂಟೆಯೊಳಗೆ ಉಡುಪಿ ನಗರದಲ್ಲಿ ಬಂಧಿಸಿದ್ದಾರೆ.
ಆರೋಪಿಗಳು ಅಂತರ್ಜಿಲ್ಲಾ ಕಳ್ಳರಾಗಿದ್ದು, ಬಸ್ಸಿನಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಬ್ಯಾಗ್ನಲ್ಲಿದ್ದ ಸ್ವತ್ತು ಹಾಗೂ ನಗದನ್ನು ಕಳ್ಳತನ ಮಾಡುತ್ತಿದ್ದರು. ಆರೋಪಿಗಳಿಂದ ಎಟಿಎಂ ಕಾರ್ಡ್, 32 ಸಾವಿರ ರೂ., ನಗದು ವಶಪಡಿಸಿಕೊಳ್ಳಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.