ವಿಜಯವಾಣಿ ಸುದ್ದಿಜಾಲ ಧಾರವಾಡ
ನ್ಯಾಯಮೂರ್ತಿ ಡಾ. ಎಚ್.ಎಸ್. ನಾಗಮೋಹನದಾಸ ಏಕ ಸದಸ್ಯ ವಿಚಾರಣಾ ಆಯೋಗದ ಸೂಚನೆ ಪ್ರಕಾರ ಈಗಾಗಲೇ ಗುರುತಿಸಿರುವ 101 ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಡಿ, ಉಪ ಜಾತಿಗಳ ಸಮೀಕ್ಷೆ ಮೇ 5ರಿಂದ ಆರಂಭವಾಗಲಿದೆ. ಸಮೀಕ್ಷೆದಾರರು ಒತ್ತಡ, ಪ್ರಭಾವಗಳಿಗೆ ಒಳಗಾಗದೆ, ಅಗತ್ಯ ದಾಖಲೆಗಳ ಅನುಸಾರ ಕರಾರುವಕ್ಕಾಗಿ ಮತ್ತು ನಿಯಮಗಳ ಅನುಸಾರ ಸಮೀಕ್ಷೆ ಮಾಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ – 2025ರಡಿ, ಉಪಜಾತಿಗಳ ಸಮೀಕ್ಷೆಯನ್ನು ಸರ್ಕಾರ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಶಿಕ್ಷಣ ಇಲಾಖೆ ಶಿಕ್ಷಕರಿಂದ ಮೂರು ಹಂತಗಳಲ್ಲಿ ಮಾಡಲು ಸೂಚಿಸಲಾಗಿದೆ ಎಂದರು.
ಮೇ 5 ರಿಂದ 17ರವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಪರಿಶಿಷ್ಟ ಜಾತಿಯವರ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ ಮಾಹಿತಿ ದಾಖಲಿಸಲಿದ್ದಾರೆ. ಮೇ 19 ರಿಂದ 21ರವರೆಗೆ 2ನೇ ಹಂತದಲ್ಲಿ ಸಮೀಕ್ಷೆಯಲ್ಲಿ ಉಳಿದವರಿಗಾಗಿ ಮತಗಟ್ಟೆ ಮಟ್ಟದಲ್ಲಿ ಸಮೀಕ್ಷೆದಾರರು ವಿಶೇಷ ಶಿಬಿರ ಆಯೋಜಿಸಿ ಮಾಹಿತಿ ಸಂಗ್ರಹಿಸಿ ದಾಖಲಿಸುತ್ತಾರೆ. 3ನೇ ಹಂತದಲ್ಲಿ ಮೇ 19 ರಿಂದ 23ರ ವರೆಗೆ ಸಮೀಕ್ಷೆಯಲ್ಲಿ ಹಾಜರಾಗದ, ಬಿಟ್ಟು ಹೋದ ಪರಿಶಿಷ್ಟ ಜಾತಿಯ ಜನರು ಸ್ವತಃ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025 ನಿಗದಿತ ಅವಧಿಯೊಳಗೆ ಮಾಡಬೇಕಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆದಾರರಿಗೆ ಉಂಟಾಗುವ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ತೆರೆಯಲಾಗಿದೆ ಎಂದರು.
ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಆ್ಯಪ್ ಮೂಲಕ ಸಮೀಕ್ಷೆ ಮಾಡುವ ಬಗ್ಗೆ ತರಬೇತಿ ನೀಡಿದರು. ಜಿಪಂ ಸಿಇಒ ಭುವನೇಶ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಸೀಲ್ದಾರರು, ಶಿಶು ಅಭಿವೃದ್ಧಿ ಅಧಿಕಾರಿಗಳು, ಇತರರು ಇದ್ದರು.
