More

    ಕಾಡಾನೆ ದಾಳಿಯಿಂದ ವ್ಯಕ್ತಿಗೆ ಗಾಯ

    ಹನಗೋಡು: ಹೋಬಳಿಯ ನೇರಳಕುಪ್ಪೆಯಲ್ಲಿ ಗ್ರಾಮದಲ್ಲಿ ಬುಧವಾರ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮಂಗಳೂರು ನಗರದ ನಿವಾಸಿ ಎ.ವಿ.ಶಂಕರಶಗ್ರಿತಾಯ ಗಾಯಗೊಂಡವರಾಗಿದ್ದು, ಘಟನೆಯಲ್ಲಿ ಕಾರು ಜಖಂಗೊಂಡಿದೆ.

    ನಿವೃತ ಶಿಕ್ಷಕ ದಿ.ಎ.ವಿ.ಬಾಲಕೃಷ್ಣಶಗ್ರಿತಾಯ ಅವರ ತಿಥಿ ಕಾರ್ಯ ಹಿನ್ನೆಲೆಯಲ್ಲಿ ಸಹೋದರ ಶಂಕರಶಗ್ರಿತಾಯ ಗ್ರಾಮಕ್ಕೆ ಬಂದಿದ್ದರು. ಕಾರ್ಯ ಮುಗಿಸಿದ ಬಳಿಕ ಮಂಗಳೂರಿಗೆ ವಾಪಸ್ ತೆರಳಲೆಂದು ಕಾರನ್ನು ಸ್ವಚ್ಛಗೊಳಿಸುತ್ತಿದ್ದರು.

    ಈ ವೇಳೆ ಕಾಡಾನೆ ಬರುತ್ತಿದ್ದುದನ್ನು ಕಂಡ ಶಂಕರಶಗ್ರಿತಾಯ ತಕ್ಷಣ ಕಾರಿನೊಳಗೆ ಸೇರಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಕಾಡಾನೆ ಕೊಂಬಿನಿಂದ ಕಾರನ್ನು ಜಖಂಗೊಳಿಸಿದೆ. ಇದರಿಂದ ಶಂಕರಶಗ್ರಿತಾಯಗೆ ಸಣ್ಣ ಪುಟ್ಟ ಗಾಯಗಳಾದವು. ಈ ವೇಳೆ ಮನೆಯವರು ಕಿರುಚಿಕೊಳ್ಳಲಾರಂಭಿಸಿದರು. ಇದರಿಂದ ಗಾಬರಿಗೊಂಡ ಆನೆ ಸಿದ್ದಯ್ಯನಕೆರೆ ಮೂಲಕ ಕಾಡಿನತ್ತ ಓಡಿದೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹುಣಸೂರು ವಲಯದ ಆರ್‌ಎಫ್‌ಒ ಹನುಮಂತರಾಜು, ಡಿಆರ್‌ಎಫ್‌ಒ ವೀರಭದ್ರ ಅರಣ್ಯ ಇಲಾಖೆ ವಾಹನದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಒಂಟಿ ಸಲಗವನ್ನು ನೇರಳಕುಪ್ಪೆ ಬಿ.ಹಾಡಿ ಮೂಲಕ ಅರಣ್ಯದೊಳಗೆ ಸೇರಿಸುವಲ್ಲಿ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
    ಮಂಗಳವಾರ ರಾತ್ರಿ ಕಾಡಿನಿಂದ ಹೊರ ಬಂದ ಆನೆ, ನೇರಳಕುಪ್ಪೆ ಹಾಗೂ ಕಾಳಬೋಚನಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts