| ಹರ್ಷವರ್ಧನ್ ಬ್ಯಾಡನೂರು

ಭಾರತೀಯ ಸೈನಿಕರು ಉಗ್ರರಾಷ್ಟ್ರ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ಬುದ್ಧಿ ಕಲಿಸುತ್ತಿದ್ದಾರೆ. ಹೀಗಾಗಿ ದೇಶಾದ್ಯಂತ ಹೈ ಅರ್ಲಟ್ ಘೋಷಿಸಲಾಗಿದ್ದು, ಗಡಿ ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಅಧರ್ಮದ ವಿರುದ್ಧ ನಡೆಸುತ್ತಿರುವ ಯುದ್ಧದ ಪ್ರತಿ ಕ್ಷಣದ ಮಾಹಿತಿ ಪಡೆಯಲು ದೇಶಾದ್ಯಂತ ಜನ ಟಿವಿ, ಮೊಬೈಲ್ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ, ಸಿನಿಮಾ ಮತ್ತು ಮನರಂಜನೆಗೆ ಈಗ ಮಹತ್ವವಿಲ್ಲ ಎಂಬಂತಾಗಿದೆ. ಹಾಗಾದರೆ, ಈ ಸವಾಲನ್ನು ಎದುರಿಸಲು ಚಿತ್ರತಂಡಗಳು ಹೇಗೆ ಸಜ್ಜಾಗಿವೆ? ಚಿತ್ರರಂಗದ ಮುಂದಿನ ಪರಿಸ್ಥಿತಿ ಏನು? ಏನಂತಾರೆ ಸಿನಿಮಾ ಮಂದಿ? ಇಲ್ಲಿದೆ ನೋಡಿ ಈ ಕುರಿತ ವಿಸತ ವರದಿ.
ಭಾರತವೂ ಗೆಲ್ಲುತ್ತೆ, ಸಿನಿಮಾನೂ ಗೆಲ್ಲುತ್ತೆ
ಶುಕ್ರವಾರ ಕನ್ನಡದಲ್ಲಿ “ದಸ್ತಕ್’, “ಸೂತ್ರಧಾರಿ’, “ವಿಕ್ಕಿ’ ಮತ್ತು “ನಾಳೆ ರಜಾ, ಕೋಳಿ ಮಜಾ’ ಚಿತ್ರಗಳು ರಿಲೀಸ್ ಆಗಿವೆ. ಸಿನಿಮಾಗಳ ಯಶಸ್ಸು ಈಗ ಒಂದೆರಡು ವಾರದ ಓಟಕ್ಕಷ್ಟೇ ಸೀಮಿತವಾಗಿದೆ. ಇದೀಗ ಯುದ್ಧದ ನಡುವೆಯೂ ಬಿಡುಗಡೆಯಾಗಿರುವ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ದಸ್ತಕ್’ ನಿರ್ದೇಶಕ ಅನೀಶ್ ಪೂಜಾರಿ ವೇಣೂರು, “ಓಪನಿಂಗ್ ತುಂಬ ಚೆನ್ನಾಗಿ ಸಿಕ್ಕಿದೆ. ಇನ್ನು ಜನರ ಮೇಲಿದೆ. ನಮ್ಮ ಭಾರತೀಯ ಸೈನಿಕರು ನಮಗಾಗಿ ಗಡಿಯಲ್ಲಿ ಹೋರಾಡುತ್ತಿದ್ದಾರೆ. ಪ್ರತಿಯೊಬ್ಬ ಸೈನಿಕನೂ ಪಾಪಿಸ್ತಾನದ ದುಷತ್ಯಕ್ಕೆ ಉತ್ತರ ಕೊಡುತ್ತಿದ್ದಾರೆ. ನಮ್ಮ ಸಿನಿಮಾ ರಿಲೀಸ್ ಆಗಿದೆ ನಿಜ. ಆದರೆ, ನಮ್ಮ ಮೊದಲ ಪ್ರಾಮುಖ್ಯ ಕೂಡ ಯುದ್ಧವೇ ಆಗಿದೆ. ನಮ್ಮ ಸೈನಿಕರ ಮೇಲೆ ನಮಗೂ ಧೈರ್ಯ ಮತ್ತು ಆತ್ಮವಿಶ್ವಾಸವಿದೆ. ನಮ್ಮ ಸೈನಿಕರು ಗೆಲ್ಲಬೇಕು ನಮ್ಮ ಭಾರತ ಗೆಲ್ಲಬೇಕು’ ಎನ್ನುತ್ತಾರೆ.
ರೆಡಿಯಾಗಿರುವ ಚಿತ್ರಗಳ ಕಥೆಯೇನು?
ಇದೇ 23ರಂದು ರು ಹಾಸನ್ ನಿರ್ದೇಶನದ ರಾಕೇಶ್ ಅಡಿಗ ಮತ್ತಯ ರಚನಾ ಇಂದರ್ ನಟಿಸಿರುವ “ನಾನು ಮತ್ತು ಗುಂಡ 2′ ಹಾಗೂ ಕೆ. ರಾಮನಾರಾಯಣ್ ನಿರ್ದೇಶನದಲ್ಲಿ ಮಡೆನೂರ್ ಮನು, ಮೌನ ಗುಡ್ಡೆಮನೆ ಅಭಿನಯಿಸಿರುವ “ಕುಲದಲ್ಲಿ ಕೀಳ್ಯಾವುದೋ’ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸಿವೆ. ಇದೀಗ ಯುದ್ಧದ ಕಾಮೋರ್ಡದ ನಡುವೆ ಚಿತ್ರಗಳ ಭವಿಷ್ಯದ ಕುರಿತು ತಂಡಗಳಲ್ಲಿ ಆತಂಕ ಎದುರಾಗಿದೆ. ನಿರ್ದೇಶಕ ರು ಹಾಸನ್, “ನಾವು ಕಳೆದ ಒಂದು ತಿಂಗಳಿನಿಂದ ಪ್ರಚಾರದಲ್ಲಿ ತೊಡಗಿದ್ದೆವು. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯಾದ ಕಾರಣ, ಮಕ್ಕಳಿಗೆ, ಫ್ಯಾಮಿಲಿ ಆಡಿಯನ್ಸ್ಗೆ ಹೆಚ್ಚು ಕನೆಕ್ಟ್ ಆಗುವ ಚಿತ್ರ “ನಾನು ಮತ್ತು ಗುಂಡ 2′. ಜೂನ್ ಎರಡನೇ ವಾರದಿಂದ ಬಹುತೇಕ ಶಾಲೆ, ಕಾಲೇಜುಗಳು ಪ್ರಾರಂಭವಾಗಲಿದ್ದು, ಆ ಸಮಯದಲ್ಲಿ ್ಯಾಮಿಲಿ ಆಡಿಯನ್ಸ್ ಥಿಯೇಟರ್ಗೆ ಬರುವುದು ಕಷ್ಟಸಾಧ್ಯ. ಹೀಗಾಗಿ ಮೇ 23ರಂದು ರಿಲೀಸ್ ಮಾಡಿದರೆ ಎರಡು ವಾರ ಸಮಸ್ಯೆ ಇರುವುದಿಲ್ಲ ಅಂತ ಅಂದುಕೊಂಡಿದ್ದೆವು. ಆದರೆ, ಈಗ ಯುದ್ಧ ನಡೆಯುತ್ತಿರುವ ಕಾರಣ, ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಬೇಕಾ ಎಂಬ ಪ್ರಶ್ನೆ ಎದುರಾಗಿದೆ. ಆದರೆ, ಯಾವತ್ತೂ ನಮಗೆ ದೇಶವೇ ಮೊದಲು. ಭಾರತೀಯ ಸೈನ್ಯ ಉಗ್ರರ ಉಪಟಳಕ್ಕೆ ಶ್ರೀದಲ್ಲಿಯೇ ಇತಿಶ್ರೀ ಹಾಡುವ ನಿರೀೆಯಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.
ಸೋಮವಾರ ಶ್ರದ್ಧಾಂಜಲಿ ಸಭೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸೋಮವಾರ ಸಂಜೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ. ಪಹಲ್ಗಾಮ್ ನರಮೇಧದಲ್ಲಿ ಹಾಗೂ ಭಾರತ& ಪಾಕ್ ಯುದ್ಧದಲ್ಲಿ ಬಲಿಯಾದ ಜನರು, ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದರ ಜತೆಗೆ ಯುದ್ಧ ಮುಂದುವರಿದಲ್ಲಿ ಕನ್ನಡ ಚಿತ್ರರಂಗ ಹೇಗೆ ಸಿದ್ಧವಾಗಬೇಕು ಎಂಬುದರ ಬಗ್ಗೆಯೂ ಸಭೆ ನಡೆಯಲಿದೆ. ಈ ಬಗ್ಗೆ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, “ಯುದ್ಧದ ಸಂದರ್ಭದಲ್ಲಿ ಮನರಂಜನೆ ಯಾರಿಗೂ ಮುಖ್ಯವಾಗುವುದಿಲ್ಲ. ಹೀಗಾಗಿ ಈ ಸಮಯದಲ್ಲಿ ರಿಲೀಸ್ ಆಗಿರುವ ಮತ್ತು ಆಗಲಿರುವ ಚಿತ್ರಗಳಿಗೆ ಸಮಸ್ಯೆ ಆಗುವುದು ನಿಜ. ಹೀಗಾಗಿ ಏನು ಮಾಡಬಹುದು ಎಂಬದರ ಬಗ್ಗೆ ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರು, ಕಲಾವಿದರು ಸೇರಿ ಎಲ್ಲ ಅಂಗ ಸಂಸ್ಥೆಗಳ ಸದಸ್ಯರ ಜತೆ ಸಭೆ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.
ಒಟಿಟಿಯಲ್ಲಿ ಭೂಲ್ ಚುಕ್ ಮಾಫ್
ರಾಜಕುಮಾರ್ ರಾವ್ ಮತ್ತು ವಮಿಕಾ ಗಬ್ಬಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಕರಣ್ ಶರ್ಮಾ ನಿರ್ದೇಶನದ “ಭೂಲ್ ಚುಕ್ ಮ್ಾ’ ಶುಕ್ರವಾರ ದೇಶಾದ್ಯಂತ ರಿಲೀಸ್ ಆಗಬೇಕಿತ್ತು. ಸೋಮವಾರದಿಂದ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿ 10 ಸಾವಿರಕ್ಕೂ ಅಧಿಕ ಟಿಕೆಟ್ಗಳೂ ಬುಕ್ ಆಗಿದ್ದವು. ಆದರೆ, ಯುದ್ಧದ ಹಿನ್ನೆಲೆಯಲ್ಲಿ ಚಿತ್ರತಂಡ ಗುರುವಾರ ಥಿಯೇಟರ್ ಬಿಡುಗಡೆಯನ್ನು ರದ್ದು ಮಾಡಿಕೊಂಡಿದೆ. ಬದಲಾಗಿ ಇದೇ ತಿಂಗಳ 16ರಂದು ನೇರವಾಗಿ ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಿಕೊಂಡಿದೆ.
ನಮ್ಮೆಲ್ಲರಿಗಿಂತ ದೇಶ ದೊಡ್ಡದು
ಯುದ್ಧದ ಸಂದರ್ಭದಲ್ಲಿ ದೇಶದಲ್ಲಿ ಏನಾಗುತ್ತಿದೆ ಎಂಬ ಎಲ್ಲರಿಗೂ ಇದ್ದೇ ಇರುತ್ತದೆ. ಜತೆಗೆ ಬೆಂಗಳೂರಿನಂತಹ ಮಹಾನಗರಗಳು ಶತ್ರುರಾಷ್ಟ್ರಗಳ ಟಾರ್ಗೆಟ್ ಆಗಿರುವ ಕಾರಣ ಜನರಲ್ಲಿ ಒಂದು ರೀತಿಯ ಭಯವೂ ಇರುತ್ತದೆ. ಪಾಕಿಸ್ತಾನದ ಸೈನಿಕರು ನಮ್ಮ ಸಾಮಾನ್ಯ ಜನರನ್ನು ಕೊಲ್ಲುತ್ತಿದ್ದಾರೆ. ಅವರನ್ನು ಹೆಡೆಮುರಿ ಕಟ್ಟಲು ನಮ್ಮ ಭಾರತದ ಸೈನಿಕರೂ ಹೋರಾಡುತ್ತಿದ್ದಾರೆ. ಈಗಾಗಲೇ ಯುದ್ಧದ ಬಿಸಿ ಐಪಿಎಲ್ಗೆ ಮುಟ್ಟಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಏನಾಗುತ್ತೆ ನೋಡಬೇಕು. ಯುದ್ಧ ಮುಂದುವರಿದರೆ ಸಾರ್ವಜನಿಕ ಕಾರ್ಯಕ್ರಮಗಳೂ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚು. ಮನರಂಜನಾ ಕ್ಷೇತ್ರದ ಮೇಲೆ ಪರಿಣಾಮ ಬೀಳುವುದರಲ್ಲಿ ಸಂದೇಹವಿಲ್ಲ. ಆದರೆ, ದೇಶದ ಮುಂದೆ ನಾವು ಯಾರೂ ದೊಡ್ಡವರಲ್ಲ. ಎಲ್ಲಕ್ಕಿಂತ ದೇಶಪ್ರೇಮ ಮುಖ್ಯ.
– ಚಂದನ್ ಶೆಟ್ಟಿ, ನಾಯಕ
ದೇಶ ಮೊದಲು, ಮಿಕ್ಕಿದ್ದೆಲ್ಲ ನಂತರ…
“ಕುಲದಲ್ಲಿ ಕೀಳ್ಯಾವುದೋ’ ಚಿತ್ರವನ್ನು ಇದೇ 23ರಂದು ತೆರೆಗೆ ತರಲು ಸಿದ್ಧತೆ ನಡೆಸುತ್ತಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ದೇಶಕ್ಕೂ ಒಳ್ಳೆಯದಾಗಬೇಕು, ಸೈನಿಕರಿಗೆ, ಜನರಿಗೆ ಮತ್ತು ಚಿತ್ರರಂಗಕ್ಕೆ ಎಲ್ಲರಿಗೂ ಒಳ್ಳೆಯದಾಗಬೇಕು. ಭಯೋತ್ಪಾದಕರನ್ನು ಸದೆಬಡಿದು, ಅವರನ್ನು ಬೆಳಬಲಿಸುವವರಿಗೆ ಪಾಠ ಕಲಿಸಲೇಬೇಕು. ಭಾರತೀಯ ಸೇನೆ ಆದಷ್ಟು ಬೇಗ ಇದಕ್ಕೆ ಪರಿಹಾರ ನೀಡುತ್ತೆ ಎಂಬ ನಂಬಿಕೆ ಇದೆ. ನಮ್ಮ ಜೀವನ, ಪ್ರಯತ್ನ ಎಲ್ಲವೂ ಸಿನಿಮಾದಲ್ಲಿ ಅಡಗಿದೆ. ಏನೇ ಆಗಲಿ ದೇಶ ಮೊದಲು ಮಿಕ್ಕಿದ್ದೆಲ್ಲ ನಂತರ.
– ಕೆ. ರಾಮನಾರಾಯಣ್, ನಿರ್ದೇಶಕ.