ಬೆಂಗಳೂರು: ರೋಹಿತ್ ಶರ್ಮ(119)ರ ಭದ್ರಬುನಾದಿ ಹಾಗೂ ನಾಯಕ ವಿರಾಟ್ ಕೊಹ್ಲಿ(89) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವುದರೊಂದಿಗೆ 2-1 ಅಂತರಿಂದ ಸರಣಿ ವಶಪಡಿಸಿಕೊಂಡಿತು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸೀಸ್ ಪಡೆ ನೀಡಿದ್ದ 287 ರನ್ ಗುರಿ ಬೆನ್ನತ್ತಿದ ಭಾರತಕ್ಕೆ ರೋಹಿತ್ ಶರ್ಮಾ- ಕೆ.ಎಲ್.ರಾಹುಲ್(19) ಮೊದಲ ವಿಕೆಟ್ಗೆ 69 ರನ್ ಜತೆಯಾಟವಾಡಿ ಉತ್ತಮ ಆರಂಭ ದೊರಕಿಸಿಕೊಟ್ಟರು. ರಾಹುಲ್ ಬಳಿಕ ಕ್ರೀಸ್ಗೆ ಇಳಿದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಜತೆಗೂಡಿ ಆಸೀಸ್ ಬೌಲರ್ಗಳನ್ನು ಮನಸೋ ಇಚ್ಚೆ ದಂಡಿಸಿದರು. ಆರಂಭದಿಂದಲೂ ಉತ್ತಮ ಲಯದಲ್ಲೇ ಆಡಿಕೊಂಡು ಬಂದ ರೋಹಿತ್ 119 ರನ್ ಗಳಿಸಿ 29ನೇ ಏಕದಿನ ಶತಕ ಸಂಭ್ರಮಿಸಿ ಕ್ಯಾಚಿತ್ತು ನಿರ್ಗಮಿಸಿದರು.
ಆಸಿಸ್ ಬೌಲರ್ಗಳನ್ನು ಕೊನೆವರೆಗೂ ಕಾಡಿದ ನಾಯಕ ಕೊಹ್ಲಿ (89) ರನ್ ಗಳಿಸಿ ಟೀಮ್ ಇಂಡಿಯಾದ ಗೆಲುವಿನ ಹೊಸ್ತಿಲಲ್ಲಿ ಔಟಾದರು. ಶ್ರೇಯಸ್ ಅಯ್ಯರ್ (44*) ರನ್ಗಳ ಉಪಯುಕ್ತ ಕಾಣಿಕೆ ನೀಡಿದರೆ, ಮನೀಶ್ ಪಾಂಡೆ (8*) ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಟೀಮ್ ಇಂಡಿಯಾ 47.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 289 ರನ್ ಕಲೆಹಾಕುವ ಮೂಲಕ ಆಸೀಸ್ ವಿರುದ್ಧ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.
ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳನ್ನು ಎದುರಿಸಲು ಆಸೀಸ್ ಬೌಲರ್ಗಳು ಕೊನೆವರೆಗೂ ಪರದಾಡಿದರು. ಆಸೀಸ್ ಪರ ಜೋಶ್ ಹಜಾಲ್ವುಡ್, ಆಸ್ಥಾನ್ ಅಗರ್ ಮತ್ತು ಆ್ಯಡಮ್ ಝಂಪಾ ತಲಾ ಒಂದು ವಿಕೆಟ್ಗೆ ತೃಪ್ತಿಪಟ್ಟರು. (ಏಜೆನ್ಸೀಸ್)
ಆಸೀಸ್ ಪಡೆ ಕಾಡಿದ ಮಹಮ್ಮದ್ ಶಮಿ: ಸ್ಮಿತ್ ಶತಕದಾಸರೆಯಿಂದ ಟೀಮ್ ಇಂಡಿಯಾಗೆ ಸವಾಲಿನ ಗುರಿ