ಇಂಡಿ: ಶಾಂತೇಶ್ವರ ಟ್ರಸ್ಟ್ ಕಮಿಟಿ ಆಡಳಿತ ಮಂಡಳಿ ಸರ್ವಾಧಿಕಾರಿ ಧೋರಣೆ ನಡೆಸುತ್ತಿದ್ದು, ಸಾರ್ವಜನಿಕರಿಗೆ ಸಮರ್ಪಕ ಲೆಕ್ಕ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿ ನಡೆಸುತ್ತಿರುವ ಧರಣಿ 12ನೇ ದಿನಕ್ಕೆ ಕಾಲಿಟ್ಟಿದೆ.
ಶಾಂತುಗೌಡ ಬಿರಾದಾರ, ನೀಲಕಂಠಗೌಡ ಪಾಟೀಲ, ರವಿಗೌಡ ಪಾಟೀಲ, ಸಾತಪ್ಪ ತೆನ್ನೆಳ್ಳಿ ಮಾತನಾಡಿ, ಕಮಿಟಿಯವರಿಗೆ ಲಿಖಿತವಾಗಿ ಲೆಕ್ಕಪತ್ರ ನೀಡಲು ಮನವಿ ಮಾಡಿದ್ದೇವೆ. ಆದರೆ ಅವರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಬಂದು ಲೆಕ್ಕಪತ್ರ ನೀಡಿಲ್ಲ, ಅಲ್ಲದೆ ದೇವಸ್ಥಾನದ ನೋಟಿಸ್ ಬೋರ್ಡಿಗೆ ಲೆಕ್ಕಪತ್ರ ಅಂಟಿಸಲಾಗಿದೆ ಎಂದು ಹೇಳಿದ್ದು, ಅಲ್ಲಿ ಅಂಟಿಸಿಲ್ಲ.
ಪಾಂಪ್ಲೇಟ್ಗಳಲ್ಲಿ ಲೆಕ್ಕಪತ್ರ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದ್ದು, ಅದಕ್ಕೆ ಅಧ್ಯಕ್ಷರು, ಕಾರ್ಯದರ್ಶಿ ಸಹಿ ಇಲ್ಲ, ಅಲ್ಲದೆ ಸರಿಯಾದ ಲೆಕ್ಕಪತ್ರ ನೀಡಿಲ್ಲ, ಹುಂಡಿಯಿಂದ ಪ್ರತಿವರ್ಷ ತೆಗೆಯುವ ಹಣದ ಬಗ್ಗೆ ಮಾಹಿತಿ ನೀಡಿಲ್ಲ.
ದೇವಸ್ಥಾನದ ಕಮಿಟಿಯಲ್ಲಿ ಬೇರೆ ಊರಿನಿಂದ ವಲಸೆ ಬಂದವರನ್ನು ಹಾಕಿಕೊಂಡು ಕಮಿಟಿ ರಚಿಸಿದ್ದಾರೆ. ಮೂಲ ಸ್ಥಳೀಯರಿಗೆ ಆದ್ಯತೆ ನೀಡಿಲ್ಲ ಎಂದು ಆರೋಪಿಸಿದರು.
ಟ್ರಸ್ಟ್ ಕಮಿಟಿ ವಿಸರ್ಜಿಸಿ ನೂತನ ಕಮಿಟಿ ರಚನೆಯಾಗಬೇಕು. ಧರಣಿ ನಡೆಸುತ್ತಿದ್ದರೂ ಧರಣಿ ಸ್ಥಳಕ್ಕೆ ಬಾರದೆ ಸಾರ್ವಜನಿಕರಿಗೆ ಅಗೌರವ ತೋರಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಕಾನೂನು ಹೋರಾಟ ನಡೆಸಲು ಸಜ್ಜಾಗಿದ್ದೇವೆ ಎಂದು ತಿಳಿಸಿದರು.
ರಾಜು ಕುಲಕರ್ಣಿ, ಅನೀಲ ಝಂಪಾ, ಅಮಿತ್ ಪಾಟೀಕಲ, ಸಂತೋಶ ಅಳ್ಳಗಿ, ಸುನೀಲ ಗವಳಿ, ಧರೇಶ ಉನ್ನದ ಇತರರಿದ್ದರು.