ವಿಜಯವಾಣಿ ವಿಶೇಷ ಹಾವೇರಿ
‘ಇಲ್ಲಿ ಎಲ್ಲ ವಾಹನಗಳನ್ನೂ ನಿಲ್ಲಿಸಿ ಶುಲ್ಕ ಸಂಗ್ರಹಿಸುತ್ತಾರೆ. ಹಾಗಂತ ಇವರಲ್ಲಿ ಸರ್ಕಾರದ ಯಾವುದೇ ಅಧಿಕೃತ ಅನುಮತಿ ಪತ್ರವಿಲ್ಲ. ಇವರು ನೀಡುವ ರಸೀದಿಯಲ್ಲಿ ವಾಹನದ ನಂಬರ್ ಕೂಡ ನಮೂದಾಗುವುದಿಲ್ಲ. ಬಸ್ನಲ್ಲಿ ನಿರ್ವಾಹಕ ಕೊಡುವ ಟಿಕೆಟ್ ರೀತಿ ರಸೀದಿ ನೀಡುತ್ತಾರೆ.’
ಇದು ತಾಲೂಕಿನ ಆಲದಕಟ್ಟಿ ಗ್ರಾಮದ ಬಳಿ ಹಾವೇರಿ-ಹಾನಗಲ್ಲ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ನಿರ್ವಿುಸಿರುವ ಟೋಲ್ಪ್ಲಾಜಾದಲ್ಲಿನ ಸದ್ಯದ ಸ್ಥಿತಿ…
ಇಲ್ಲಿನ ಟೋಲ್ಪ್ಲಾಜಾದಲ್ಲಿ ಟೋಲ್ ಸಂಗ್ರಹ ಪಾರದರ್ಶಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
2019ರ ಫೆಬ್ರವರಿ 23ರಿಂದ ಇಲ್ಲಿ ಟೋಲ್ ಸಂಗ್ರಹಕ್ಕೆ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಆರ್ಡಿಸಿಎಲ್) ಮೈಸೂರಿನ ಮಿತ್ರಾ ಇನ್ಪ್ರಾ ಸೆಲ್ಯುಶನ್ಸ್ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಇವರು 8 ತಿಂಗಳುಗಳ ಕಾಲ ಟೋಲ್ ಸಂಗ್ರಹಿಸಿದ್ದರು. ನಂತರ ಅವರು ಸರ್ಕಾರಕ್ಕೆ ತುಂಬಬೇಕಾದ ಹಣವನ್ನು ಸಕಾಲದಲ್ಲಿ ತುಂಬದ ಕಾರಣ ಕಳೆದ ನವೆಂಬರ್ನಲ್ಲಿ ಅವರನ್ನು ಟೋಲ್ ಸಂಗ್ರಹದಿಂದ ವಿಮುಕ್ತಿಗೊಳಿಸಲಾಗಿತ್ತು. ನಂತರ ಮರು ಟೆಂಡರ್ ಕರೆಯುವವರೆಗೆ ತಾತ್ಕಾಲಿಕವಾಗಿ ಟೋಲ್ ಸಂಗ್ರಹಕ್ಕೆ ಚಿತ್ರದುರ್ಗ ಮೂಲದ ತಿಪ್ಪಣ್ಣ ಎಂಬುವರಿಗೆ ಕೆಆರ್ಡಿಸಿಎಲ್ ಪರವಾನಗಿ ನೀಡಿದೆ. ಆದರೆ, ಅವರು ವಾಹನಗಳಿಂದ ಪಡೆಯುವ ಮೊತ್ತಕ್ಕೆ ಕಂಪ್ಯೂಟರೀಕೃತ ರಸೀದಿ ನೀಡುತ್ತಿಲ್ಲ. ಬಸ್ ಕಂಡಕ್ಟರ್ ಟಿಕೆಟ್ ನೀಡುವ ಇಟಿಎಂ ಮಶೀನ್ನಲ್ಲಿಯೇ ಕೆಆರ್ಡಿಸಿಎಲ್ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದಾರೆ. ಈ ರಸೀದಿಯಲ್ಲಿ ವಾಹನದ ಸಂಖ್ಯೆಯೂ ನಮೂದಾಗುವುದಿಲ್ಲ. ವಾಹನ ಚಾಲಕರು ಪ್ರಶ್ನಿಸಿದರೆ ನಾವು ತಾತ್ಕಾಲಿಕವಾಗಿ ಗುತ್ತಿಗೆ ಪಡೆದಿದ್ದೇವೆ. ನೀವು ಈ ಕುರಿತು ಕೆಆರ್ಡಿಸಿಎಲ್ನವರನ್ನು ಸಂರ್ಪಸಿ ಎಂದು ಹಾರಿಕೆ ಉತ್ತರ ನೀಡಿ ಕಳಿಸುತ್ತಿದ್ದಾರೆ.
ಮೂಲ ಸೌಲಭ್ಯಗಳೂ ಇಲ್ಲ: ಟೋಲ್ನಲ್ಲಿ ಯಾವುದೇ ಮೂಲಸೌಲಭ್ಯಗಳನ್ನು ಒದಗಿಸಿಲ್ಲ. ಶೌಚಗೃಹ, ಸಿಸಿ ಕ್ಯಾಮರಾ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿ ಯಾವುದೇ ಸೌಲಭ್ಯಗಳಿಲ್ಲ. ಕಾರು, ಜೀಪ್, ವ್ಯಾನ್ಗಳಿಗೆ ಒಂದು ಬಾರಿ ಸಂಚಾರಕ್ಕೆ 20 ರೂ., ಲಘು ವಾಣಿಜ್ಯ ವಾಹನ ಮಿನಿ ಬಸ್ಗಳಿಗೆ 35, ಬಸ್, ಟ್ರಕ್ ವಾಣಿಜ್ಯ ವಾಹನಗಳಿಗೆ 70, ಭಾರಿ 4ರಿಂದ 6 ಆಕ್ಸಲ್ ವಾಹನಗಳಿಗೆ 110, 7 ಹಾಗೂ ಅದಕ್ಕಿಂತ ಹೆಚ್ಚು ಆಕ್ಸಲ್ ಹೊಂದಿದ ವಾಹನಗಳಿಗೆ 135 ರೂ. ದರ ನಿಗದಿಪಡಿಸಲಾಗಿದೆ. ಟೋಲ್ನಲ್ಲಿ ಫಾಸ್ಟ್ಯಾಗ್ ಸೌಲಭ್ಯ ನಿರ್ಮಾಣ ಹಂತದಲ್ಲಿದೆ ಎಂಬ ಬೋರ್ಡ್ ಕಾಣುತ್ತದೆ. ಆದರೆ, ಇನ್ನೂ ಯಾವ ಸೌಲಭ್ಯ ಕಲ್ಪಿಸಿಲ್ಲ. ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲದ್ದರಿಂದ ಇಲ್ಲಿನ ಯಾವ ದೃಶ್ಯಾವಳಿಗಳೂ ಸೆರೆಯಾಗುತ್ತಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕೆಆರ್ಡಿಸಿಎಲ್ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಕರೆಯನ್ನೇ ಸ್ವೀಕರಿಸುವುದಿಲ್ಲ. ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿದ್ದಾರೆ ಎಂಬುದು ವಾಹನ ಚಾಲಕರ ಆರೋಪವಾಗಿದೆ.
ಹಗಲು ದರೋಡೆ: ಟೋಲ್ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡುವ ಇವರು ಯಾರೆಂಬುದು ಈ ಭಾಗದವರಿಗೆ ಗೊತ್ತಿಲ್ಲ. ಈ ಹಿಂದೆ ಟೆಂಡರ್ ಪಡೆದವರು ಸರ್ಕಾರಕ್ಕೆ ಹಣ ಕಟ್ಟದೇ ಇರುವುದರಿಂದ ಅವರನ್ನು ಬಿಡಿಸಿ ತಿಪ್ಪಣ್ಣ ಎಂಬುವರಿಗೆ ಹಣ ಸಂಗ್ರಹಕ್ಕೆ ತಾತ್ಕಾಲಿಕವಾಗಿ ಗುತ್ತಿಗೆ ನೀಡಲಾಗಿದೆ. ಇಲ್ಲಿನ ವ್ಯವಸ್ಥೆಯ ಬಗ್ಗೆ ನಮಗೇನೂ ಗೊತ್ತಿಲ್ಲ. ನಾವ್ಯಾಕೆ ಇಲ್ಲಿ ನೀರು, ನೆರಳು, ಶೌಚಗೃಹ ವ್ಯವಸ್ಥೆ ಕಲ್ಪಿಸೋಣ. ಬೇಕಾದರೆ ಕೆಆರ್ಡಿಸಿಎಲ್ ಅಧಿಕಾರಿ ರವೀಂದ್ರನಾಥ ಎಂಬುವರಿದ್ದಾರೆ, ಅವರನ್ನೇ ಕೇಳಿ ಎಂದು ಸಾರ್ವಜನಿಕರನ್ನು ದಬಾಯಿಸುತ್ತಿದ್ದಾರೆ. ಎಲ್ಲರೂ ಸೇರಿ ಹಗಲು ದರೋಡೆ ನಡೆಸಿದ್ದಾರೆ ಎಂದು ರೈತ ಸಂಘದ ಮುಖಂಡ ದೀಪಕ ಘಂಟಿ ದೂರುತ್ತಾರೆ.
ಕರೆ ಸ್ವೀಕರಿಸದ ಅಧಿಕಾರಿ: ಆಲದಕಟ್ಟಿ ಬಳಿ ಟೋಲ್ನಲ್ಲಿ ವಾಹನಗಳಿಂದ ಶುಲ್ಕ ಸಂಗ್ರಹಣೆಯ ಗುತ್ತಿಗೆಯನ್ನು ಯಾರಿಗೆ ನೀಡಲಾಗಿದೆ. ಎಷ್ಟು ಅವಧಿಗೆ ನೀಡಲಾಗಿದೆ ಎಂಬ ಮಾಹಿತಿ ಕೇಳಲು ಕೆಆರ್ಡಿಸಿಎಲ್ ಇಇ ರವೀಂದ್ರನಾಥ ಅವರಿಗೆ (9448179254) ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಮಾಧ್ಯಮದವರಿಗೆ ಹೀಗೆ ಮಾಡುವ ಇವರು ಸಾರ್ವಜನಿಕರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಪ್ರಶ್ನಾರ್ಹವಾಗಿದೆ.