ಮಾಂಜರಿ: ಎಲ್ಲ ದಾನಗಳಲ್ಲಿ ಅನ್ನ ದಾನವೇ ಶ್ರೇಷ್ಠ. ಉತ್ತರ ಕರ್ನಾಟಕದ ದಕ್ಷಿಣ ಕಾಶಿ ಶ್ರೀಕ್ಷೇತ್ರ ಯಡೂರ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ಬಂಡಿಗಣಿ ದಾನೇಶ್ವರ ಶ್ರೀಗಳ ದಾಸೋಹ ಕಾರ್ಯ ಶ್ಲಾಘನೀಯ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಹೇಳಿದ್ದಾರೆ.
ಯಡೂರ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶ್ರೀ ದಾನೇಶ್ವರರು ದೊಡ್ಡ ಪ್ರಮಾಣದಲ್ಲಿ ಪ್ರತಿ ವರ್ಷ ಜಾತ್ರೆಯಲ್ಲಿ ಭೋಜನ ನೀಡುವ ಮೂಲಕ ಲಕ್ಷಾಂತರ ಭಕ್ತರ ಮನಸ್ಸು ತೃಪ್ತಿಪಡಿಸುತ್ತಿದ್ದಾರೆ. ಜಾತ್ರೆಯ ಅನ್ನ ಸವಿದವನ ಮನ ಶಾಂತವಾಗಿರುತ್ತದೆ. ಹಸಿದ ಹೊಟ್ಟೆಗೆ ಅನ್ನ ನೀಡಲು ಬಂಡಿಗಣಿ ಮಠ ಆದ್ಯತೆ ನೀಡುತ್ತಿದೆ. ಉಳ್ಳವರ ಮನೆಯಲ್ಲಿ ಸಿಗದಿರುವ ತಿಂಡಿ, ತಿನಿಸುಗಳು ದಾನೇಶ್ವರರ ದಾಸೋಹದಲ್ಲಿ ಬಂದ ಎಲ್ಲ ಭಕ್ತರಿಗೂ ತೃಪ್ತಿದಾಯಕವಾಗಿ ಬಡಿಸುತ್ತಾರೆ ಎಂದರು.
ಬಂಡಿಗಣಿಯ ಶ್ರೀ ದಾನೇಶ್ವರ ಸ್ವಾಮೀಜಿ ಮಾತನಾಡಿ, ಅನ್ನ ದಾಸೋಹ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಆದರ್ಶ ಅಧಿಕಾರಿಗಳು ಹಾಗೂ ಸಮರ್ಥ ಗುರುಗಳಿಂದ ಮಾತ್ರ ಈ ಜಗತ್ತಿನ ಉದ್ಧಾರವಾಗಬಹುದು ಎಂದರು.