ಬೆಂಗಳೂರು: ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ ರೋಷನ್ ಬೇಗ್ರನ್ನು 14 ಗಂಟೆ ವಿಚಾರಣೆ ನಡೆಸಿ ಮಂಗಳವಾರ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ನೀಡಿರುವ ನೋಟಿಸ್ನಂತೆ ಜು.19ಕ್ಕೆ ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.
ಸೋಮವಾರ ರಾತ್ರಿ 10 ಗಂಟೆಯಲ್ಲಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಲು ಮುಂದಾಗಿದ್ದ ಬೇಗ್ರನ್ನು, ಎಸ್ಐಟಿ ತನಿಖಾಧಿಕಾರಿ ಎಸ್.ಗಿರೀಶ್ ನೇತೃತ್ವದ ತಂಡ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದು 2 ಗಂಟೆ ವಿಐಪಿ ಲಾಂಜ್ನಲ್ಲಿ ವಿಚಾರಣೆ ನಡೆಸಿತ್ತು. ಬಳಿಕ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಿಐಡಿ ಕಚೇರಿಗೆ ಕರೆತರಲಾಯಿತು. ಮನ್ಸೂರ್ ಖಾನ್ ಜತೆ ನಂಟಿನ ಕುರಿತು ಕೆದಕಿದ ಅಧಿಕಾರಿಗಳ ಪ್ರಶ್ನೆಗೆ ರೋಷನ್ ಬೇಗ್ ಉತ್ತರಿಸದೆ ಅಸಹಕಾರ ತೋರಿಸಿದ್ದಾರೆ.
ನನ್ನ ಮತಕ್ಷೇತ್ರ ಶಿವಾಜಿನಗರದಲ್ಲಿ ಮನ್ಸೂರ್ ಖಾನ್ ದೊಡ್ಡ ಚಿನ್ನಾಭರಣ ಮಾರಾಟ ಮಳಿಗೆ ಆರಂಭಿಸಿದ್ದ. ಅಲ್ಲದೆ, ನನ್ನ ಸಮುದಾಯದಲ್ಲಿ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ. ಹೀಗಾಗಿ ಕ್ಷೇತ್ರದ ಶಾಸಕನಾದ ನನಗೆ ಮನ್ಸೂರ್ ಪರಿಚಯವಾಗಿತ್ತು. ಆದರೆ, ಆತನ ನಡುವೆ ಹಣಕಾಸಿನ ವ್ಯವಹಾರ ಇರಲಿಲ್ಲ ಎಂದು ಬೇಗ್ ಹೇಳಿರುವುದಾಗಿ ತಿಳಿದು ಬಂದಿದೆ.
ಈ ಮಾತಿಗೆ ಅಧಿಕಾರಿಗಳು, ನಿಮ್ಮ ಮಗನ ಮದುವೆಗೆ ಆಗಮಿಸಿದ್ದ ಅತಿಥಿಗಳಿಗೆ ಪಂಚತಾರಾ ಹೋಟೆಲ್ನಲ್ಲಿ ಆತಿಥ್ಯವನ್ನು ಐಎಂಎ ಕಂಪನಿ ನೋಡಿಕೊಂಡಿದೆ. ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯ ಕೆಲ ಸಾಮಾಜಿಕ ಕೆಲಸಗಳು ಹಾಗೂ ಚುನಾವಣಾ ವೆಚ್ಚಗಳಿಗೆ ಮನ್ಸೂರ್ ಹಣ ವಿನಿಯೋಗಿಸಿರುವ ಕುರಿತು ದಾಖಲೆಗಳು ಸಿಕ್ಕಿವೆಯಲ್ಲ ಎಂದು ಪ್ರಶ್ನಿಸಿದ್ದರು. ಅದಕ್ಕೆ ಬೇಗ್, ನನಗೆ ಮಗನ ಮದುವೆ ಮಾಡಲಾರದಷ್ಟು ದಾರಿದ್ರ್ಯಲ್ಲ. ರಾಜಕೀಯವಾಗಿ ತುಳಿಯಲು ವಿರೋಧಿಗಳು ಸಂಚು ರೂಪಿಸಿದ್ದಾರೆ. ಮನ್ಸೂರ್ ಜತೆ ಬಾಂಧವ್ಯವಿದೆ ಎಂದು ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಸ್ಪಷ್ಪಪಡಿಸಿದ್ದಾರೆ.
ಈ ವೇಳೆ ಶಾಸಕತ್ವದ ವಿಚಾರಣೆ ಕುರಿತು ಸ್ಪೀಕರ್ ಕರೆದಿದ್ದಾರೆ ಎಂದು ತನಿಖಾಧಿಕಾರಿಗಳ ಗಮನಕ್ಕೆ ರೋಷನ್ ಬೇಗ್ ತಂದಿದ್ದಾರೆ. ಈ ಬಗ್ಗೆ ಸ್ಪೀಕರ್ ಕಚೇರಿ ಸಂರ್ಪಸಿ ಮಾಹಿತಿ ಪಡೆದ ಅಧಿಕಾರಿಗಳು ಮೊದಲೇ ನೋಟಿಸ್ ನೀಡಿದಂತೆ ಜು.19ಕ್ಕೆ ವಿಚಾರಣೆ ಬರುವಂತೆ ಸೂಚಿಸಿ ಮಧ್ಯಾಹ್ನ ಕಳುಹಿಸಿದ್ದಾರೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಯಾರ ಮೇಲೂ ಆರೋಪ ಮಾಡಲ್ಲ: ಸೋಮವಾರ ಪುಣೆಗೆ ತೆರಳಬೇಕಿತ್ತು. ಅದಕ್ಕಾಗಿ ಕೆಐಎಗೆ ಹೋದಾಗ ಎಲೊ್ಲೕ ಓಡಿ ಹೋಗುತ್ತೇನೆ ಎಂದು ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿ ಎಸ್ಐಟಿ ಅಧಿಕಾರಿಗಳ ಮೂಲಕ ತಡೆದರು. ಈ ಬಗ್ಗೆ ಯಾರ ಮೇಲೂ ಆರೋಪ ಮಾಡಲ್ಲ. ಕೆಲವರಿಗೆ ಇನ್ನೂ ಗೊಂದಲವಿದೆ. ಜು.19ಕ್ಕೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಆ ಪತ್ರ ನನ್ನ ಬಳಿಯೇ ಇದೆ. ಅಂದು ವಿಚಾರಣೆಗೆ ಹಾಜರಾಗುವುದಾಗಿ ಬೇಗ್ ತಿಳಿಸಿದ್ದಾರೆ.
24 ಗಂಟೆ ಕಳೆದರೂ ಸುಳಿವಿಲ್ಲ: 24 ಗಂಟೆ ಒಳಗಾಗಿ ಭಾರತಕ್ಕೆ ಬರುವುದಾಗಿ ಹೇಳಿಕೆ ನೀಡಿದ್ದ ಬಹುಕೋಟಿ ವಂಚನೆ ಪ್ರಕರಣದ ಐಎಂಎ ಕಂಪನಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಮಾತು ತಪ್ಪಿದ್ದಾನೆ.
ಬಿಜೆಪಿಗೆ ಕುಟುಕಿದ ಕೆಪಿಸಿಸಿ
ರೋಷನ್ ಬೇಗ್ ಮೇಲೆ ಬಿಜೆಪಿಯವರಿಗೆ ಏಕೆ ಅಷ್ಟು ಪ್ರೀತಿ ಅಂತ ಗೊತ್ತಿಲ್ಲ ಎಂದು ಕೆಪಿಸಿಸಿ ವ್ಯಂಗ್ಯವಾಡಿದೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಐಎಂಎ ಪ್ರಕರಣದಲ್ಲಿ ಬಿಜೆಪಿ ಹೋರಾಟ ನಡೆಸಿತ್ತು. ಈಗ ರೋಷನ್ ಬೇಗ್ ಅವರನ್ನು ಬಿಜೆಪಿಯವರೇ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿಸಿದ್ದಾರೆ ಎಂದು ಲೇವಡಿ ಮಾಡಿದರು. ಬೇಗ್ ಅವರಿಗೆ ವಿಶೇಷ ವಿಮಾನ ಸಿದ್ಧಮಾಡಿ, ಬಿಜೆಪಿ ನಾಯಕರೇ ಜತೆಗೆ ನಿಂತಿದ್ದರು. ಇದರಿಂದ ಬಿಜೆಪಿ ಯಾವ ಮಟ್ಟಕ್ಕೆ ಇಳಿದಿದೆ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅವರಿಗೆ ಅಧಿಕಾರ ಹಿಡಿಯಬೇಕು ಎಂಬುದೊಂದೇ ಉದ್ದೇಶ ಎಂದು ಟೀಕಿಸಿದರು.
ರೋಷನ್ ಬೇಗ್ ಬಂಧಿ ಸಲು ಸ್ಪೀಕರ್ ಅನುಮತಿ ಪಡೆಯಬೇಕೆಂಬ ನಿಯಮವಿಲ್ಲ. ವಶಕ್ಕೆ ಪಡೆದ 24 ಗಂಟೆಯೊಳಗೆ ಕಚೇರಿಗೆ ಮಾಹಿತಿ ನೀಡಬೇಕು. ಆ ಕೆಲಸವನ್ನು ಎಸ್ಐಟಿ ಮಾಡಿದೆ.
| ರಮೇಶ್ಕುಮಾರ್ ಸ್ಪೀಕರ್
ಸಿಎಂ ಆರೋಪಕ್ಕೆ ಬಿಜೆಪಿ ಗರಂ
ಶಾಸಕ ರೋಷನ್ ಬೇಗ್ ಜತೆ ಬಿ.ಎಸ್. ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಸಂತೋಷ್ ಪ್ರಯಾಣಿಸುತ್ತಿದ್ದರು ಎಂಬ ಸಿಎಂ ಆರೋಪವನ್ನು ರಾಜ್ಯ ಬಿಜೆಪಿ ಘಟಕ ತಳ್ಳಿಹಾಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳಲು ಆಡಳಿತ ಯಂತ್ರ ಬಳಸಿಕೊಳ್ಳುತ್ತಿದ್ದಾರೆ. ಎಸ್ಐಟಿಗೆ ಹಾಜರಾಗಲು ಬೇಗ್ ಅವರಿಗೆ ಜು.19ರಂದು ದಿನ ನಿಗದಿಯಾಗಿತ್ತು. ಆದರೆ ಬೇಗ್ ಅವರನ್ನು ಸೋಮವಾರ ಬಂಧಿಸಿರುವ ರೀತಿ ಮೈತ್ರಿ ಸರ್ಕಾರ ಶಾಸಕರನ್ನು ಯಾವ ರೀತಿ ಬ್ಲಾ್ಯಕ್ವೆುೕಲ್ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬೇಗ್ ತಲೆಮರೆಸಿಕೊಳ್ಳಲು ಸಹಾಯ ಮಾಡುತ್ತಿರುವ ಬಿಜೆಪಿ ಬಣ್ಣ ಬಯಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಬೇಗ್ ಬಂಧನ ಬೆನ್ನಲ್ಲೇ ಟ್ವೀಟ್ ಮಾಡಿದ್ದರು. ಕುಮಾರಸ್ವಾಮಿ ಆರೋಪಕ್ಕೆ ಗರಂ ಆಗಿರುವ ಬಿಜೆಪಿ ರಾಜ್ಯ ಘಟಕ ಸಿಎಂ ವಿರುದ್ಧ ಬರೋಬ್ಬರಿ ಐದು ಸರಣಿ ಟ್ವೀಟ್ ಮಾಡಿದೆ.
ಸಿಎಂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ರಾಜ್ಯವನ್ನು ತಪು್ಪ ದಾರಿಗೆ ಎಳೆಯುತ್ತಿದ್ದಾರೆ. ಎಸ್ಐಟಿ ದಾಳಿ ವೇಳೆ ಬೇಗ್ ಜತೆ ಇನ್ಯಾರೂ ಇರಲಿಲ್ಲ. ನಿಜಾಂಶ ಅರಿಯಲು ಬೋರ್ಡಿಂಗ್ ಪಾಸ್ ಮತ್ತು ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸಿಎಂ ಕುಮಾರಸ್ವಾಮಿ ಜು.12ರಂದು ರೋಷನ್ ಬೇಗ್ ಅವರನ್ನು ತಾಜ್ ವೆಸ್ಟ್ ಎಂಡ್ನಲ್ಲಿ ಭೇಟಿಯಾಗಿದ್ದರು. ಒಂದು ವೇಳೆ ಬೇಗ್ ಆರೋಪಿಯಾಗಿದ್ದರೆ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಏಕೆ? ಎಂದು ಪ್ರಶ್ನಿಸಿರುವ ಬಿಜೆಪಿ, ಮುಖ್ಯಮಂತ್ರಿಯವರು ಈ ನಿಗೂಢ ಭೇಟಿಯನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದೆ.
ಬೇಗ್ ಅವರು ಕುಮಾರಸ್ವಾಮಿ ಸರ್ಕಾರಕ್ಕೆ ಬೆಂಬಲ ನೀಡುವವರೆಗೂ ಎಲ್ಲವೂ ಸರಿಯಿತ್ತು. ಬೆಂಬಲ ವಾಪಸ್ ಪಡೆದ ತಕ್ಷಣವೇ ಶಾಸಕರನ್ನು ಬ್ಲಾ್ಯಕ್ ಮೇಲ್ ಮಾಡಲು ಆರಂಭಿಸಿದರು ಎಂದು ಆರೋಪಿಸಿದೆ.
ಐಎಂಎ ಆರೋಪಿ ಮನ್ಸೂರ್ ಖಾನ್ ಜತೆ ಸಿಎಂ ಕುಮಾರಸ್ವಾಮಿ ಉಪಾಹಾರ ಸೇವಿಸುತ್ತಿರುವ ಫೋಟೋ ಟ್ವೀಟ್ ಮಾಡಿರುವ ಬಿಜೆಪಿ ಘಟಕ, ಎಚ್.ಡಿ.ಕುಮಾರಸ್ವಾಮಿ ಕಾವಲಿನಲ್ಲೇ ಐಎಂಎ ಪ್ರಕರಣದ ಆರೋಪಿ ರಾಜ್ಯದಿಂದ ಪಾರಾಗಿರುವುದನ್ನು ಜೆಡಿಎಸ್ ಮೊದಲು ಬಹಿರಂಗಗೊಳಿಸಬೇಕು. ಐಎಂಎ ಆರೋಪಿಯೊಂದಿಗೆ ಕುಮಾರಸ್ವಾಮಿ ಬಿರಿಯಾನಿ ಸೇವಿಸುತ್ತಿರುವ ಚಿತ್ರ ಆರೋಪಿ ಪರಾರಿಗೆ ಹೇಗೆ ಯೋಜನೆ ರೂಪಿಸಿರಬೇಕು ಎಂಬುದರ ಬಗ್ಗೆ ಅನೇಕ ಉತ್ತರಗಳನ್ನು ನೀಡುತ್ತಿದೆ ಎಂದಿದೆ.
ಸರ್ಕಾರದ ವಿರುದ್ಧ ಕಿಡಿಕಾರಿದ ರೋಷನ್
ಎಸ್ಐಟಿ ಅಧಿಕಾರಿಗಳು ಸೋಮವಾರ ರಾತ್ರಿ ಏಕಾಏಕಿ ವಿಚಾರಣೆ ನಡೆಸಿದ್ದು ರಾಜಕೀಯ ಪಿತೂರಿ. ನಾನೇನೂ ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ ಎಂದು ರೋಷನ್ ಬೇಗ್ ಕಿಡಿಕಾರಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹಜ್ ಯಾತ್ರೆ ಹೋಗಬೇಕೆಂದು ನಿರ್ಧರಿಸಿದ್ದೆ, ಹೋಗಲು ಆಗಲಿಲ್ಲ. ಸೋಮವಾರ ಪೂನಾಗೆ ಹೊರಟಿದ್ದೆ. ರಾಜಕೀಯ ಪಿತೂರಿಯಿಂದ ಹೋಗಲು ಸಾಧ್ಯ ಆಗಲಿಲ್ಲ. ಎಸ್ಐಟಿ ಅಧಿಕಾರಿಗಳು ಕರೆದುಕೊಂಡು ಬಂದರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏನು ಬೇಕಾದರೂ ವಿಚಾರಣೆ ಮಾಡಲಿ. ನಾನು ಪೂರ್ತಿ ಸಹಕಾರ ಕೊಡುತ್ತೇನೆ. ಇದೀಗ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಯಾವಾಗ ಕರೆದರೂ ವಿಚಾರಣೆಗೆ ಬರುತ್ತೇನೆ ಎಂದು ಸಿಐಡಿ ಕಚೇರಿ ಬಳಿ ತಿಳಿಸಿದರು.
ಸರ್ಕಾರಕ್ಕೆ ಉಭಯ ಸಂಕಟ
ರೋಷನ್ ಬೇಗ್ ಮೇಲೆ ಎಸ್ಐಟಿ ಅಸ್ತ್ರ ಪ್ರಯೋಗಿಸಿ ಹಿಡಿದಿಡುವ ಪ್ರಯತ್ನ ಮಾಡಿರುವ ಸರ್ಕಾರಕ್ಕೆ ಉಭಯ ಸಂಕಟ ಎದುರಾಗಿದೆ. ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಬೇಗ್ ಬೆಂಬಲ ಮೈತ್ರಿ ಸರ್ಕಾರಕ್ಕೆ ಅಗತ್ಯವಾಗಿ ಬೇಕು. ಆದರೆ, ಬೇಗ್ ಈಗಾಗಲೇ ರಾಜೀನಾಮೆ ನೀಡಿದ್ದು ಮನವೊಲಿಕೆ ಕಾರ್ಯಕ್ಕೆ ಕಾಂಗ್ರೆಸ್ ಮುಖಂಡರು ಪ್ರಯತ್ನಿಸಿಲ್ಲ. ಜೆಡಿಎಸ್ ಕಡೆಯಿಂದ ಬೇಗ್ ಮನವೊಲಿಸುವ ಕಾರ್ಯ ನಡೆದಿತ್ತು. ಈ ನಡುವೆ ಬೇಗ್ ಬಿಜೆಪಿ ಸೇರುತ್ತಾರೆಂಬ ಆತಂಕಕ್ಕೆ ಒಳಗಾದ ಸರ್ಕಾರ ಎಸ್ಐಟಿ ಮೂಲಕವೇ ಅವರನ್ನು ಬಗ್ಗಿಸುವ ಯತ್ನ ನಡೆಸಿದೆ. ಆದರೆ ಈ ಕ್ರಮವನ್ನು ಬೇಗ್ ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ. ಜು. 19ರಂದು ವಿಚಾರಣೆಗೆ ಬರುತ್ತೇನೆಂದು ಎಸ್ಐಟಿಗೆ ತಿಳಿಸಿದ್ದರೂ, ರಾಜಕೀಯ ಪಿತೂರಿ ನಡೆದಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈಗ ಬೇಗ್ ಅವರನ್ನು ಮನವೊಲಿಸುವುದು ಹೇಗೆ ಎಂಬ ಪ್ರಶ್ನೆ ಮೈತ್ರಿ ಪಕ್ಷದ ನಾಯಕರಲ್ಲಿದೆ.
ಸರ್ಕಾರ-ಎಸ್ಐಟಿಗೆ ನೋಟಿಸ್
ಬೆಂಗಳೂರು: ಐಎಂಎ ಬಹುಕೋಟಿ ರೂ. ಹಗರಣದ ತನಿಖೆ ವಿಚಾರವಾಗಿ ತಮ್ಮ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಹಾಗೂ ಮುಕ್ತ ಓಡಾಟಕ್ಕೆ ಅಡ್ಡಿಪಡಿಸಬಾರದು ಎಂದು ಎಸ್ಐಟಿಗೆ ನಿರ್ದೇಶಿಸಲು ಕೋರಿ ರೋಷನ್ ಬೇಗ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮಂಗಳವಾರ ಬೇಗ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ ಹಾಗೂ ಎಸ್ಐಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಜು.30ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಶ್ಯಾಮಸುಂದರ್ ವಾದಿಸಿ, ಬೇಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಸ್ಪೀಕರ್ ಈವರೆಗೂ ಅಂಗೀಕರಿಸಿಲ್ಲ. ಈ ಮಧ್ಯೆ ಐಎಂಎ ವಂಚನೆ ಪ್ರಕರಣ ಸಂಬಂಧ ಅವರ ವಿರುದ್ಧ ಎಸ್ಐಟಿ ವಿಚಾರಣೆಗೆ ಮುಂದಾಗಿದೆ. ಅದಕ್ಕೆ ಸಹಕರಿಸಲು ಸಿದ್ಧ ಎಂದು ಶಾಸಕರು ಸ್ವಯಂಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗಲು ಎಸ್ಐಟಿ 2 ಬಾರಿ ನೋಟಿಸ್ ನೀಡಿತ್ತು. ವಿಚಾರಣೆಗೆ ಹಾಜರಾಗಲು ಸಾಧ್ಯವಾಗದ್ದರಿಂದ ಅರ್ಜಿದಾರರು ಕಾಲಾವಕಾಶ ಕೋರಿದ್ದರು. ಅದರಂತೆ, ಜು.19ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಮತ್ತೆ ನೋಟಿಸ್ ನೀಡಿದೆ. ಆದರೆ, ಜು.15ರ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೇಗ್ಅವರನ್ನು ಎಸ್ಐಟಿ ಬಲವಂತವಾಗಿ ವಶಕ್ಕೆ ಪಡೆದಿದೆ ಎಂದು ಆಕ್ಷೇಪಿಸಿದರು.
ಎಸ್ಐಟಿ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಆಗುತ್ತಿದಂತೆ ಮಧ್ಯಾಹ್ನದ ವೇಳೆಗೆ ಬೇಗ್ ಅವರನ್ನು ಮನೆಗೆ ಕಳಿಸಿಕೊಡಲಾಗಿದೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಿರುವ ಎಸ್ಐಟಿ ಅಧಿಕಾರಿಗಳಾದ ರವಿಕಾಂತೇಗೌಡ, ಗಿರೀಶ್ ಸರ್ಕಾರದ ಅಡಿಯಾಳುಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ನ್ಯಾಯಪೀಠ, ಅರ್ಜಿದಾರರನ್ನು ಈಗಾಗಲೇ ಬಿಟ್ಟು ಕಳುಹಿಸಲಾಗಿದೆಯಲ್ಲ, ಮತ್ತೇನು ಬೇಕು ಎಂದು ಪ್ರಶ್ನಿಸಿತು.