ಬೆಂಗಳೂರು: ಭ್ರಷ್ಟ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿದರೆ ರಾತ್ರಿ ನಿದ್ರೆ ಬರುವುದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ವರ್ತನೆ, ಮಾತುಗಳನ್ನು ಗಮನಿಸಿದರೆ ನನಗೆ ಒಂದು ವಿಷಯ ನೆನಪಿಗೆ ಬರುತ್ತದೆ; ಒಂದು ಊರಿಗೆ ಆನೆ ಬಂದ ತಕ್ಷಣವೇ ಊರಿನಲ್ಲಿದ್ದ ಎಲ್ಲ ಸಣ್ಣಪುಟ್ಟ ನಾಯಿಗಳು ಬೊಗಳಲು ಶುರುಮಾಡುತ್ತವೆ.
ಆದರೆ ಆನೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ಹೋಗುತ್ತದೆ. ಆದರೆ ನಾಯಿಗಳು ಬೊಗಳುವುದನ್ನು ನಿಲ್ಲಿಸಲೇ ಇಲ್ಲ. ಈ ಕಥೆಯಂತೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಇದೆ ಎಂದು ಟೀಕಿಸಿದರು.
ಮೋದಿಯವರ ವಿರುದ್ಧ ಭ್ರಷ್ಟರೆಲ್ಲ ಒಂದಾಗಿದ್ದಾರೆ. ಆದರೆ ಒಂದೇ ಒಂದು ಭ್ರಷ್ಟಾಚಾರವನ್ನು ಮೋದಿಯವರ ವಿರುದ್ಧ ಹೇಳಲು ಯಾರಿಗೂ ಶಕ್ತಿಯಿಲ್ಲ. ಹೀಗಾಗಿ ತಮ್ಮ ಭ್ರಷ್ಟತನ ಮುಚ್ಚಿಕೊಳ್ಳಲು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಜನರ ಮೇಲೆ ಭಯೋತ್ಪಾದನಾ ದಾಳಿಯಾಗಿದೆ. ಅದರಲ್ಲಿ 28 ಜನರು ಸಾವಿಗೀಡಾಗಿದ್ದಾರೆ. ಅವರಲ್ಲಿ ಕರ್ನಾಟಕದವರೂ ಇದ್ದಾರೆ. ಧರ್ಮ ಕೇಳಿ, ಗುರುತು ಕೇಳಿ ನಮ್ಮ ಮೇಲೆ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳೇ ಹೇಳಿದ್ದರೂ ಕಾಂಗ್ರೆಸ್ ನವರು ನಂಬುವುದಿಲ್ಲ.
ಮೆದುಳಿಗೂ ಬಾಯಿಗೂ ಸಂಪರ್ಕ ತಪ್ಪಿದೆಯೆ ?
ದಾಳಿಯಲ್ಲಿ ಸಾವನ್ನಪ್ಪಿದ ಜನರ ಮರಣೋತ್ತರ ಪರೀಕ್ಷೆಯಲ್ಲಿ ಜನರನ್ನು ಲಿಂಗ ಪರೀಕ್ಷೆ ಮಾಡಿ ಗುಂಡು ಹಾರಿಸಲಾಗಿದೆ ಎಂದು ವರದಿಗಳು ಹೇಳಿವೆ. ಈ ಕಾಂಗ್ರೆಸ್ ನವರಿಗೆ ಮೆದುಳಿಗೂ ಬಾಯಿಗೂ ಏನಾದರೂ ಸಂಪರ್ಕ ತಪ್ಪಿ ಹೋಗಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಯಾರ ಓಲೈಕೆಗೆ ನಿಂತಿದ್ದಾರೆ. ಪ್ರಾಣ ಕಳೆದುಕೊಂಡವರ ಪತ್ನಿಯೇ ಹೇಳಿದ ಮಾತುಗಳನ್ನು ಈ ಕಾಂಗ್ರೆಸ್ ನಂಬುವುದಿಲ್ಲ. ಒಬ್ಬ ಸಣ್ಣಪ್ರಾಯದ ಹುಡುಗನ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಯೋತ್ಪಾದಕರು ಹಿಂದು ಮತ್ತು ಮುಸ್ಲಿಂ ಬೇರೆಯಾಗಿ ಎಂದು ಹೇಳಿದ ಕೂಡಲೇ ನಾನು ಮತ್ತು ನಮ್ಮ ತಂದೆ ಅವಿತುಕೊಂಡೆವು.
ಆದರೂ ಕಂಡುಹಿಡಿದು ಹಿಂದು ಎಂದು ತಿಳಿದ ತಕ್ಷಣವೇ ನನ್ನ ತಂದೆಯವರಿಗೆ ಗುಂಡು ಹಾರಿಸಿ ನನ್ನನ್ನು ಬಿಟ್ಟುಬಿಟ್ಟರು ಎಂದು ವಿವರವಾಗಿ ಹೇಳಿದ ಆ ಪುಟ್ಟ ಹುಡುಗನ ಮಾತಿನ ಮೇಲೆ ನಂಬಿಕೆ ಇಲ್ಲವೇ ನಿಮಗೆ. ಅಂದರೆ ಭಾರತೀಯರ ಮೇಲೆ ನಿಮಗೆ ನಂಬಿಕೆ ಇಲ್ಲ?. ಹಾಗಾದರೆ ನೀವು ನಂಬುವುದು ಯಾರನ್ನು? ಎಂದು ಪ್ರಶ್ನಿಸಿದರು.
ದ್ವಂದ್ವ ಹೇಳಿಕೆಗೆ ಆಕ್ಷೇಪ
ಸಿದ್ದರಾಮಯ್ಯನವರಲ್ಲಿ ಒಂದು ಮನವಿ; ರಾಜ್ಯದ ಜನರನ್ನು ಏಕೆ ಗೊಂದಲಕ್ಕೆ ಸಿಲುಕಿಸುತ್ತೀರಿ? ನೀವು ಒಂದು ತೀರ್ಮಾನಕ್ಕೆ ಬನ್ನಿ ಕೊನೇ ಪಕ್ಷ ನಾವು ಪಾಕಿಸ್ತಾನದ ಪರ ಎಂದು ಹೇಳಿ ಬಿಡಿ. ನಿಮ್ಮನ್ನು ತಡೆದವರು ಯಾರು?. ಅಲ್ಲಿಗೆ ನಿಮ್ಮ ತೀರ್ಮಾನ ಏನು ಎಂಬುದು ತಿಳಿಯುತ್ತದೆ. ಈ ರೀತಿ ದ್ವಂದ್ವದ ಹೇಳಿಕೆ ನೀಡಬೇಡಿ ಎಂದು ಆಕ್ಷೇಪಿಸಿದರು.
ಸಂತೋಷ್ ಲಾಡ್ ರವರು ಹರಿಶ್ಚಂದ್ರರಂತೆ ವರ್ತಿಸುತ್ತಾರೆ. ಕರ್ನಾಟಕದಿಂದ ದಾಳಿ ನಡೆದ ಜಾಗಕ್ಕೆ ಕ್ರಿಕೆಟ್ ಆಟಗಾರರ ರೀತಿ ಉಡುಗೆ ತೊಟ್ಟುಕೊಂಡು ಕನ್ನಡಿಗರನ್ನು ರಕ್ಷಣೆ ಮಾಡಿದ್ದೇವೆ ಎಂದು ಹೇಳಿಕೆಯನ್ನು ಮಾಧ್ಯಮಗಳ ಮುಂದೆ ನೀಡುತ್ತಾರೆ. ಅದೇ ರೀತಿ ಸಚಿವರಾದ ತಿಮ್ಮಾಪುರ ಅವರ ಹೇಳಿಕೆಯನ್ನು ಗಮನಿಸಿದರೆ ಕಾಂಗ್ರೆಸ್ ನಾಯಕರು ಸಚಿವರಾಗುವುದಕ್ಕೆ ಯೋಗ್ಯರಿದ್ದಾರೆಯೇ? ಎಂದು ಕೇಳಿದರು.
ಇವರೆಲ್ಲ ಏಕೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆ?. ಈ ದೇಶದ ಜನರ ಮುಂದೆ ಕಾಂಗ್ರೆಸ್ ನಾಯಕರು ಮತ್ತು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಬೆತ್ತಲಾಗಿದೆ. ಅವರನ್ನು ನಂಬುವಂತಹ ಜನ ಇವತ್ತು ಉಳಿದಿಲ್ಲ. ಅದಕ್ಕೆ ಬಹುಶಃ ಸಿದ್ದರಾಮಯ್ಯ ನವರು ಈ ರಾಜ್ಯದಲ್ಲಾಗಲೀ ಅಥವಾ ದೇಶದಲ್ಲಾಗಲೀ ನಮಗೆ ರಾಜಕೀಯ ಭವಿಷ್ಯ ಇಲ್ಲವೆಂದು ಆ ರೀತಿಯ ಹೇಳಿಕೆಯನ್ನು ನೀಡಿರಬೇಕು.
ಯುದ್ಧವೆಂದು ಹೇಳಿದವರು ಯಾರು ?
ನಾವು ಯುದ್ಧದ ಪರವಿಲ್ಲ; ಯುದ್ಧ ಬೇಕಾಗಿಲ್ಲ ಎಂದಿದ್ದಾರೆ. ನಿಮಗೆ ಯುದ್ಧ ಮಾಡುತ್ತೇವೆ ಎಂದು ಯಾರು ಹೇಳಿದರು? ಮೋದಿಯವರು ಹೇಳಿದ್ದಾರೆಯೇ? ಸರ್ಕಾರ ತೀರ್ಮಾನ ಮಾಡಿದೆಯೇ?. ಅಂದರೆ ನಿಮ್ಮ ಮಾನಸಿಕತೆ ಹೇಗಿದೆ ಎಂಬುದು ತಿಳಿಯುತ್ತದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ನವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನದವರು ವಿಜೃಂಭಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಸಿದ್ದರಾಮಯ್ಯನವರು ಪಿಎಂ ಆಗಲು ಹೊರಟಿರುವ ಕಾರಣ ಪಾಕಿಸ್ತಾನದ ಜನರನ್ನು ಓಲೈಕೆ ಮಾಡುತ್ತಿದ್ದಾರೆ. ಪ್ರೀತಿಸುವುದು ಪಾಕಿಸ್ತಾನವನ್ನು ಅವರು ವಾಸಿಸುತ್ತಿರುವುದು ಕರ್ನಾಟಕದಲ್ಲಿ ಎಂದು ವ್ಯಂಗ್ಯವಾಡಿದರು.
ಯುದ್ಧ ಬೇಕೇ ಅಥವಾ ಬೇಡವೇ ಎಂದು ತೀರ್ಮಾನಿಸುವುದು ದೇಶದ ಪ್ರಧಾನಮಂತ್ರಿಯಾದ ಮೋದಿಯವರು; ನೀವಲ್ಲ. ನಿಮ್ಮ ನಡೆಯನ್ನು ಇಡೀ ದೇಶ ವಿರೋಧಿಸುತ್ತದೆ ಮತ್ತು ಖಂಡಿಸುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಚಾಟಿ ಬೀಸಿದರು.