ನವದೆಹಲಿ: ನಿರ್ಭಯಾ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನಾಲ್ವರು ಪ್ರಮುಖ ಅಪರಾಧಿಗಳಲ್ಲಿ ಓರ್ವ ಸುಪ್ರೀಂಕೋರ್ಟ್ನಲ್ಲಿ ಗುರುವಾರ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿದ್ದಾನೆ.
ಅಪರಾಧಿ ವಿನಯ್ ಶರ್ಮಾ ಪರ ವಕೀಲರಾದ ಎ.ಪಿ.ಸಿಂಗ್ ಅರ್ಜಿ ದಾಖಲಿಸಿದ್ದು, ಗಲ್ಲುಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದಾರೆ. ಘಟನೆ ನಡೆದಾಗ ವಿನಯ್ಗೆ ಕೇವಲ 19 ವರ್ಷ ವಯಸ್ಸಾಗಿತ್ತಷ್ಟೇ. ಚಿಕ್ಕ ವಯಸ್ಸು ಮತ್ತು ಸಾಮಾಜಿಕ-ಆರ್ಥಿಕ ಹಿನ್ನೆಲೆಯನ್ನು ಪರಿಗಣಿಸಿ ಕ್ಷಮಾದಾನ ನೀಡಿ ಎಂದು ವಿನಯ್ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ, ಅತ್ಯಾಚಾರ ಮತ್ತು ಕೊಲೆ ಸಂಬಂಧ ಇತರೆ 17 ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ವರ್ಗಾಯಿಸಿದ ಉದಾಹರಣೆಗಳಿವೆ. ಅದೇ ಮಾದರಿಯಲ್ಲಿ ವಿನಯ್ಗೂ ಪರಿಹಾರ ನೀಡಿ ಅರ್ಜಿಯಲ್ಲಿ ವಕೀಲರು ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ದೆಹಲಿ ಹೈಕೋರ್ಟ್2012ರಂದು ನಿರ್ಭಯಾ ಮೇಲೆ ಅತ್ಯಾಚರವೆಸಗಿ ಮೃಗೀಯವಾಗಿ ಹಿಂಸಿಸಿ ಕೊಲೆಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಾದ ಮುಕೇಶ್(32), ಪವನ್ ಗುಪ್ತಾ(25), ವಿನಯ್ ಶರ್ಮಾ(26) ಮತ್ತು ಅಕ್ಷಯ್ ಕುಮಾರ್ ಸಿಂಗ್(31)ಗೆ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಹೀಗಾಗಿ ನಾಲ್ವರನ್ನು ಜನವರಿ 22ರ ಬೆಳಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಕಾನೂನಿನ ಅಡಿಯಲ್ಲಿ ಉಳಿದಿರುವ ಕಟ್ಟಕಡೆಯ ಅವಕಾಶವೆಂದರೆ ಅದು ಕ್ಯುರೇಟಿವ್ ಅರ್ಜಿ ಸಲ್ಲಿಸುವುದಾಗಿದೆ. ಹೀಗಾಗಿ ಅಪರಾಧಿ ವಿನಯ್ ಅರ್ಜಿ ಸಲ್ಲಿಸಿ ಕೊನೆಯ ಪ್ರಯತ್ನಕ್ಕೆ ಕೈಹಾಕಿದ್ದಾನೆ. (ಏಜೆನ್ಸೀಸ್)