ನವದೆಹಲಿ: ಕಳೆದ ವರ್ಷದ ಜುಲೈ 9ರಂದು ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ನಾಯಕ ಎಂ.ಎಸ್.ಧೋನಿ ಅವರು ರನೌಟ್ ಆಗಿದ್ದು ಟೀಮ್ ಇಂಡಿಯಾ ಅಭಿಮಾನಿಗಳಿಗಾದ ಬಹುದೊಡ್ಡ ನಿರಾಸೆ ಎಂದು ಹೇಳಿದರೆ ತಪ್ಪಾಗಲಾರದು.
ಕೀವೀಸ್ ಪಡೆ ನೀಡಿದ ಕೇವಲ 240 ರನ್ ಗುರಿ ಬೆನ್ನತ್ತಿದ ಕೊಹ್ಲಿ ಪಡೆ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಾ ಸೋಲಿನ ದವಡೆಯತ್ತ ಸಾಗಿತ್ತು. ಆದರೆ ಕೊನೆಯಲ್ಲಿ ಅದ್ಭುತ ಜತೆಯಾಟವಾಡಿದ ಧೋನಿ ಮತ್ತು ರವೀಂದ್ರ ಜಡೇಜ ಪಂದ್ಯದ ದಿಕ್ಕನ್ನೇ ಬದಲಾಯಿಸಿದ್ದರು. ಕೊನೆಯ 2 ಓವರ್ನಲ್ಲಿ 31 ರನ್ ಬೇಕಿದ್ದಾಗ ಲುಕಿ ಫರ್ಗ್ಯೂಸನ್ ಎಸೆದ 49ನೇ ಓವರ್ನ ಮೊದಲನೇ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ್ದರು. ಆದರೆ ಮೂರನೇ ಎಸೆತದಲ್ಲಿ ಎರಡು ರನ್ ಕದಿಯಲು ಯತ್ನಿಸುವಾಗ ಲಾಂಗ್ ಆನ್ನಿಂದ ಮಾರ್ಟಿನ್ ಗುಪ್ಟಿಲ್ ಎಸೆದ ಚೆಂಡ್ ನೇರವಾಗಿ ವಿಕೆಟ್ಗೆ ಬಡಿದಿದ್ದು ಭಾರತೀಯ ಕ್ರೀಡಾಭಿಮಾನಿಗಳ ಎದೆಗೆ ಬರಸಿಡಿಲು ಬಡಿದಂತಾಯಿತು.
ಧೋನಿ ಇರೋವರೆಗೂ ಪಂದ್ಯ ನಮ್ಮದೇ ಅಂದುಕೊಂಡಿದ್ದ ಅಭಿಮಾನಿಗಳು ಧೋನಿ ನಿರ್ಗಮನದ ಬಳಿ ಸೋಲು ಗ್ಯಾರೆಂಟಿ ಎಂದು ನಿರ್ಣಯಿಸಿಕೊಂಡರು. ಅದರಂತೆ ಇಂಡಿಯಾ 18 ರನ್ ಅಂತರದಲ್ಲಿ ಪಂದ್ಯ ಸೋತು ವಿಶ್ವಕಪ್ನಿಂದಲೇ ಹೊರಬಿದ್ದಿತು. ವಿಪರ್ಯಾಸವೆಂದರೆ ಸೆಮಿಫೈನಲ್ಗೂ ಮುನ್ನ ಭಾರತ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ.
ಕಾಡುತ್ತಿದೆ ಧೋನಿಗೆ ಪಶ್ಚತಾಪ
ಮಹತ್ವದ ಪಂದ್ಯದಲ್ಲಿ ರನೌಟ್ ಆಗಿದ್ದು ಧೋನಿಗೆ ಇಂದಿಗೂ ಕಾಡುತ್ತಿದೆಯಂತೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಧೋನಿ, ಅಂದು ನಾನೇಕೆ ಡೈವ್ ಮಾಡಬಾರದಿತ್ತೆಂದು ನನ್ನಷ್ಟಕ್ಕೇ ನಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದೇನೆ. ಧೋನಿ ನೀನು ಡೈವ್ ಮಾಡಬಹುದಿತ್ತು ಎಂದು ನಾನೇ ಕೇಳಿಕೊಳ್ಳುತ್ತೇನೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂದು ಧೋನಿ ಔಟಾದಂತಹ ಸಮಯದಲ್ಲಿ ಭಾರತ ಗೆಲ್ಲಲು 10 ಬಾಲ್ಗೆ 25 ರನ್ ಬೇಕಾಗಿತ್ತು. ಇದು ಧೋನಿಗೆ ಸವಾಲೇನಲ್ಲ. ಏಕೆಂದರೆ ಉತ್ತಮ ಫೀನಿಶರ್ ಎಂಬ ಹೆಸರು ಗಳಿಸಿರುವ ಧೋನಿ, ಒಂದೇ ಓವರ್ನಲ್ಲಿ 20 ರನ್ ಬಾರಿಸಿ ಪಂದ್ಯ ಗೆಲ್ಲಿಸಿದ ಸಾಕಷ್ಟ ಉದಾಹರಣೆಗಳಿವೆ. ಆದರೆ ಸೆಮಿಫೈನಲ್ನಲ್ಲಿ ವಿಧಿಯಾಟವೇ ಬೇರೆ ಇತ್ತು ಅನಿಸುತ್ತದೆ.
ಇದೀಗ ಧೋನಿ ಅವರ ವಿದಾಯದ ಮಾತುಗಳು ಕೇಳಿಬರುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ಧೋನಿ ನಿವೃತ್ತಿ ಬಗ್ಗೆ ಮಾತನಾಡಿ, ಧೋನಿ ಏಕದಿನ ಪಂದ್ಯಗಳಿಗೆ ಆದಷ್ಟು ಬೇಗ ನಿವೃತ್ತಿ ಘೋಷಿಸಲಿದ್ದಾರೆ. ಆದರೆ ಟಿ20 ಮಾದರಿ ಪಂದ್ಯಗಳನ್ನು ಮುಂದುವರಿಸಲಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್)