ಹೂವಿನಹಿಪ್ಪರಗಿ: ಹೊಸ ವರ್ಷವೆಂದು ಯುವಜನತೆ ಮೌಢ್ಯತೆಯಿಂದ ಹೊರಬಂದು ಸುಂದರ ವಾತಾವರಣ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕು ಉಪಾಧ್ಯಕ್ಷ ಸುನೀಲ ರಾಠೋಡ ಹೇಳಿದರು.
ಸಮೀಪದ ಸಂಕನಾಳದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ನೇತೃತ್ವದಲ್ಲಿ ಹೊಸ ವರ್ಷ 2020ರ ನಿಮಿತ್ತ ಬುಧವಾರ ಹಂಚಿನಾಳ ಹಾಗೂ ಸಂಕನಾಳ ಗ್ರಾಮ ಘಟಕ ಹಾಗೂ ತಾಲೂಕು ಘಟಕಗಳ ಕರವೇ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವೆಂಕಟೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ ವರ್ಷ ಆಚರಣೆ ಹೆಸರಿನಲ್ಲಿ ದುಂದುವೆಚ್ಚದಲ್ಲಿ ಕುಡಿದು ಮೋಜು ಮಸ್ತಿ ಮೂಲಕ ಇನ್ನೊಬ್ಬರಿಗೆ ತೊಂದರೆ ನೀಡುವುದು ಸರಿಯಲ್ಲ. ಇದನ್ನು ಬಿಟ್ಟು ನಮ್ಮ ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದುಕೊಂಡು ಸ್ವದೇಶಿ ಸಂಸ್ಕೃತಿ ಮೈಗೂಡಿಸಿಕೊಂಡು ಸುಂದರ ಜೀವನ ನಡೆಸಬೇಕೆಂದು ಹೇಳಿದರು.
ಕರವೇ ತಾಲೂಕಾಧ್ಯಕ್ಷ ಮಹಾಂತೇಶ ಚಕ್ರವರ್ತಿ, ಕಾರ್ಯದರ್ಶಿ ರಾಜು ಬಿರಾದಾರ, ಶಂಕರ ವಡ್ಡರ, ಸಂಚಾಲಕ ಅಜೀತ ರಾಠೋಡ, ಗಣೇಶ ರಾಠೋಡ, ತಿಪ್ಪಣ್ಣ ಮಾದರ, ಮಾಳು ಗುಂಡಳ್ಳಿ, ಚೇತನ ರಾಠೋಡ, ಮಹೇಶ ರಾಠೋಡ, ಸಾಗರ ವಡ್ಡರ, ಶರಣಪ್ಪ ಪೂಜಾರಿ, ರಮೇಶ ರಾಠೋಡ ಮತ್ತಿತರರಿದ್ದರು.