ಫೆ.11ರಂದು ಮೈಲಾರ ಕಾರ್ಣಿಕೋತ್ಸವ
ಹೂವಿನಹಡಗಲಿ: ತಾಲೂಕಿನ ಮೈಲಾರದಲ್ಲಿ ಫೆ.11ರಂದು ಕಾರ್ಣಿಕೋತ್ಸವ ನಡೆಯಲಿದ್ದು, ಜ.30 ರೊಳಗೆ ಅಗತ್ಯ ಸಿದ್ಧತಾ ಕಾರ್ಯ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್ ಸೂಚಿಸಿದರು.
ಮೈಲಾರ ಗ್ರಾಮದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಆಯಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿರುವಂತೆ ಕುಡಿವ ನೀರು, ರಸ್ತೆ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ ಸೇರಿ ಮೂಲಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು. ಜಾತ್ರೆಗೂ ಮುನ್ನವೇ ಸುಕ್ಷೇತ್ರಕ್ಕೆ ಭಕ್ತರು ಬರುವ ಹಿನ್ನೆಲೆಯಲ್ಲಿ ಫೆ.8 ರಂದು ಹೊರ ವಲಯದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣ ಆರಂಭಿಸಬೇಕು. ಫೆ.9 ರಿಂದ ಬಸ್ಗಳನ್ನು ಸುಕ್ಷೇತ್ರದ ಒಳಗೆ ಬಿಡಬಾರದು. ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಕುಡಿವ ನೀರು, ಶೌಚಗೃಹ, ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಎಂದು ನಿರ್ದೇಶನ ನೀಡಿದರು.
ತಾಪಂ ಇಒ ಯು.ಎಚ್.ಸೋಮಶೇಖರ ಮಾತನಾಡಿದರು. ಜೆಸ್ಕಾಂ ಎಇಇ ಭಾಸ್ಕರ್, ಲೋಕೋಪಯೋಗಿ ಎಇಇ ಎಂ.ಜಿ.ಪಾಟೀಲ್, ಪಂಚಾಯತ್ ರಾಜ್ ಇಲಾಖೆ ಎಇಇ ಡಿ.ಜಯರಾಮ್ ನಾಯ್ಕ ಸಿದ್ಧತಾ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಸಿಪಿಐ ಮಾಲತೇಶ ಕೂನಬೇವು, ಪಿಎಸ್ಐ ರಾಮಣ್ಣ ನಾಯ್ಕ, ದೇವಸ್ಥಾನ ಸಿಬ್ಬಂದಿ ಶಂಕರಗೌಡ, ಘಟಕ ವ್ಯವಸ್ಥಾಪಕ ಎಂ.ವೆಂಕಟೇಶ, ಮುಖಂಡರಾದ ಮಂಜುನಾಥ, ಮಾಲತೇಶ, ಹನುಮಂತಪ್ಪ, ಗ್ರಾಪಂ ಸದಸ್ಯ ಅರವಂಟಿಗಿ ರವಿ, ಪಿಡಿಒ ರವೀಂದ್ರ ಇದ್ದರು.