ವಿಜಯಪುರ: ಸದಾ ಮನೆಯಾಚೆಯೇ ಇರುತ್ತಿದ್ದ ಹೆಂಡತಿಯಿಂದ ರೋಸಿ ಹೋಗಿದ್ದ ಎನ್ನಲಾದ ಪತಿ ಆಕೆಯನ್ನು ಮಾತ್ರವಲ್ಲದೆ ಆಕೆಯ ಅಮ್ಮನನ್ನೂ ಈ ಲೋಕದಾಚೆಗೇ ಕಳುಹಿಸಿಕೊಟ್ಟಂಥ ಪ್ರಕರಣವೊಂದು ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ಘಟನೆ ನಡೆದುಹೋಗಿದೆ.
ವಿಜಯಪುರ ನವಭಾಗ್ ಪ್ರದೇಶದ ಭಗವಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದ ಮಲ್ಲಿಕಾರ್ಜುನ ಎಂಬಾತನೇ ಆರೋಪಿ. ಈತ ತನ್ನ ಪತ್ನಿ ರೂಪಾ ಮೇತ್ರಿ (32) ಹಾಗೂ ಅತ್ತೆ ಕಲ್ಲವ್ವ (55) ಎಂಬವರನ್ನು ಕೊಲೆ ಮಾಡಿದ್ದಾನೆ. ಮಲ್ಲಿಕಾರ್ಜುನ ಈ ಮನೆಯಲ್ಲಿ ತನ್ನ ಪತ್ನಿ, ಮೂವರು ಮಕ್ಕಳು ಹಾಗೂ ಅತ್ತೆಯೊಂದಿಗೆ ಕಳೆದ 6 ತಿಂಗಳಿನಿಂದ ವಾಸವಿದ್ದ.
ಪತ್ನಿ ರೂಪಾ ಮಹಿಳಾ ಹಾಗೂ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು ಹೆಚ್ಚಾಗಿ ಮನೆಯಾಚೆಯೇ ಇರುತ್ತಿದ್ದಳು. ಇದರಿಂದ ಮಕ್ಕಳ ಲಾಲನೆ ಪಾಲನೆ ಕೂಡ ಸರಿಯಾಗಿ ಆಗುತ್ತಿಲ್ಲ ಎಂದು ಪತಿ ಮಲ್ಲಿಕಾರ್ಜುನ ರೋಸಿ ಹೋಗಿದ್ದ ಎಂಬುದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಮಲಗಿದ್ದ ಪತ್ನಿ ಹಾಗೂ ಅತ್ತೆಯ ತಲೆ ಮೇಲೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆಗೈದ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯರೇ ಹುಷಾರು: ‘ಶಕ್ತಿ’ ಮೀರಿ ಪ್ರಯಾಣಿಸುವ ಮುನ್ನ ಎಚ್ಚರಿಕೆ ಇರಲಿ..
ಕ್ರಿಯೇಟಿವ್ ಆಗುತ್ತಿರುವ ಪೊಲೀಸರು; ಬೆಂಗಳೂರು, ಹುಬ್ಬಳ್ಳಿ ಬಳಿಕ ಇದೀಗ ದೆಹಲಿ ಪೊಲೀಸರ ಸರದಿ