ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ಡ್ಯಾಂ ಭರ್ತಿ ಆಗುವ ಮುನ್ನ ಹೊಸ ಗೇಟ್ಗಳ ಅಳವಡಿಕೆ ಕಾರ್ಯ ಪೂರ್ಣ ಆಗಬೇಕಿದೆ. 19ನೇ ಕ್ರಸ್ಟ್ಗೇಟ್ ಇ-ಟೆಂಡರ್ ಪ್ರಕ್ರಿಯೆ ಮುಗಿದು 25 ದಿನ ಕಳೆದರೂ, ಅಳವಡಿಕೆ ಕಾರ್ಯ ಆರಂಭವಾಗಿಲ್ಲ.
ಕಳೆದ ಏ.17ರಂದು ಗುಜರಾತ್ ರಾಜ್ಯದ ಅಹಮದಾಬಾದ್ ಮೂಲದ ಹಾರ್ಡ್ವೇರ್ ಟೂಲ್ಸ್ ಅಂಡ್ ಮಷಿನರಿ ಪ್ರಾಜೆಕ್ಟ್ ಕಂಪನಿ 19ನೇ ಗೇಟ್ ಅಳವಡಿಕೆ ಟೆಂಡರ್ ಕಂಪನಿ ಪಡೆದಿದೆ. ತ್ವರಿತವಾಗಿ ಗೇಟ್ ನಿರ್ಮಾಣ ಕಾರ್ಯ ಆರಂಭಿಸಲಿದೆ ಎನ್ನಲಾಗಿತ್ತು. ಆದರೆ, ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಕಾಮಗಾರಿ ರೂಪು ರೇಷೆಗೆ ಅನುಮೋದನೆ ಸಿಗದಿರುವುದು ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.
ಈ ಬಾರಿ ಜಲಾಶಯವನ್ನು ಶೇ.80 ಮಾತ್ರ ಭರ್ತಿ ಮಾಡಬೇಕು ಎಂದು ತುಂಗಭದ್ರಾ ಮಂಡಳಿಗೆ ತಜ್ಞರು ಸಲಹೆ ನೀಡಿದ್ದಾರೆ. ಈಗಾಗಲೇ ಜಲಾಶಯಕ್ಕೆ ಒಳಹರಿವು ಆರಂಭವಾಗಿರುವುದರಿಂದ ಕ್ರಸ್ಟ್ಗೇಟ್ ಅಳವಡಿಕೆ ಇನ್ಯಾವಗ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಜಲಾಶಯ ಭರ್ತಿ ಆಗುವ ಮುನ್ನ ಗೇಟ್ಗಳ ಅಳವಡಿಕೆ ಆಗಲಿ ಎಂಬುದು ಈ ಭಾಗದ ರೈತರ ಒತ್ತಾಸೆಯಾಗಿದೆ.
ಜಲಾಶಯದ 19ನೇ ಕ್ರಸ್ಟ್ಗೇಟ್ 2024ರ ಆ.10ರ ತಡರಾತ್ರಿ ಕಳಚಿತ್ತು. ಇದರಿಂದ 40 ಟಿಎಂಸಿ ನೀರು ನದಿ ಪಾಲಾಗಿತ್ತು. ಇದರಿಂದ ಕರ್ನಾಟಕ, ಆಂಧ್ರ, ತೆಲಂಗಾಣದ ರೈತರಿಗೆ ಹಾಗೂ ಕುಡಿವ ನೀರಿನ ಆತಂಕ ಮೂಡಿತ್ತು. ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಸ್ಟಾಪ್ಲಾಗ್ ಅಳವಡಿಕೆ ಮಾಡಲಾಗಿತ್ತು. 19ನೇ ಗೇಟ್ ಇ-ಟೆಂಡರ್ ಪ್ರಕ್ರಿಯೆ ಮುಗಿದಿದೆ. ಉಳಿದ ಕ್ರಸ್ಟ್ಗೇಟ್ಗಳನ್ನು ಬದಲಿಸಲು ಇ-ಟೆಂಡರ್ ಕರೆಲಾಗಿದ್ದು, ಮೇ 13ರಂದು ಟೆಂಡರ್ ತೆರೆಯಲಾಗುತ್ತದೆ.
ಹರಿದುಬರುತ್ತಿದೆ ನೀರು
ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಪೂರ್ವ ಕೂಡ ಉತ್ತಮ ಮಳೆ ಆಗುತ್ತಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಜಲಾಶಯಕ್ಕೆ ಏ.8ರಂದು 5215 ಕ್ಯೂಸೆಕ್ ನೀರು ಹರಿದು ಬಂದಿದೆ. ಆ ಬಳಿಕ ಏ.25ರಂದು ಜಲಾಶಯಕ್ಕೆ 1640 ಕ್ಯೂಸೆಕ್ ನೀರು ಹರಿದು ಬಂದಿದೆ. ಕಳೆದ 16 ದಿನಗಳಲ್ಲಿ ಒಂದು ಟಿಎಂಸಿಗೂ ಹೆಚ್ಚಿನ ನೀರು ಹರಿದು ಬಂದಿದೆ. ಕಳೆದ ವರ್ಷ ಈ ದಿನಗಳಲ್ಲಿ ಜಲಾಶಯಕ್ಕೆ ಒಳಹರಿವು ಆರಂಭ ಆಗಿರಲಿಲ್ಲ.
ಡ್ಯಾಂ ನತ್ತ ರೈತರ ಚಿತ್ತ
ವಿಜಯನಗರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆ, ಅಂಧ್ರಪ್ರದೇಶ ಮತ್ತು ತೆಲಂಗಾಣದ ರೈತರು ಮುಂಗಾರು ಹಂಗಾಮಿನ ಬೆಳೆಗಾಗಿ ತುಂಗಭದ್ರಾ ಜಲಾಶಯದತ್ತ ಮುಖ ಮಾಡಿದ್ದಾರೆ. ಆದರೆ, ಗೇಟ್ಗಳ ಬದಲಾವಣೆಯಿಂದಾಗಿ ಜಲಾಶಯಕ್ಕೆ ಯಾವಾಗಿನಿಂದ ನೀರು ಹರಿಸಲಾಗುತ್ತದೆ ಎಂಬುದರ ಬಗ್ಗೆ ಅನಿಶ್ಚಿತತೆ ಇದೆ. ಎಲ್ಲ ಗೇಟ್ಗಳ ಬದಲಾವಣೆ ಮಾಡಿದರೆ ನಾಲೆಗಳಿಗೆ ನೀರು ಬಿಡುಗಡೆ ವಿಳಂಬವಾಗುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ಕ್ರಸ್ಟ್ ಗೇಟ್ಗಳ ಅಳವಡಿಕೆ ಕಾರ್ಯದ ಮಾಹಿತಿಗಾಗಿ ಡ್ಯಾಂ ಅಧಿಕಾರಿಗಳ ಸಭೆ ಸೋಮವಾರ ಕರೆಯಲಾಗಿದೆ. ಸ್ಥಿತಿಗತಿಯ ಮಾಹಿತಿ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.
| ಎಂ.ಎಸ್.ದಿವಾಕರ ಜಿಲ್ಲಾಧಿಕಾರಿ, ವಿಜಯನಗರ
ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಆರಂಭವಾಗಿರುವುದು ಸಂತಸ ತಂದಿದೆ. ತುಂಗಭದ್ರಾ ಮಂಡಳಿ ಕ್ರಸ್ಟ್ಗೇಟ್ಗಳ ಬದಲಾವಣೆ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಲಿ.
| ಸಿ.ಎ.ಗಾಳೆಪ್ಪ ರೈತ, ಹೊಸಪೇಟೆ