ಹೊಸಪೇಟೆ: ವಿಶ್ರಾಂತ ಕುಲಪತಿ, ಸಾಹಿತಿ ಡಾ.ಎಚ್.ಜೆ.ಲಕ್ಕಪ್ಪಗೌಡರು ಕನ್ನಡ ವಿವಿಯನ್ನು ಶೈಕ್ಷಣಿಕ, ಬೌದ್ಧಿಕ ಮತ್ತು ಭೌತಿಕವಾಗಿ ಶ್ರೀಮಂತಗೊಳಿಸಿದ್ದರು. ಅವರ ಅಗಲಿಕೆ ಕನ್ನಡ ವಿವಿ ಕುಟುಂಬಕ್ಕೆ ತುಂಬ ನೋವುಂಟು ಮಾಡಿದೆ ಎಂದು ಕುಲಪತಿ ಡಾ.ಸ.ಚಿ.ರಮೇಶ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು. ಡಾ.ಎಚ್.ಜೆ.ಲಕ್ಕಪ್ಪಗೌಡರು ಬಡವರು ಮತ್ತು ಶೋಷಿತ ವರ್ಗದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಕವಿ, ವಿಮರ್ಶಕ, ಪ್ರಾಧ್ಯಾಪಕ, ಆಡಳಿತಗಾರರಾಗಿ ಯಶಸ್ಸು ಕಂಡವರು. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸ್ನೇಹಜೀವಿಯಾಗಿದ್ದರು. ಸುಮಾರು 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ವಿಶ್ವವಿದ್ಯಾಲಯವು ಬಡವಾಗಿದೆ ಎಂದರು.
ಡಾ.ವಿಠಲರಾವ್ ಗಾಯಕ್ವಾಡ್, ಚರಿತ್ರೆ ವಿಭಾಗದ ಮುಖ್ಯಸ್ಥ ಡಾ.ವಿಜಯಕುಮಾರ್, ಸಹಾಯಕ ಕುಲಸಚಿವ ಡಾ.ಎಸ್.ವೈ.ಸೋಮಶೇಖರ್, ಡೀನ್ ಡಾ.ಪಿ.ಆರ್.ಗೋವಿಂದರಾಜ್, ಡಾ.ಅಮರೇಶ್ ಯಾತಗಲ್ ಇದ್ದರು.