ಹೊಸಪೇಟೆ: ಹಸಿ ಮತ್ತು ಒಣ ಕಸಗಳನ್ನು ಪ್ರತ್ಯೇಕಿಸಿ ನೀಡುವಂತೆ ನಗರದ ನಾಗರಿಕರಿಗೆ ಜಾಗೃತಿ ಮೂಡಿಸಬೇಕಿದೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.

ನಗರದ 35ನೇ ವಾರ್ಡ್ ನ ಪಾರ್ವತಿ ನಗರದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 1.37 ಕೋಟಿ ರೂ. ವೆಚ್ಚದಲ್ಲಿ 45 ಸಾವಿರ ಮನೆಗಳಿಗೆ ಹಸಿ ಮತ್ತು ಒಣ ಕಸಗಳ ಬಕೆಟ್ ಗಳನ್ನು ಮನೆಗಳಿಗೆ ಹಂಚುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದರು.
ಕಸದ ವಾಹನ ಪ್ರತಿದಿನ ಎಲ್ಲ ವಾರ್ಡ್ಗಳಿಗೂ ಬಂದು ಕಸ ಸಂಗ್ರಹ ಮಾಡುತ್ತಿದೆ. ಹಸಿ ಮತ್ತು ಒಣಗಿದ ಕಸವನ್ನು ಬೇರ್ಪಡಿಸಿ ನೀಡುವುದರಿಂದ ಬಹಳಷ್ಟು ಅನುಕೂಲವಾಗುತ್ತದೆ. ಕಸದ ಗಾಡಿಯಲ್ಲಿ ಹಸಿ ಮತ್ತು ಒಣ ಕಸವನ್ನು ಹಾಕಲು ಪ್ರತ್ಯೇಕ ಟ್ಯಾಂಕ್ ಇಡಲಾಗಿದೆ. ಈಗಾಗಲೇ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ವರ್ತಕರು ಸಹಕರಿಸಬೇಕು ಎಂದರು.
ನಗರ ಸ್ವಚ್ಛವಾಗಿದ್ದರೆ ಮಾತ್ರ ಆರೋಗ್ಯಯುತ ಜೀವನ ಸಾಧ್ಯ. ಮನೆಯ ಅಕ್ಕಪಕ್ಕದ ಪರಿಸರ ಉತ್ತಮವಾಗಿದ್ದರೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು. ಹಸಿ-ಒಣ ಕಸ ಬೇರ್ಪಡಿಸಿ ಕೊಡದಿದ್ದರೆ ನಗರಸಭೆ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗುತ್ತದೆ ಎಂದರು.
ಪ್ರತಿ ವಾರ್ಡ್ನಲ್ಲೂ ಕಸ ತುಂಬಿಸಿಕೊಳ್ಳುವ ಆಟೊಗಳು ಬಂದಾಗ ಮನೆಯ ಕಸವನ್ನು ನೀಡಬೇಕು. ರಸ್ತೆ, ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯಬಾರದು. ಮನೆ ಸುತ್ತಮುತ್ತ ಇರುವ ಖಾಲಿ ಜಾಗಕ್ಕೆ ಹಾಕುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದರು.