ಹೊಸಪೇಟೆ: ಸಂಶೋಧನಾರ್ಥಿಗಳು ಒಮ್ಮೆ ಸಂವಿಧಾನವನ್ನು ಓದಲೇಬೇಕು ಎಂದು ಸಂಸ್ಕೃತಿ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಕರೆ ನೀಡಿದರು.
ಕನ್ನಡ ವಿವಿಯ ದಲಿತ ಸಂಸ್ಕೃತಿ ಅಧ್ಯಯನ ಪೀಠದಿಂದ ಪಂಪ ಸಭಾಂಗಣದಲ್ಲಿ ಭಾರತ ಸಂವಿಧಾನ ಸಮರ್ಪಣ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಸ್ವತಂತ್ರ ಭಾರತಕ್ಕೆ ಸಂವಿಧಾನ ಸಮರ್ಪಣ ಮಾಡಿದ ದಿನ ನ.26 ಐತಿಹಾಸಿಕವಾಗಿದೆ. ಬಹುಸಂಸ್ಕೃತಿ ಬಹುಧರ್ಮ, ಬಹು ಸಾಮಾಜಿಕ ಸ್ಥಳೀಯ ರಚನೆಗಳಿರುವ ಭಾರತ ದೇಶದಲ್ಲಿ ಬಹುಶಿಸ್ತೀಯ ಜೀವಾಳ ಅಡಗಿರುವ ಸಂವಿಧಾನ ಪುಸ್ತಕವನ್ನೇ ಅಂಬೇಡ್ಕರ್ ನಮಗೆ ಕೊಟ್ಟರು. ಸಂವಿಧಾನ ರಚಿಸುವಾಗ ಅಂಬೇಡ್ಕರ್ ಅವರ ಮುಂದೆ ಅನೇಕ ಸವಾಲುಗಳಿದ್ದವು. ಎಲ್ಲ ಸವಾಲುಗಳ ನಡುವೆಯು ಅಂಬೇಡ್ಕರ್ ಧರ್ಮ ನಿರಪೇಕ್ಷವಾಗಿರುವ ಸಂವಿಧಾನವನ್ನು ಕಟ್ಟುತ್ತಿದ್ದರು. ಪೀಠಿಕೆಯ ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಸಂವಿಧಾನದ ತಿದ್ದುಪಡಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಂವಿಧಾನದ ಪರಿಷ್ಕರಣೆಗೆ, ಬದಲಾವಣೆಗೆ ಎಲ್ಲಿಯೂ ಅವಕಾಶ ನೀಡಿಲ್ಲ ಎಂದರು.
ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಜ್ಞಾನದ ಅಸಮಾನತೆ, ಸಂಪತ್ತಿನ ಅಸಮಾನತೆ, ಸಾಮಾಜಿಕ ಅಸಮಾನತೆಗಳ ನಡುವೆ ಸಂವಿಧಾನ ನಮಗೆ ಸಮಾನತೆ ನೀಡಿದೆ. ನಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಇದನ್ನು ಗಟ್ಟಿ ಮಾಡುವತ್ತ ನಾವೆಲ್ಲ ಹೆಜ್ಜೆ ಹಾಕೋಣ ಎಂದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬAಡ ಮಾತನಾಡಿ, ಜಾತ್ಯಾತೀತ ಪದ ಬಳಕೆಯ ಆಕ್ಷೇಪ ತಳ್ಳಿಹಾಕಿದ ಸುಪ್ರೀಂ ಕೋರ್ಟಿನ ತೀರ್ಮಾನವು ಹೆಮ್ಮೆಯ ವಿಷಯವಾಗಿದೆ. ಸಂವಿಧಾನದ ಒಂದೊAದು ತಿದ್ದುಪಡಿಗಳು ಚರಿತ್ರಾರ್ಹವಾಗಿವೆ. ಸೆಕ್ಯೂಲರಿಸಂ ಜೀವನದ ಪದ್ಧತಿಯಾಗಿದೆ. ಜೀವನದ ಮೌಲ್ಯವಾಗಿದೆ. ಇಂದು ನಾವೆಲ್ಲ ಭಾರತೀಯರು ಎಂಬ ಗೌರವ ಕಡಿಮೆಯಾಗಿ ಧರ್ಮ, ಜಾತಿ, ವಿಜೃಂಭಿಸುತ್ತಿವೆ ಎಂದು ವಿಷಾದಿಸಿದರು.
ಪೀಠದ ಸಂಚಾಲಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಸಂಶೋಧನಾರ್ಥಿ ಮಣಿಕಂಠ ಇತರರಿದ್ದರು.