ಬೆಂಗಳೂರು: ಟ್ರೇಡಿಂಗ್ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 1.52 ಕೋಟಿ ರೂ. ಹೂಡಿಕೆ ಮಾಡಿಸಿಕೊಂಡು ಸೈಬರ್ ಕಳ್ಳರು ವಂಚಿಸಿದ್ದಾರೆ.
ಯಲಹಂಕದ ವೆಂಕಟಾಲದ ವ್ಯಕ್ತಿ ವಂಚನೆಗೆ ಒಳಗಾದವರು. ಇವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಇದರ ಮೇರೆಗೆ ಎಮಿಲಾ ಸಿಂಗ್ ಮತ್ತು ಪಂಕಜ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಸ್ಟಾಕ್ ಮಾರ್ಕೆಟ್ ಕುರಿತು ತರಬೇತಿ ಕೊಡುವುದಾಗಿ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿಸಿಕೊಂಡಿದ್ದಾರೆ. ಪ್ರತಿದಿನ 1 ಗಂಟೆಗಳ ಕಾಲ ಸ್ಟಾಕ್ ಮಾರ್ಕೆಟ್ ಕುರಿತು ತರಬೇತಿ ನೀಡಿದ್ದಾರೆ. ಬಳಿಕ ಆ್ಯಪ್ಯೊಂದರ ಲಿಂಕ್ ಕಳುಹಿಸಿ ಡೌನ್ಲೊಡ್ ಮಾಡಿಸಿ ಷೇರು ಖರೀದಿಗೆ ಸಲಹೆ ಕೊಟ್ಟಿದ್ದಾರೆ. ದೂರುದಾರರ ಬಳಿ ಹಣ ಇಲ್ಲದೆ ಇದ್ದರೂ ಒತ್ತಾಯ ಮಾಡಿ ಅವರ ಮನೆಯ ದಾಖಲೆ ಪತ್ರ ಮತ್ತು ಚಿನ್ನಾಭರಣ ಅಡಮಾನವಿಟ್ಟು ಸಾಲ ಪಡೆದು 10 ಪಟ್ಟು ಹೆಚ್ಚಿನ ಲಾಭ ಸಿಗಲಿದೆ ಎಂಬ ಆಸೆಯಿಂದ ಹೂಡಿಕೆ ಮಾಡಿದ್ದರು. ಏಪ್ರಿಲ್ 18ರಿಂದ ಮೇ 23ರ ನಡುವೆ ದೂರುದಾರ, ಆರೋಪಿಗಳ 15 ಬ್ಯಾಂಕ್ ಖಾತೆಗೆ 1.52 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ.
ಮತ್ತೊಂದೆಡೆ ಆ್ಯಪ್ನಲ್ಲಿ ಇವರ ಹೆಸರಿನಲ್ಲಿ 28.67 ಕೋಟಿ ರೂ. ಬ್ಯಾಲೆನ್ಸ್ ಇರುವುದಾಗಿ ತೋರಿಸಿದ್ದರು. ಜೂನ್ 10ರಂದು ಹಣ ವಿತ್ ಡ್ರಾ ಮಾಡಲು ದೂರುದಾರ ಪ್ರಯತ್ನ ಮಾಡಿದಾಗ ಸಾಧ್ಯವಾಗಿಲ್ಲ. ಪ್ರಶ್ನೆ ಮಾಡಿದಾಗ 75 ಲಕ್ಷ ರೂ. ಜಮೆ ಮಾಡಿದರೆ 28 ಕೋಟಿ ರೂ. ವಿತ್ ಡ್ರಾ ಮಾಡಲು ಅವಕಾಶ ನೀಡುವುದಾಗಿ ಷರತ್ತು ವಿಧಿಸಿದ್ದರು.
ಅದಕ್ಕೆ ಒಪ್ಪದೆ ವಿತ್ ಡ್ರಾಗೆ ಒತ್ತಾಯ ಮಾಡಿದಾಗ ಆ್ಯಪ್ನ್ನು ಡಿಲೀಟ್ ಮಾಡಿ ಸೈಬರ್ ಕಳ್ಳರು ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ನೊಂದ ದೂರುದಾರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.