ಹೊಳಲ್ಕೆರೆ: ವ್ಯಕ್ತಿಯೊಬ್ಬ ಉತ್ತಮ ಪ್ರಜೆ ಆಗಬೇಕಾದರೆ ಕಾನೂನು ಕುರಿತು ಹೆಚ್ಚು ತಿಳಿದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರೇಮಾ ವಸಂತರಾವ್ ಪವಾರ್ ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ರಥ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾನೂನು ತಿಳಿವಳಿಕೆ ನೆಮ್ಮದಿ ಬದುಕಿಗೆ ದಾರಿ ಆಗಲಿದೆ. ಜತೆಗೆ ದೌರ್ಜನ್ಯಕ್ಕೆ ಒಳಗಾಗದಿರಲು ಅವಕಾಶ ಕಲ್ಪಿಸಲಿದೆ ಎಂದರು.
ಕಾನೂನು ಸಾಕ್ಷರತೆ ಎಂಬುದು ಜೀವನ ಯಾತ್ರೆಯಂತೆ. ಹುಟ್ಟಿನಿಂದ ಸಾವಿನವರೆಗೂ ಮಾನವನ ಜೀವನದಲ್ಲಿ ಕಾನೂನು ಹಾಸು ಹೊಕ್ಕಾಗಿದ್ದು, ಕಾನೂನಿನ ಅರಿವು ಅತೀ ಅಗತ್ಯ ಎಂದು ಹೇಳಿದರು.
ಜೀವನದಲ್ಲಿ ಪ್ರತಿಯೊಂದು ವಿಚಾರಗಳು ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ. ಕಾನೂನಿನ ಅರಿವಿದ್ದಾಗ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
ಸಾಸಲು, ಕಾಳಘಟ್ಟ, ದಂಡಿಗೇನಹಳ್ಳಿ, ತುಪ್ಪದಹಳ್ಳಿ, ದೊಗ್ಗನಾಳ್, ಆರ್.ನುಲೇನೂರು, ಗ್ಯಾರೇಹಳ್ಳಿ, ಚಿಕ್ಕಂದವಾಡಿ, ಚನ್ನಪಟ್ಟಣ, ಬೋರೇನಹಳ್ಳಿ, ಕುಮ್ಮಿನಘಟ್ಟ, ಮಲಸಿಂಗನಹಳ್ಳಿ ಗ್ರಾಮಗಳಲ್ಲಿ ರಥ ಯಾತ್ರೆ ಜರುಗಿತು.
ನ್ಯಾಯಾಧೀಶ ರವಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ತಹಸೀಲ್ದಾರ್ ಕೆ.ನಾಗರಾಜ್, ಇಒ ತಾರಾನಾಥ್, ಪಪಂ ಮುಖ್ಯಾಧಿಕಾರಿ ವಾಸೀಂ, ಟಿಎಚ್ಒ ಜಯಸಿಂಹ ಇತರರು ಉಪಸ್ಥಿತರಿದ್ದರು.