ದೇವದುರ್ಗ: ಏಡ್ಸ್ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆ ಜನರಿಗೆ ಎಚ್ಐವಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಚ್.ಎ.ಸಾತ್ವಿಕ್ ಹೇಳಿದರು.
ಇದನ್ನೂ ಓದಿ: ಏಳು ತಿಂಗಳಲ್ಲಿ 86 ಜನರಿಗೆ ಎಚ್ಐವಿ ಸೋಂಕು
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಸೋಂಕಿತರನ್ನು ಕೀಳಾಗಿ ಕಾಣದೆ ಎಲ್ಲರಂತೆ ಸಮಾನರಾಗಿ ನೋಡಬೇಕಿದೆ. ಗ್ರಾಮೀಣ ಜನರಿಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯ. ರೋಗ ತಡೆಗಟ್ಟಲು ಅನುಸರಿಸಬೇಕಾದ ನಿಯಮ ಕುರಿತು ಅರಿವು ಮೂಡಿಸಬೇಕಿದೆ.
ಏಡ್ಸ್ ನಿರ್ಮೂಲನೆಗೆ ಆರೋಗ್ಯ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು. ಆರೋಗ್ಯವೇ ಪ್ರತಿಯೊಬ್ಬ ವ್ಯಕ್ತಿಯ ಸಂಪತ್ತು. ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಆಪ್ತ ಸಮಲೋಚಕ ನಂದಕುಮಾರ ಮಾತನಾಡಿ, ಎಚ್ಐವಿ ಸೋಂಕಿತರಿಗೆ ಸರ್ಕಾರದಿಂದ ಧನಶ್ರೀ ಯೋಜನೆಯಡಿ ಉಚಿತ ಚಿಕಿತ್ಸೆ ಹಾಗೂ ಆರೋಗ್ಯ ಸಲಹೆ ಇದೆ. ವಾರ್ಷಿಕ ಸಹಾಯಧನ ನೀಡಲಾಗುತ್ತಿದೆ. ಏಡ್ಸ್ ಸೋಂಕಿತರ ಸ್ಥಾನದಲ್ಲಿ ರಾಯಚೂರು 6ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
8ಸೋಂಕಿತರಿಗೆ ಸಹಾಯಧನ ವಿತರಿಸಲಾಯಿತು.
ಸಿವಿಲ್ ನ್ಯಾಯಾಧೀಶ ಬಾಳಸಾಹೇಬ್ ವಡವಡೆ, ಐಸಿಟಿಸಿ ಆಪ್ತ ಸಮಾಲೋಚಕ ನಾಗಲಿಂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸಯ್ಯ ಹಿರೇಮಠ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಕ್ಷಯ ರೋಗ ಮೇಲ್ವಿಚಾರಕ ರವಿಶುಕ್ಲ, ಮಹೇಶ ನಾಯಕ, ಭೀಮೇಶ ಕಾವಲಿ, ಶರೋನಾ ಇತರರಿದ್ದರು.