ಹಿರಿಯೂರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಪ್ರಮುಖ, ವಿಶಿಷ್ಟ ಪಾತ್ರವಹಿಸಿದ್ದರು ಎಂದು ಸಮಾಜ ಸೇವಕ ಮಂಜುನಾಥ್ ಹೇಳಿದರು.
ನಗರದ ಗಾಂಧಿ ವೃತ್ತದಲ್ಲಿ ನೇತಾಜಿ ಯುವಕ ಸಂಘದಿಂದ ಶುಕ್ರವಾರ ಏರ್ಪಡಿಸಿದ್ದ ಸುಭಾಷ್ ಚಂದ್ರಬೋಸ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯಕ್ಕಾಗಿ ಭಾರತೀಯ ರಾಷ್ಟ್ರೀಯ ಸೇನೆ ಸ್ಥಾಪಿಸಿ, ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ ಎಂಬುದು ಅವರ ಘೋಷವಾಕ್ಯವಾಗಿತ್ತು ಎಂದರು.
ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂತಹ ಸರಕಲ್ಲ, ಅದು ನಾವು ಹೋರಾಡಿ ಪಡೆದುಕೊಳ್ಳಬೇಕೆಂಬುದು ನೇತಾಜಿ ಅವರ ನಿಲುವಾಗಿತ್ತು. ಇಂದಿನ ಯುವ ಸಮೂಹ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ತತ್ವಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಸದಾ ಸಿದ್ಧರಿರಬೇಕು ಎಂದು ತಿಳಿಸಿದರು.
ನೇತಾಜಿ ಯುವಕ ಸಂಘದವರು ಸುಭಾಷ್ ಚಂದ್ರಬೋಸ್ ಅವರ ವೇಷ ಧರಿಸಿ, ನಗರದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಸ್ವಾತಂತ್ರ್ಯ ಚಳವಳಿ, ಪರಂಪರೆ, ಸಂಸ್ಕೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಸಿಹಿ ಹಂಚಿದರು.
ಸಂಘದ ಪದಾಧಿಕಾರಿಗಳಾದ ರಮೇಶ್ ಬಾಬು, ನಟರಾಜ್, ಚೇತನ್, ಹರ್ಷ, ಕುಮಾರ್, ಪ್ರಕಾಶ್, ಯೋಗೀಶ್ವರ್ ಇತರರಿದ್ದರು.