ಹಿರಿಯೂರು: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ ಅವರ ಚಿಂತನೆ, ತತ್ವಾದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳುವುದು ತುರ್ತು ಅಗತ್ಯವಿದೆ ಎಂದು ಪ್ರಾಚಾರ್ಯ ಡಾ.ಡಿ.ಧರಣೇಂದ್ರಯ್ಯ ಹೇಳಿದರು.
ಮಹಾತ್ಮ ಗಾಂಧೀಜಿ 150ನೇ ಜಯಂತಿ ಅಂಗವಾಗಿ ನೆಹರು ಯುವ ಕೇಂದ್ರ, ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ, ಎನ್ನೆಸ್ಸೆಸ್ ಘಟಕ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಇಲ್ಲಿನ ದೇವಗಿರಿ ನಗರದ ಉದ್ಯಾನವನದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಮತ್ತು ಶ್ರಮದಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿ ಸತ್ಯ, ಶಾಂತಿ, ಅಹಿಂಸಾ ತತ್ವಗಳನ್ನು ವಿಶ್ವಕ್ಕೆ ಪರಿಚಯಿಸಿ ಯುಗ ಪುರುಷ. ಅವರ ಜೀವನದ ಯಶೋಗಾಥೆ ನಮ್ಮೆಲ್ಲರಿಗೂ ಸ್ಫೂರ್ತಿಯಾಗಬೇಕು. ಹಿಂದು, ಮುಸ್ಲಿಮರು ಭಾವೈಕ್ಯದಿಂದ ಬದುಕಬೇಕು ಎಂಬುದು ಅವರ ಆಶಯವಾಗಿತ್ತು ಎಂದು ತಿಳಿಸಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸ್ವಚ್ಛತೆ ಮತ್ತು ಸುಖಿರಾಜ್ಯ ಗಾಂಧೀಜಿ ಅವರ ಪರಿಕಲ್ಪನೆಯಾಗಿದ್ದು ದೈಹಿಕ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ದೈಹಿಕಶ್ರಮ ಅಗತ್ಯ. ಉತ್ತಮ ಆರೋಗ್ಯಕ್ಕೆ ಯೋಗ, ಪರಿಶುದ್ಧ ನೀರು, ಗಾಳಿ ಸೇವನೆಯೂ ಅಷ್ಟೇ ಅವಶ್ಯಕ. ಮನೆ, ಸುತ್ತಮುತ್ತ ಪರಿಸರ, ಉದ್ಯಾನವನ, ಒಳಚರಂಡಿ ಶುಚಿಯಾಗಿಟ್ಟುಕೊಂಡರೆ ರೋಗಮುಕ್ತ ಜೀವನ ನಡೆಸಬಹುದು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಎಚ್.ತಿಪ್ಪೇಸ್ವಾಮಿ, ಎನ್ನೆಸ್ಸೆಸ್ ಅಧಿಕಾರಿಗಳಾದ ಬಿ.ಇ.ಜಗನ್ನಾಥ್, ಜಿ.ಎಸ್.ರಾಮಪ್ಪ, ವೈ.ಮಂಜುನಾಥ್, ಟಿ.ಕರಿಯಣ್ಣ, ಸುಮಯ್ಯಬಾನು, ಸುನೀಲ್, ಮಹೇಶ್ಕುಮಾರ್ ಇತರರಿದ್ದರು.
ಸ್ವಚ್ಛತಾ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕರ್ತರು ಭಾಗವಹಿಸಿದ್ದರು.