ದಾವಣಗೆರೆ: ಮುಸ್ಲಿಂ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಎಂಬ ಆರೋಪದ ಮೇಲೆ ಗುಂಪೊಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ಮೆರೆದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆಯ ಜಾಲಿನಗರ ನಿವಾಸಿ ಶ್ರೀನಿವಾಸ್ ಹಲ್ಲೆಗೊಳಗಾದ ಯುವಕ ಎಂದು ತಿಳಿದು ಬಂದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ದಾವಣೆಗೆರೆ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿಂದೂ ಸಂಘಟನೆಯ ಸದಸ್ಯರೊಬ್ಬರು, ಒಂದು ವೇಳೆ ಯುವಕ ಶ್ರೀನಿವಾಸ್ ಯುವತಿಯೊಂದಿಗೆ ಅನುಚಿತವಾಗಿ ವರ್ತಸಿದ್ದರೆ ಆತನನ್ನು ಹಿಡಿದು ದೂರು ದಾಖಲಿಸಿ ಪೊಲೀಸರಿಗೆ ಒಪ್ಪಿಸಬೇಕಿತ್ತು. ಬದಲಾಗಿ ಗುಂಪೊಂದು ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಾರೆ.
ಇದನ್ನೂ ಓದಿ: ಬಾಂಬ್ ಬೆದರಿಕೆ ಪ್ರಕರಣ; ರಾಜಭವನಕ್ಕೆ ಬಂದಿದ್ದು ಹುಸಿ ಕರೆ ಎಂದು ಸ್ಪಷ್ಟನೆ ನೀಡಿದ ಪೊಲೀಸರು
ದುಷ್ಕರ್ಮಿಗಳು ಯುವಕನನ್ನು ಖಾಸಗಿ ಶಾದಿ ಮಹಲ್ ಒಳಗೆ ಕರೆದೊಯ್ದು ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿ ಪರಾರಿಯಾಗಿದ್ದಾರೆ. ಯುವಕನಿಗೆ ಈಗಾಗಲೇ ನಿಶ್ಚಿತಾರ್ಥವಾಗಿದ್ದು, ಆತನಿಗೆ ಮುದವೆ ನಿಶ್ಚಯವಾಗಿದೆ. ಒಂದು ವೇಳೆ ಆತ ತಪ್ಪು ಮಾಡಿದ್ದರೆ ಪೊಲೀಸರಿಗೆ ಒಪ್ಪಿಸಬೇಕಿತ್ತು. ಅದನ್ನು ಬಿಟ್ಟು ಆತನ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ಮೆರೆಯುವ ಅವಶ್ಯಕತೆಯಿತ್ತಾ.
ಘಟನೆ ನಡೆದು ಮೂರು ದಿನಗಳು ಕಳೆಯುತ್ತಾ ಬಂದರೂ ಪೊಲೀಸರು ಈವರೆಗೂ ಪ್ರಕರಣದ ಒಬ್ಬ ಆರೋಪಿಯನ್ನು ಈವರೆಗೆ ಬಂಧಿಸಿಲ್ಲ. ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ಎಸಗಿದ ಪುಂಡರನ್ನು ಈ ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಹಿಂದೂ ಸಂಘಟನೆಯ ಸದಸ್ಯರು ಆಗ್ರಹಿಸಿದ್ದಾರೆ.