ನಂಜನಗೂಡು: ರಾಜ್ಯಸಭೆ ಸದನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿದ್ದಾರೆ ಎಂದು ಆರೋಪಿಸಿ ನಂಜನಗೂಡು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಶುಕ್ರವಾರ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ನಗರದ ಹುಲ್ಲಹಳ್ಳಿ ವೃತ್ತದಲ್ಲಿ ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿ, ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಅಮಿತ್ ಷಾ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವ ವಹಿಸಿದ್ದರು. ತಹಸೀಲ್ದಾರ್ ಮಹೇಶ್ ಪಾಟೀಲ್ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ಪಟ್ಟಣ ಅಧ್ಯಕ್ಷ ಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಯುವ ಮುಖಂಡ ಬಾಲರಾಜು, ಕವಲಂದೆ ರಾಹುಲ್, ಮಹದೇವಸ್ವಾಮಿ, ಮುಳ್ಳೂರು ನವೀನ್, ಮಾರುತಿ, ನಗರಸಭೆ ಸದಸ್ಯರಾದ ಗಾಯತ್ರಿ, ಮಹೇಶ್, ಪ್ರದೀಪ್, ಯೂತ್ ಅಧ್ಯಕ್ಷ ದೇಬೂರು ಅಶೋಕ, ನಗರಸಭೆ ಮಾಜಿ ಸದಸ್ಯರಾದ ದೊರೆಸ್ವಾಮಿ, ರಾಮಕೃಷ್ಣ, ಮುಖಂಡರಾದ ಶ್ರೀನಿವಾಸ್, ವಿಜಯ್ ಕುಮಾರ್, ಮಂಜು, ಶಿವಪ್ಪ ದೇವರು, ಅಕ್ಬರ್, ಪಾಂಡು, ಚೆಲುವರಾಜ್, ಗೋವಿಂದರಾಜ್ ಇತರರು ಇದ್ದರು.