ಬೆಳಗಾವಿ : ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಎಲ್ಲ ಕ್ಷೇತ್ರಗಳಲ್ಲೂ ಕೊನೆ ಕಸರತ್ತು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರಿಗೆ ವಿವಿಧ ಆಮಿಶವೊಡ್ಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ -ಮಹಾರಾಷ್ಟ್ರ -ಗೋವಾ ಗಡಿಭಾಗದಲ್ಲಿ ಚುನಾವಣಾಧಿಕಾರಿಗಳು ಅಕ್ರಮ ಸಾಗಾಟದ ಕುರಿತು ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಬಹುದೊಡ್ಡ ಜಿಲ್ಲೆ ಹಾಗೂ ಹೆಚ್ಚಿನ ವಿಧಾನ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಹಣ ಹಾಗೂ ಸಾಮಗ್ರಿಗಳ ಸಾಗಾಟ ತಡೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಶೇಷ ನಿಗಾ ಇರಿಸಿದೆ. ಬುಧವಾರ ಮತದಾನ ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಮೂಲಕ ಯಾವುದೇ ಬಸ್, ಟೆಂಪೂ, ಗೂಡ್ಸ್, ಕಾರು-ಬೈಕ್ಗಳನ್ನು ತಪ್ಪದೇ ಕಡ್ಡಾಯವಾಗಿ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತಿದೆ.
ಮಂಗಳವಾರ ಮಹಾರಾಷ್ಟ್ರದಿಂದ ಮಾಂಜರಿಗೆ ಹೊರಟಿದ್ದ ವ್ಯಕ್ತಿ ಅಕ್ರಮವಾಗಿ ಸಾಗಿರುತ್ತಿದ್ದ 15 ಲಕ್ಷ ರೂ. ನಗದನ್ನು ಚಿಕ್ಕೋಡಿ ಚೆಕ್ಪೋಸ್ಟ್ನಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪ್ರಕರಣ ಹಸ್ತಾಂತರಿಸಿ, ಕಾರ್ಯಾಚರಣೆ ಮುಂದುವರಿಸಿಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.
ಇನ್ನು ಮಹಾರಾಷ್ಟ್ರದ ಗಡಿ ಭಾಗದ ನಿಪ್ಪಾಣಿ, ಕೊಗನೊಳ್ಳಿ, ಕಾಗವಾಡ ಹಾಗೂ ಕರ್ನಾಟಕ ಗೋವಾ ಗಡಿಯ ಕಣಕುಂಬಿ ಸೇರಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಡಿ ಜಂಟಿಯಾಗಿ 58 ಚೆಕ್ಪೋಸ್ಟ್ಗಳ ಸ್ಥಾಪನೆ ಮಾಡಲಾಗಿದ್ದು. 24 ಅಂತಾರಾರಾಜ್ಯ ಚೆಕ್ಪೋಸ್ಟ್, 22 ಅಂತರ್ಜಿಲ್ಲಾ ಚೆಕ್ಪೋಸ್ಟ್ ಹಾಗೂ ಜಿಲ್ಲೆಯೊಳಗೆ 12 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ.
ಪ್ರತಿ ಚೆಕ್ಪೋಸ್ಟ್ನಲ್ಲಿ ಸಶಸ್ತ್ರ ಸೀಮಾ ಬಲ, ಪೊಲೀಸ್, ಕಂದಾಯ ಇಲಾಖೆ, ಅಬಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ಪಕ್ಕದ ಗೋವಾ-ಮಹಾರಾಷ್ಟ್ರ ರಾಜ್ಯದ ಮುಖಂಡರು ಹಾಗೂ ಕಾರ್ಯಕರ್ತರ ಮೂಲಕವೂ ಮತದಾರರಿಗೆ ಆಮಿಷವೊಡ್ಡುವ ಸಾಧ್ಯತೆಯಿಂದಾಗಿ ಗಡಿಯಲ್ಲಿ ಎಲ್ಲ ಚೆಕ್ಪೋಸ್ಟ್ಗಳಲ್ಲಿ ಹೆಚ್ಚಿನ ನಿಗಾವಹಿಸಿ, ಅಕ್ರಮಕ್ಕೆ ಬ್ರೆಕ್ ಹಾಕಲಾಗುತ್ತಿದೆ.