More

    ಹೇಮಾವತಿ ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ

    ತಿಪಟೂರು: ಈ ಹಿಂದೆ ನಿರ್ಮಿಸಿದ್ದ ನಾಲೆ ಸಮರ್ಪಕವಾಗಿರದ ಕಾರಣ ಜಿಲ್ಲೆ ಪಾಲಿನ 25.3 ಟಿಎಂಸಿ ನೀರು ಸದ್ಬಳಕೆಯಾಗಲಿಲ್ಲ. ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ನಾಗರಘಟ್ಟ ಬಳಿ ಜಲ ಸಂಪನ್ಮೂಲ ಇಲಾಖೆಯ ಹೇಮಾವತಿ ಜಲಾಶಯ ಯೋಜನೆ, ಗೊರೂರು, ಹೇಮಾವತಿ ನಾಲಾ ವಲಯ ತುಮಕೂರು ವತಿಯಿಂದ ವೈ ನಾಲೆ 15.727 ರಿಂದ 21.175 ಕಿ.ಮೀ.ವರೆಗೆ ಹಾಗೂ ತುಮಕೂರು ಶಾಖಾ ನಾಲೆ 70 ಕಿ.ಮೀ ವರೆಗೆ ನಾಲೆಯ ಆಧುನೀಕರಣ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

    ಬಿಜೆಪಿ ಸರ್ಕಾರ ಬಂದರೂ ಹಣಕಾಸಿನ ತೊಂದರೆಯಿಂದ 250 ಕೋಟಿ ರೂಪಾಯಿಗಿಂತ ಹೆಚ್ಚಿನ ಟೆಂಡರ್ ಮಂಜೂರು ಮಾಡಲು ಸಾಧ್ಯವಿಲ್ಲ, ಕೊನೆಗೂ ಮುಖ್ಯಮಂತ್ರಿಯನ್ನು ಒಪ್ಪಿಸಿ ಏಕಕಾಲಕ್ಕೆ 475 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು. 70 ಕಿ.ಮೀ.ಉದ್ದದ ನಾಲೆ ಆಧುನೀಕರಣ ಕಾಮಗಾರಿ ಎರಡ್ಮೂರು ತಿಂಗಳಲ್ಲಿ ಮುಗಿಯಲಿದೆ. ಕಳೆದ ವರ್ಷ ನಮ್ಮ ಪಾಲಿನ 7.8 ಟಿಎಂಸಿ ನೀರು ಬಾಕಿ ಇದ್ದು, ನಾಲೆಯ ಕೆಲಸದ ಬಿಡುವಿನ ಅವಧಿಯಲ್ಲಿ ಮತ್ತೊಮ್ಮೆಏಪ್ರಿಲ್-ಮೇನಲ್ಲಿ ಉಳಿತಾಯದ ನೀರನ್ನು ಬಳಸಲು ಅನುಮತಿ ನೀಡಬೇಕು ಎಂದು ನೀರಾವರಿ ಇಲಾಖೆಯ ಎಂಡಿ ಜಗದೀಶ್‌ಗೆ ಸೂಚಿಸಿದರು.

    ಮುಂದಿನ ದಿನಗಳಲ್ಲಿ ನಾಲೆಯಲ್ಲಿ ಹಾಲಿ ಹರಿಯುತ್ತಿದ್ದ 700 ಕ್ಯೂಸೆಕ್ ನೀರಿಗೆ ಬದಲಾಗಿ 1600ಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯಲಿರುವ ಕಾರಣ ಹೆಚ್ಚು ಕೆರೆಗಳು ಭರ್ತಿಯಾಗಲಿವೆ ಎಂದರು. ನಾಲೆಯಲ್ಲಿ ವ್ಯರ್ಥವಾಗುವ ನೀರನ್ನು ಬೇರೆ ಮಾರ್ಗದಿಂದ ಹರಿಸುವ ಪ್ರಯತ್ನ ಮಾಡಿದ್ದರೆ ಶಿರಾ, ಗುಬ್ಬಿ ಕಡಬ, ಸಿಎಸ್ ಪುರ ಭಾಗದ ಕೆರೆಗಳು ತುಂಬಲು ಸಾಧ್ಯವಾಗುತ್ತಿತ್ತು, ಇದಕ್ಕೆ ಶಾಶ್ವತ ಪರಿಹಾರವಾಗಿ ತುರುವೇಕೆರೆ, ಮಾರ್ಕೋನಹಳ್ಳಿ, ನಾಗಮಂಗಲ ತಾಲೂಕಿನ ಕೆರೆಗಳು ಭರ್ತಿಯಾದ ನಂತರ ನೀರು ನಿಲ್ಲಿಸಿ, ಇತರ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ಆಗಬೇಕು, ಇದಕ್ಕಾಗಿ ಅಣೆ, ನಿರ್ಮಿಸಿ, ಅಥವಾ ಏತ ನೀರಾವರಿ ಯೋಜನೆ ರೂಪಿಸಿ ಎಂದರು.

    2 ಕೆರೆ ತುಂಬಿಸುವ ಸಲುವಾಗಿ 10 ಕೆರೆಗಳಿಗಾಗುವಷ್ಟು ನೀರು ವ್ಯರ್ಥವಾಗಲು ಬಿಡಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಶಾಸಕರಾದ ಬಿ.ಸಿ.ನಾಗೇಶ್, ಶಾಸಕ ಮಸಾಲ ಜಯರಾಂ, ತಾಪಂ ಸದಸ್ಯೆ ಕಾವ್ಯಾ, ನಾಗರಘಟ್ಟ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ, ಕಾವೇರಿ ನೀರಾವರಿ ನಿಗಮದ ಎಂಡಿ ಕೆ.ಜಯಪ್ರಕಾಶ್, ಹೇಮಾವತಿ ನಾಲಾ ವಲಯದ ಮುಖ್ಯ ಇಂಜಿನಿಯರ್ ಕೆ.ಬಾಲಕೃಷ್ಣ ಇದ್ದರು.

    ನೀರು ಸಮುದ್ರ ಪಾಲು: ಸಮುದ್ರಕ್ಕೆ ಹೋಗುವ 2 ಸಾವಿರ ಟಿಎಂಸಿ ನೀರು ರಾಜ್ಯದಲ್ಲೇ ಹುಟ್ಟಿ ಸಮುದ್ರಕ್ಕೆ ಹೋಗುತ್ತಿದೆ. ಕೊನೇ ಘಟ್ಟದಲ್ಲಿ 2,3 ಕಿ.ಮೀ ದೂರದಲ್ಲಿ ವ್ಯವಸ್ಥಿತ ಯೋಜನೆ ರೂಪಿಸಿದರೆ ಅಲ್ಲಿಂದ 100-150 ಟಿಎಂಸಿ ನೀರು ಪಡೆದು ಹಳೇ ಮೈಸೂರು, ಬೆಂಗಳೂರು ಭಾಗಕ್ಕೆ ಕೊಟ್ಟರೆ 14 ಸಾವಿರ ಕೆರೆ ತುಂಬಲಿವೆ.

    (ನೇತ್ರಾವತಿ , ಕುಮಾರಧಾರ) ನದಿಯಿಂದ ಬೇಸಿಗೆಯಲ್ಲಿ ಶರಾವತಿ ನೀರನ್ನು ಡೈವರ್ಟ್ ಮಾಡಿ ಅಪ್ಪರ್ ಭದ್ರಾ ನಾಲೆಗೆ ತಂದು ತಾಲೂಕಿನ ಕೊನೇಹಳ್ಳಿವರೆಗೆ ಲಿಫ್ಟ್ ಮಾಡಿ ಎತ್ತಿನಹೊಳೆ ನಾಲೆಗೆ ಲಿಂಕ್ ಮಾಡಿದರೆ ಬೇಸಿಗೆಯಲ್ಲೂ ಸಮೃದ್ಧ ನೀರು ಲಭ್ಯವಾಗಲಿದೆ, ಇದಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

    ಹೇಮಾವತಿ, ನೇತ್ರಾವತಿ ತಿರುವು, ಎತ್ತಿನಹೊಳೆ, ಕುಮಾರ ಧಾರದಿಂದ ಗ್ರಾವಿಟಿ ಮೂಲಕ 6 ಟಿಎಂಸಿ ನೀರು ದಕ್ಕಿದರೆ ಅರಸೀಕೆರೆ, ತಿಪಟೂರು, ಗುಬ್ಬಿ, ಮಧುಗಿರಿ, ಶಿರಾ, ಕೊರಟಗೆರೆಗೆ ಇನ್ನೂ ಹೆಚ್ಚಿನ ನೀರು ಲಭ್ಯವಾಗಲಿದೆ. ಈ ಯೋಜನೆಯನ್ನು ಸಿಎಂ ಗಮನಕ್ಕೆ ತರಲಾಗುವುದು ಎಂದರು.

    ಕಳೆದ ಸಾರಿ ನಿರ್ಮಿಸಲಾದ ನಾಲೆಯಲ್ಲಿ ಲೈನಿಂಗ್ ಕಡಿಮೆ ಇದೆ ಎಂದು ಕೇಳಿದರೆ ಕೊಚ್ಚಿ ಹೋಗಿದೆ ಎಂಬ ಸಬೂಬು ಹೇಳಿಸಲಾಗಿತ್ತು. ಈ ಸಾರಿ ಈಗಾಗಲು ಬಿಡಲ್ಲ. ನೀರು ಹರಿಯುವಾಗ ಸಣ್ಣಪುಟ್ಟ ಕೆರೆ-ಕಟ್ಟೆ ತುಂಬಿಸಿಕೊಳ್ಳಲು ಅವಕಾಶ ನೀಡಿ, ಮಾನವೀಯತೆಗಿಂತ ದೊಡ್ಡ ಕಾನೂನು ಯಾರೂ ರಚಿಸಲು ಸಾಧ್ಯವಿಲ್ಲ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts