ಚಿತ್ರ: ಹೆಬ್ಬುಲಿ ಕಟ್
ನಿರ್ದೇಶನ: ಪಿ. ಭೀಮ್ರಾವ್
ನಿರ್ಮಾಣ: ಸಾರಾ ಫಿಲಂಸ್
ತಾರಾಗಣ: ಮೌನೇಶ್ ನಟರಂಗ, ಅನನ್ಯಾ ಎಂ.ಕೆ., ಮಹಾದೇವ ಹಡಪದ, ಉಮಾ ವೈ.ಜಿ., ಮಹಾಂತೇಶ್ ಹಿರೇಮಠ, ವಿನಯ್ ಮಹಾದೇವ್, ಪುನೀತ್ ಶೆಟ್ಟಿ.
ಶಿವ ಸ್ಥಾವರಮಠ
ಪ್ರೇಕ್ಷಕರನ್ನು ಭರಪೂರ ರಂಜಿಸುವ ಅಂಶಗಳು ಇಲ್ಲಿವೆ. ಹಾಗೆಯೇ ಕಾಡುವ ತಣ್ಣನೆಯ ವಿಷಾದವೂ ಇದೆ. ಕೊನೆಗೊಂದು ಸಂದೇಶದ ಮೂಲಕ ವಿವೇಕ ಮೂಡಿಸುವಂತಹ ಪ್ರಜ್ಞೆ ಈ ಕಥೆಯಲ್ಲಿದೆ. ಹಾಗಾಗಿ, ‘ಹೆಬ್ಬುಲಿ ಕಟ್’ ಒಂದು ಕೃತಿಯಾಗಿ ಪ್ರೇಕ್ಷಕರನ್ನು ಕಾಡದೇ ಇರದು. ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕದ ಜನ-ಜೀವನ, ಯುವಕರ ಆಕರ್ಷಣೆ ಹಾಗೂ ಗಂಭೀರ ಸಾಮಾಜಿಕ ಪರಿಸ್ಥಿತಿಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ.
ನವ ತರುಣ ವಿನ್ಯಾ ಆಲಿಯಾಸ್ ವಿನಯ್ಗೆ (ಮೌನೇಶ್) ಸಹಪಾಠಿ ರೇಖಾ (ಅನನ್ಯಾ) ಮೇಲೆ ಕ್ರಶ್ ಆಗುತ್ತದೆ. ಆಕೆಯನ್ನು ಮೆಚ್ಚಿಸಲು ಅವಳ ಫೇವರಿಟ್ ಹೀರೋ ಸುದೀಪ್ ತರ ಹೇರ್ ಕಟ್ ಮಾಡಿಸಿಕೊಳ್ಳಲು ಆತ ಹೇಗೆಲ್ಲಾ ಹೆಣಗಾಡುತ್ತಾನೆ ಎಂಬುದೇ ಒನ್ಲೈನ್ ಸ್ಟೋರಿ. ಆಕರ್ಷಣೆಗೆ ಒಳಗಾದ ನವತರುಣನ ಒದ್ದಾಟಗಳು, ಯಾತನೆಯ ಜತೆ ಜತೆಗೆ ಆತ ಎದುರಿಸುವ ಸಾಮಾಜಿಕ ಪರಿಸ್ಥಿತಿಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಂತಹ ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹಾಗೂ ಕಲಾತ್ಮಕವಾಗಿ ನಿರ್ದೇಶಕ ಭೀಮರಾವ್ ಹೆಣದಿದ್ದು, ಅವರ ಶ್ರಮ ಎದ್ದು ಕಾಣುತ್ತದೆ. ಪ್ರತಿ ದೃಶ್ಯಗಳು ನೈಜವಾಗಿ ಚಿತ್ರಿತವಾಗಿದ್ದು, ಯಾವುದೂ ಕೃತಕ ಎನಿಸುವುದಿಲ್ಲ. ತಿಳಿಹಾಸ್ಯ, ಗ್ರಾಮೀಣ ಸೊಗಡಿನ ಜವಾರಿ ಸಂಭಾಷಣೆ ಹಾಗೂ ಪಾತ್ರಗಳ ಮನೋಜ್ಞ ಅಭಿನಯ ಇಡೀ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಎಲ್ಲಿಯೂ ಕಥೆಯ ಹಾದಿ ತಪ್ಪದಂತೆ ಎಚ್ಚರ ವಹಿಸಿದ್ದು, ತಾವು ಹೇಳಿಬೇಕಿರುವ ವಿಚಾರವನ್ನು ಒಂದೇ ಹಾದಿಯಲ್ಲಿ ಹೇಳಿ ಮುಗಿಸಿದ್ದಾರೆ ಭೀಮರಾವ್. ಮೊದಲರ್ಧ ನಗಿಸಿದರೆ, ದ್ವಿತೀಯಾರ್ಧ ಚಿಂತನೆಗೆ ಹಚ್ಚುತ್ತದೆ. ಅದರಲ್ಲೂ ಕ್ಲೈಮ್ಯಾಕ್ಸ್ ಹೆಚ್ಚು ಕಾಡುತ್ತದೆ. ಅಂತಹ ಮಾರ್ಮಿಕ ಸಂದೇಶ ಅದರಲ್ಲಿದೆ. ಅದೇನು ಅಂತ ತಿಳಿಯಬೇಕಾದರೆ, ನೀವು ‘ಹೆಬ್ಬುಲಿ ಕಟ್’ ನೋಡಲೇಬೇಕು.
ಕಥಾ ನಾಯಕ ಮೌನೇಶ್ ನಟನೆಯ ಮೂಲಕ ಭರವಸೆ ಮೂಡಿಸುತ್ತಾರೆ. ಮುಗ್ಧನಾಗಿ, ಆಕರ್ಷಣೆಗೊಳಗಾದ ಜವಾರಿ ಹುಡುಗನಂತೆ ಕಾಣಿಸುತ್ತಾರೆ. ಅನನ್ಯಾ ಮಾತು ಕಡಿಮೆ, ‘ನೋಟ ಜಾಸ್ತಿ’. ಮಹಾದೇವ ಹಡಪದ ಕಣ್ಣಿನಲ್ಲಿಯೇ ಅಳು, ಮರುಕ ಹಾಗೂ ಆಕ್ರೋಶ ವ್ಯಕ್ತಪಡಿಸುತ್ತಾರೆ. ಉಮಾ, ಪುನೀತ್, ಮಹಾಂತೇಶ ಹಿರೇಮಠ ನಟನೆ ಸಹಜವಾಗಿ ಮೂಡಿಬಂದಿದೆ. ವಿನಯ್ ಮಹಾದೇವ್ ಗತ್ತು, ಗೈರತ್ತು ಎಲ್ಲರಲ್ಲೂ ಕಿಚ್ಚು ಎಬ್ಬಿಸದೆ ಬಿಡದು. ಇಡೀ ಚಿತ್ರವನ್ನು ದೀಪಕ್ ಯರಗೇರಾ ಕ್ಯಾಮರಾದಲ್ಲಿ ನಿಚ್ಚಳವಾಗಿ ತೋರಿಸಿದ್ದಾರೆ. ನವನೀತ್ ಶ್ಯಾಮ್ ಸಂಗೀತ ಕಥೆಗೆ ಪೂರಕವಾಗಿದ್ದು, ಇಷ್ಟವಾಗುತ್ತದೆ. ಕನ್ನಡದಲ್ಲಿ ಒಂದು ವಿಷಯಾಧಾರಿತ ಹಾಗೂ ಮನರಂಜನೆಯ ಚಿತ್ರವಾಗಿ ‘ಹೆಬ್ಬುಲಿ ಕಟ್’ ನಿಲ್ಲುತ್ತದೆ.
ರೇಟಿಂಗ್: 3.5