ನವದೆಹಲಿ: ಇಲ್ಲಿನ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ ಭಾನುವಾರ 50 ಜನರ ಗುಂಪೊಂದು ನುಗ್ಗಿ ವಿದ್ಯಾರ್ಥಿಗಳು, ಉಪನ್ಯಾಸಕರ ಮೇಲೆ ಹಲ್ಲೆ ನಡೆಸಿದ್ದು ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ.
ಇಂದು ಜೆಎನ್ಯು ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಸರಿಯಾದ ಐಡಿ ಕಾರ್ಡ್ ಹೊಂದಿರುವ ವಿದ್ಯಾರ್ಥಿಗಳನ್ನು ಮಾತ್ರ ಕ್ಯಾಂಪಸ್ ಒಳಗೆ ಬಿಡಲಾಗುತ್ತಿದೆ. ಹಾಸ್ಟೆಲ್, ವಿವಿ ಆಡಳಿತ ಮಂಡಳಿ ಕಚೇರಿ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಕ್ಯಾಂಪಸ್ ಒಳಗೆ ಮಾಧ್ಯಮ ಸಿಬ್ಬಂದಿ ಪ್ರವೇಶವನ್ನ ನಿಷೇಧಿಸಲಾಗಿದೆ.
ಜೆಎನ್ಯು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಮುಂಬೈನ ಗೇಟ್ವೇ ಆಫ್ ಇಂಡಿಯಾ ಬಳಿ ನಿನ್ನೆ ಮಧ್ಯರಾತ್ರಿ ಶುರುವಾದ ದಿಢೀರ್ ಪ್ರತಿಭಟನೆ ಇಂದು ಬೆಳಗ್ಗೆ ಕೂಡ ಮುಂದುವರಿದಿದೆ. ಪುಣೆಯ ಎಫ್ಟಿಐಐ ಕ್ಯಾಂಪಸ್ನಲ್ಲೂ ಪ್ರತಿಭಟನೆ ನಡೆಸಲಾಗುತ್ತಿದೆ. ಕೈಯಲ್ಲಿ ರಾಷ್ಟ್ರಧ್ವಜ, ಬ್ಯಾನರ್ಗಳು, ಕ್ಯಾಂಡಲ್ಗಳನ್ನು ಹಿಡಿದ ಪ್ರತಿಭಟನಾಕಾರರು ಜೆಎನ್ಯು ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದಾರೆ.
ಈ ಮಧ್ಯೆ ಜೆಎನ್ಯು ಉಪಕುಲಪತಿ ಎಂ.ಜಗದೀಶ್ ಕುಮಾರ್ ಅವರು ವಿದ್ಯಾರ್ಥಿಗಳು ಶಾಂತಿಯಿಂದ ಇರಬೇಕು ಎಂದು ಹೇಳಿದ್ದಾರೆ. ವಿವಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಾವು ಕಾಳಜಿ ವಹಿಸುತ್ತೇವೆ. ಸೆಮಿಸ್ಟರ್ಗಳೂ ಯಾವುದೇ ಅಡಚಣೆಯಿಲ್ಲದೆ ನಡೆಯುತ್ತವೆ. ನಮ್ಮ ವಿದ್ಯಾರ್ಥಿಗಳ ಶೈಕ್ಷಣಿಕ ಆಸಕ್ತಿ ರಕ್ಷಣೆಯೇ ವಿವಿಯ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ಜೆಎನ್ಯುಗೆ ನುಗ್ಗಿದ ಉದ್ರಿಕ್ತರ ಗುಂಪಿನಿಂದ ಹಲ್ಲೆ; ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಗಾಯ